ಮಂಗಳೂರು,ಅ.15: ಐದು ತಿಂಗಳ ಹಿಂದೆ ಸಂಭವಿಸಿದ ಬೈಕಂಪಾಡಿಯ ಹದಿನಾಲ್ಕು ಪಟ್ಣ ಮೋಗವೀರ ಸಂಯುಕ್ತ ಸಭಾದ ಕ್ರೀಯಾಶೀಲ ಸಲಹೆಗಾರ ಗಂಗಾಧರ್ ಪಾಂಗಲ್ ಅವರ ಹತ್ಯೆಯ ಪ್ರಮುಖ ಅರೋಪಿ ಸತೀಶ್ ಬೈಕಂಪಾಡಿಯ ಶೀಘ್ರ ಬಂಧನಕ್ಕೆ ಅಗ್ರಹಿಸಿ ಮಂಗಳೂರು ಹದಿನಾಲ್ಕು ಪಟ್ಣ ಮೋಗವೀರ ಸಂಯುಕ್ತ ಸಭಾದ ವತಿಯಿಂದ ಬುಧವಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಛೇರಿ ಎದುರು ಬೃಹತ್ ಪ್ರತಿಭಟನೆ ಮತ್ತು ಧರಣಿ ಸತ್ಯಾಗ್ರಹ ನಡೆಯಿತು.
ಗಂಗಾಧರ್ 14.05.2014 ರಂದು ಬೈಕಂಪಾಡಿ ಬಳಿ ಮೀನಕಳಿಯಲ್ಲಿ ಅಪಘಾತ ಮಾಡುವ ಮೂಲಕ ಹತ್ಯೆಗೈಯಲಾಯಿತ್ತು. ಈ ಪ್ರಕರಣದ ಮೂವರು ಅರೋಪಿಯಗಳನ್ನು ಈಗಾಗಲೇ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಆದರೆ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸತೀಶ್ ಬೈಕಂಪಾಡಿಯನ್ನು ಇದುವರೆಗೆ ಬಂಧಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಪ್ರತಿಭಟನೆಕಾರರು ಆರೋಪಿಸಿದ್ದಾರೆ.
ಮಂಗಳೂರು ಏಳು ಪಟ್ಣ ಮೊಗವೀರ ಸಭಾದ ಅಧ್ಯಕ್ಷ ಯಶವಂತ ಮೆಂಡನ್, ಹದಿನಾಲ್ಕು ಪಟ್ಣ ಮೊಗವೀರ ಸಂಯುಕ್ತ ಸಭಾದ ಅಧ್ಯಕ್ಷ ರಾಜೀವ್ ಕಾಂಚನ್, ವಕೀಲ ಹಾಗೂ ಹೊಸಬೆಟ್ಟು ಮೊಗವೀರ ಸಭಾದ ಅಧ್ಯಕ್ಷ ಗಂಗಾಧರ ಎಚ್., ಚಂದ್ರಹಾಸ ಗುರಿಕಾರ ಕೂಳೂರು, ವಾಸುದೇವ ಸಾಲ್ಯಾನ್ ಅವರು ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ಮೊಗವೀರ ಸಮಾಜದ ಮುಂದಾಳು ಹಾಗೂ ಬೈಕಂಪಾಡಿ ಗ್ರಾಮ ಸಾಮಾಜಿಕ ಕಾರ್ಯಕರ್ತ, ಮೊಗವೀರ ಸಂಯುಕ್ತ ಸಭಾದ ಸಕ್ರಿಯ ಕಾರ್ಯಕರ್ತ, ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದ ಮೊಕ್ತೇಸರರಾಗಿದ್ದ ಗಂಗಾಧರ ಪಾಂಗಲ್ ಅವರನ್ನು ಕಳೆದ ಮೇ 14 ರಂದು ರಾತ್ರಿ ವಾಹನ ಅಪಘಾತವಾಗುವಂತೆ ಮಾಡಿ ಬೈಕಂಪಾಡಿಯಲ್ಲಿ ಅಮಾನುಷವಾಗಿ ಕೊಲೆ ಮಾಡಲಾಗಿತ್ತು. ಘಟನೆಗೆ ಸಂಬಂಧಿಸಿ ಭಾಸ್ಕರ ಬೈಕಂಪಾಡಿ, ಹರೀಶ್ ಬೈಕಂಪಾಡಿ ಮತ್ತು ಪುಷ್ಪರಾಜ್ ಎಂಬ ಮೂವರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು, ಮುಖ್ಯ ಆರೋಪಿ ಸತೀಶ್ ಬೈಕಂಪಾಡಿ ಮಾತ್ರ ಇದುವರೆಗೆ ಪತ್ತೆಯಾಗಿಲ್ಲ. ಆತನ ಬಂಧನಕ್ಕೆ ಆಗ್ರಹಿಸಿ ಜೂ. 6 ರಂದು ಶಾಂತಿಯುತ ಮೆರವಣಿಗೆ ಮತ್ತು ಮೌನ ಪ್ರತಿಭಟನೆ ನಡೆಸಿದ್ದರೂ ಇದುವರೆಗೆ ಕಳೆದ 5 ತಿಂಗಳಲ್ಲಿ ಯಾವುದೇ ಪ್ರಗತಿ ಆಗಿಲ್ಲ. ಆತನ ಬಂಧನವಾಗದಂತೆ ಪ್ರಯತ್ನಿಸುತಿರುವ ಕೆಲವರ ಜತೆ ಪೊಲೀಸರು ಕೂಡಾ ಶಾಮೀಲಾಗಿದ್ದಾರೆಯೇ ಎಂಬ ಸಂಶಯ ಉಂಟಾಗುತ್ತಿದೆ ಎಂದು ರಾಜೀವ್ ಕಾಂಚನ್ ಹೇಳಿದರು.
ಸತೀಶ್ ಬೈಕಂಪಾಡಿ ಬಂಧನಕ್ಕೆ ಪೊಲೀಸರು ತನಿಖೆಯನ್ನು ತೀವ್ರಗೊಳಿಸ ಬೇಕೆಂದು ಆಗ್ರಹಿಸಿದ ಅವರು ಅತಿ ಶೀಘ್ರದಲ್ಲಿ ಬಂಧಿಸಲು ಕ್ರಮ ಜರಗಿಸದಿದ್ದರೆ ದ.ಕ. ಜಿಲ್ಲಾ ಬಂದ್ಗೆ ಕರೆ ನೀಡುವ ಅನಿವಾರ್ಯತೆ ಬರ ಬಹುದು ಎಂದರು. ಬೈಕಂಪಾಡಿ ಮೊಗವೀರ ಸಭಾದ ವಸಂತ ಅಮೀನ್ ಕಾರ್ಯಕ್ರಮ ನಿರ್ವಹಿಸಿದರು.