ಕುಂದಾಪುರ: ಜೇನು ನೋಣಗಳು ಏಕಾಏಕಿ ದಾಳಿ ನಡೆಸಿದ ಪರಿಣಾಮ ಓರ್ವ ತೀವ್ರವಾಗಿ ಗಾಯಗೊಂಡಿರುವ ಘಟನೆ ನಾಯಕವಾಡಿ ಎಂಬಲ್ಲಿ ನಡೆದಿದೆ.
ನಾಯಕವಾಡಿ-ಮುಳ್ಳಿಕಟ್ಟೆ ರಸ್ತೆಯಲ್ಲಿರುವ ಸಿಂಧೂರ್ ಐಸ್ ಪ್ಲಾಂಟ್ ಬಳಿಯಲ್ಲಿರುವ ರಸ್ತೆಯ ಸಮೀಪ ಮರವೊಂದರ ಮೇಲೆ ದೊಡ್ಡ ಗಾತ್ರದ ಜೇನು ಗೂಡು ಬೆಳೆದಿದೆ.
ಈ ರಸ್ತೆಯ ಮೂಲಕ ಸಾಗುತ್ತಿದ್ದ ಯಾವುದೇ ವಾಹನ ಜೇನುಗೂಡು ಇದ್ದ ಮರಕ್ಕೆ ತಾಗಿದ ಪರಿಣಾಮ ಜೇನು ನೋಣಗಳು ಹೊರಬಂದು ಇದೇ ದಾರಿಯಲ್ಲಿ ಬೈಕಿನಲ್ಲಿ ಕುಂದಾಪುರದ ಕಡೆಗೆ ಸಾಗುತ್ತಿದ್ದ ಗಂಗೊಳ್ಳಿ ಸುಲ್ತಾನ್ ಮೊಹಲ್ಲಾ ನಿವಾಸಿ ಸಿದ್ಧಿಕ್ ಎಂಬುವರ ಮೇಲೆ ದಾಳಿ ನಡೆಸಿದೆ. ಪರಿಣಾಮ ಇವರು ಬೈಕಿನಿಂದ ಬಿದ್ದು ಜೇನು ನೋಣಗಳ ಕಡಿತದಿಂದ ಗಂಭೀರವಾಗಿ ಗಾಯಗೊಂಡಿದ್ದರು. ಇದೇ ವೇಳೆ ಕುಂದಾಪುರದಿಂದ ಈ ಮಾರ್ಗವಾಗಿ ರಿಕ್ಷಾದಲ್ಲಿ ಬರುತ್ತಿದ್ದ ಗಂಗೊಳ್ಳಿಯ ಫಯಾಜ್ ಮತ್ತು ಶಾವುಲ್ ಹಮೀದ್ ಎಂಬುವರು ಗಾಯಗೊಂಡವರನ್ನು ರಕ್ಷಿಸಲು ಹೋದ ಸಂದರ್ಭ ಇವರಿಗೂ ಜೇನು ನೋಣ ಕಡಿದಿದೆ.
ಆ ಕೂಡಲೇ ಗಂಭೀರವಾಗಿ ಗಾಯಗೊಂಡಿದ್ದ ಸಿದ್ಧಿಕ್ ಎಂಬುವರನ್ನು ಗಂಗೊಳ್ಳಿಗೆ ಕರೆ ತಂದು ಬಳಿಕ ಕುಂದಾಪುರ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನಿಬ್ಬರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.