ಬಹರೈನ್ : ಶ್ರೀ ವಿಶ್ವಕರ್ಮ ಸೇವಾ ಬಳಗ, ಬಹರೈನ್ ಆಯೋಜಿಸಿದ್ದ 5 ನೇ ವಿಶ್ವಕರ್ಮ ಪೂಜಾ ಮಹೋತ್ಸವವು ಶುಕ್ರವಾರ ಬಹಳ ವಿಜೃಂಭಣೆಯಿಂದ ಜರಗಿತು. ಮನಾಮದಲ್ಲಿರುವ ಕರ್ನಾಟಕ ಸೋಶಿಯಲ್ ಕ್ಲಬ್ ನ ಸಭಾಂಗಣದಲ್ಲಿ ಸೆರೆವೇರಿದ ಈ ಸಂಭ್ರಮದ ಪೂಜಾ ಸಮಾರಂಭ ಪ್ರಖ್ಯಾತ ಜ್ಯೋತಿಷಿ, ವಿಶ್ವ ವಿಖ್ಯಾತ ವಾಸ್ತುಶಾಸ್ತ್ರ ಪ್ರವೀಣ ಮತ್ತು ಅನರ್ಘ್ಯರತ್ನ ತಜ್ಞ ಅಶೋಕ್ ಪುರೋಹಿತ್, ಮುಂಬಯಿ ಇವರ ಪೌರೋಹಿತ್ಯದಲ್ಲಿ ನೆರೆವೇರಿತು.
ಪ್ರತೀ ವರ್ಷದಂತೆ ಈ ಬಾರಿ ಕೂಡಾ ಅಶೋಕ್ ಪುರೋಹಿತ್ ರವರ ದಕ್ಷ ಮಾರ್ಗದರ್ಶನದಲ್ಲಿ ಅತ್ಯಂತ ಸುಂದರವಾದ, ವಿಭಿನ್ನಶೈಲಿಯ ಪುಪ್ಪಾಲಂಕೃತ ಮಟಂಪದ ವೇದಿಕೆಯಲ್ಲಿ, ಬೆಳಗ್ಗೆ ಗಂಟೆ 9.30 ಕ್ಕೆ ಕಲಶ ಪ್ರತಿಷ್ಠೆಯೋಂದಿಗೆ ಪ್ರಾರಂಭಗೊಂಡು, ಬಳಗದ ಮಹಿಳೆಯರಿಂದ ವಿಶ್ವಕರ್ಮ, ಶ್ರೀ ಕಾಳಿಕಾಂಬಾ ಸ್ತೋತ್ರ ಹಾಗೂ ಶ್ರೀ ಲಲಿತಾಸಹಸ್ರನಾಮಾವಳಿ ಸ್ತೋತ್ರ ಪಠಣೆ ನಡೆಯಿತು. ಸಂಗೀತ ಶಿಕ್ಷಕ ಶ್ರೀ ಬಿನು ಮಾಧವನ್ ರವರ ಹಾರ್ಮೋನಿಯಮ್ ಮತ್ತು ಪ್ರದೀಪ್ ಕಾರ್ಕಳ ಇವರ ತಬಲಾ ವಾದನದ ಹಿಮ್ಮೇಳದೊಂದಿಗೆ ಬಳಗದ ಉತ್ಸಾಹೀ ಸದಸ್ಯರಿಂದ ಪ್ರಾರಂಭವಾದ ಭಜನಾ ಕಾರ್ಯಕ್ರಮ ಪಾಲ್ಗೊಂಡ ಭಜಕವೃಂದವನ್ನು ಭಕ್ತಿಪರವಶರನ್ನಾಗಿಸಿತು. ಮಧ್ಯಾಹ್ನ ಸುಮಾರು 12.45 ಕ್ಕೆ ಮಂತ್ರ ಘೋಷದ ಜತೆಗೆ ಶಂಖ ಜಾಗಟೆಗಳ ದನಿಗೂಡಿಸಿ ಮಹಾಪೂಜೆಯ ಮಹಾಮಂಗಳಾರತಿ ಅರ್ಪಿಸಿದ ನಂತರ ಪುರೋಹಿತ್ ರು ಶ್ರೀ ವಿಶ್ವಕರ್ಮ ಪೂಜಾ ವೈಶಿಷ್ಟ್ಯತೆಯ ಬಗ್ಗೆ ಭಕ್ತಾಧಿಗಳಿಗೆ ಮನೋಜ್ಞ ವಿವರಣೆಯ ಜತೆಗೆ ಸಮಸ್ತ ಭಕ್ತ ಸಮೂಹದ ಪರವಾಗಿ ನಡೆಸಿದ ಸಾಮೂಹಿಕ ಪ್ರಾರ್ಥನೆ ನೆರೆದ ಭಕ್ತಬಾಂಧವರಲ್ಲಿ ಧನ್ಯತಾ ಭಾವವನ್ನುಂಟುಮಾಡಿತ್ತು. ಪ್ರಸಾದ ವಿತರಣೆ ನಂತರ ರುಚಿಕರವಾದ ಅನ್ನಸಂತರ್ಪಣೆ ನೆರೆದ ಸದ್ಭಕ್ತರನ್ನು ಸಂತೃಪ್ತಿಗೊಳಿಸಿತು.
ಅಪರಾಹ್ನ 3 ಗಂಟೆಗೆ ಬಳಗದ ಸದಸ್ಯರಿಂದ ಸಂಗೀತ ನೃತ್ಯ ಮನರಂಜನಾ ಕಾರ್ಯಕ್ರಮಗಳು ಪ್ರಾರಂಭವಾದವು. ಕುಮಾರಿ ದಿವ್ಯಾ ದಾಮೋದರ್ ಇವರಿಂದ ಸಕಲ ವಿಘ್ನವಿನಾಶಕ ಶ್ರೀ ಗಣೇಶನ ಸ್ತುತಿ ಹಾಗೂ ದ್ವೀಪದ ಹೆಸರಾಂತ ನೃತ್ಯ ಸಂಯೋಜಕಿ ವಿದುಷಿ ಶ್ರೀಮತಿ ಅಸ್ತಿಕಾ ಸುನೀಲ್ ಶೆಟ್ಟಿ ಯವರ ನೃತ್ಯ ಸಂಯೋಜನೆಯಲ್ಲಿ , ಕುಮಾರಿ ಸಂಧ್ಯಾ ದಾಮೋದರ್ ಇವರ ಪೂಜಾನೃತ್ಯಗಳೊಂದಿಗೆ ಸಂಪನ್ನವಾಯಿತು.
ಬಹರೈನ್ ಉದಯೋನ್ಮುಖ ಗಾಯಕಿ ಶ್ರೀಮತಿ ಶರ್ವಾಣಿ ಮಂಜುನಾಥ್ ಮತ್ತು ರಾಜೇಶ್ ಕುಡೆತ್ತೂರು ಇವರು ಪ್ರಸ್ತುತಪಡಿಸಿದ ” ಪಲ್ಲವಿ ಅನುಪಲ್ಲವಿ” ಚಿತ್ರದ ಕನ್ನಡಯುಗಳ ಗೀತೆಯ ನಂತರ ಕುಮಾರಿ ಅನನ್ಯ ರಾಜೇಶ್ ಮತ್ತು ಕುಮಾರಿ ಸಾಕ್ಷಿ ಶರತ್ ಇವರ “ನಗಾಡ” ಹಿಂದಿ ಫಿಲ್ಮ್ ಡ್ಯಾನ್ಸ್ ಪ್ರೇಕ್ಷಕರ ಮೆಚ್ಚಿಗೆಗೆ ಪಾತ್ರವಾದವು. ಮುಂದೆ ಪ್ರದೀಪ್ ಕಾರ್ಕಳ ಮತ್ತು ಕುಮಾರಿ ದಿವ್ಯಾದಾಮೋದರ್ ಪ್ರಸ್ತುತಪಡಿಸಿದ “ಸದಾ ನಿನ್ನ ಕಣ್ಣಲಿ” ಹಾಡು ಶ್ರೋತೃಗಳ ಮನಗೆದ್ದರೆ, ಬಳಗದ ಉತ್ಸಾಹೀ ಮಹಿಳೆಯರು ಪ್ರದರ್ಶಿಸಿದ ಸುಂದರ ಜಾನಪದ ನೃತ್ಯ ನೆರೆದ ಪ್ರೇಕ್ಷಕರ ಅಭೂತಪೂರ್ವ ಮನ್ನಣೆ ಪಡೆಯಿತು. ಈ ನಯನ ಮನೋಹರ ನೃತ್ಯಕ್ಕೆ ಕಳೆನೀಡಿದ ಶ್ರೀಮತಿಯರಾದ ಸವಿತಾ ನಟೇಶ್, ಪ್ರೀತಿ ಶರತ್. ಶರ್ವಾಣಿ ಮಂಜುನಾಥ್, ಹೇಮಾ ಸುರೇಂದ್ರ. ನೀತಾ ಬಾಲ್, ಮೋಹಿನಿ ಸದಾಶಿವ್ , ರೆಷ್ಮಾ ಸತೀಶ್ ಮತ್ತು ವಿನುತಾ ಹರೀಶ್ ರವರು ಕಲಾಭಿಮಾನಿಗಳ ಪ್ರಚಂಡ ಕೈ ಚಪ್ಪಾಳೆ ಗಿಟ್ಟಿಸಿಕೊಂಡರು. ದ್ವೀಪದ ಸುಮುಧುರ ಕಂಠದ ಕುಮಾರಿ ದಿವ್ಯಾ ದಾಮೋದರ್ ” ಹಿಂದಿ ಮೆಡ್ಲಿ” ಹಳೆಯ ಹಾಡುಗಳೊಂದಿಗೆ ಜನಮನರಂಜಿಸಿದರು.
ಕುಮಾರಿ ನಮಿತಾ ಸಾಲ್ಯಾನ್ , ಕುಮಾರಿ ಹರಿಣಿ ಶೆಟ್ಟಿ ಮತ್ತು ಕುಮಾರಿ ಸಂದ್ಯಾ ದಾಮೋದರ್ ಇವರು ಪ್ರಸ್ತುತ ಪಡಿಸಿದ ಫ್ಯೂಜನ್ ಡ್ಯಾನ್ಸ್ ಈ ಮೂವರು ನೃತ್ಯಗಾರ್ತಿಯರ ಕೌಶಲ್ಯಕ್ಕೆ ಹಿಡಿದ ಕನ್ನಡಿಯಂತಿತ್ತು. “ಸಂಜು ವೆಡ್ಸ್ ಗೀತಾ” ಕನ್ನಡ ಚಲನಚಿತ್ರದ “ಗಗನವೇ ಬಾಗಿ” ಹಾಡು ಶ್ರೀಮತಿ ಸರ್ವಾಣಿ ಮಂಜುನಾಥ್ ಇವರ ಸುಮುಧುರ ಕಂಠಕ್ಕೆ ಸಾಕ್ಷಿಯಾಗಿತ್ತು. ತದ ನಂತರ ನೆರೆದವರೆಲ್ಲರ ಚಪ್ಪಾಳೆಗಿಟ್ಟಿಸಿಕೊಂಡ “ಚಿಲ್ಲರ್ ಪಾರ್ಟಿ” ಮಕ್ಕಳ ನೃತ್ಯಕ್ಕೆ ಹೆಜ್ಜೆಹಾಕಿದವರು ಕುಮಾರಿ ಅನನ್ಯ ರಾಜೇಶ್, ಕುಮಾರಿ ಸಾಕ್ಷಿ ಶರ್ಅತ್, ಮಾಸ್ಟರ್ ಅನ್ಯುಲ್ ನಟೇಶ್, ಮಾಸ್ಟರ್ ರೋನಿತ್ ಸತೀಶ್, ಮಾಸ್ಟರ್ ಅಶೀತ್ ಸದಾಶಿವ್, ಮಾಸ್ಟರ್ ಅಶಿಶ್ ಮನೋಜ್ ಮತ್ತು ಮಾಸ್ಟರ್ ಅದಿತ್ಯ ಹರೀಶ್. ಈ ಪುಟಾಣಿಗಳ ನೃತ್ಯ ಸಂಯೋಜಕರಾಗಿ ಸಹಕರಿಸಿದವರು ಧನುಶ್, ಸಂತೋಷ್ ಮತ್ತು ಕುಮಾರಿ ಸಂಧ್ಯಾ ದಾಮೋದರ್ ಅಮೇಲೆ ಮಾಂಗಲ್ಯ ಭಾಗ್ಯ ಕನ್ನಡಚಿತ್ರದ ಅಸೆಯ ಬಾವ ಎಂಬ ಸುಮಧುರಗೀತೆಯನ್ನು ಬಳಗದ ಸ್ಥಾಪಕಾಧ್ಯಕ್ಷ ಕೆ.ಬಿ ಜಗದೀಶ್ ಅಚಾರ್ ಹಾಡಿ ಪ್ರೇಕ್ಷಕರನ್ನು ರಂಜಿಸಿದರು.
ತುಳು ಜಾನಪದ ನೃತ್ಯ “ಡೆನ್ನನ ಡೆನ್ನಾನ” ವಂತೂ ಸೇರಿದ್ದ ಜನರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು. ಈ ಹಾಡಿಗೆ ಉತ್ತಮವಾಗಿ ಹೆಜ್ಜೆಹಾಕಿ ಪ್ರೇಕ್ಷಕರನ್ನು ಕುಣಿಸುವಲ್ಲಿ ಯಶಸ್ವಿಯಾದವರು ನೃತ್ಯ ಸಂಯೋಜಕ ಸಂತೋಷ್ ಕುಮಾರ್ . ದನುಷ್, ಸುಧೀರ್ ಆಚಾರ್, ನಟೇಶ್ ಆಚಾರ್, ಸುಮೀತ್ ಆಚಾರ ಲವಣಿ ಕುಮಾರ್, ಕುಮಾರಿ ಸಂದ್ಯಾ ಮತ್ತು ಕುಮಾರಿ ದಿವ್ಯಾ ದಾಮೋದರ್ , ಶ್ರೀಮತಿ ಶರ್ವಾಣಿ ಮಂಜುನಾಥ್ ಮತ್ತು ಸತೀಶ್ ಉಲ್ಲಾಳ್ ಎರಡು ಕನಸು ಕನ್ನಡ ಚಲನಚಿತ್ರದ “ಎಂದೆಂದೂ ನಿನ್ನನು ಮರೆತೂ ನಾನಿರಲಾರೆ” ಹಾಡಿನಿಂದ ಸಭಿಕರನ್ನು ರಂಜಿಸಿದರೆ ಶ್ರೀ ವಿನೇಶ್ ಹಾಡಿದ ಮುಂಗಾರುಮಳೆ ಚಿತ್ರದ ಅನಿಸುತಿದೆ ಯಾಕೋ ಒಂದು ಹಾಡು ಚೆನ್ನಾಗಿ ಮೂಡಿಬಂತು,
ನಮ್ಮ ಬಳಗದ ಉತ್ಸಾಹೀ ಕಲಾವಿದರ ಈ ಸುಂದರ ಕಾರ್ಯಕ್ರಮದ ನಂತರ ರಾಷ್ಟ್ರ ಪ್ರಶಸ್ತಿ ವಿಜೇತ ಕನ್ನಡ ಸಂಘ, ಬಹರೈನ್ ನ ಯಶಸ್ವೀ ಕಲಾವಿದರಿಂದ ” ಶ್ರೀ ಕೃಷ್ಣಲೀಲೆ ಮತ್ತು ಕಂಸವಧೆ” ಎನ್ನುವ ಪೌರಣಿಕ ಸುಂದರ ಕಥನಕದ ಯಕ್ಷಗಾನ ಪ್ರದರ್ಶನ ನೆರೆದವರೆಲ್ಲದ ಮನಸೊರೆಗೊಂಡಿತು. ಬಾಲಕೃಷ್ಣನಾಗಿ ಸವ್ಯಸಾಚಿ ಮೋಹನ್ ಎಡನೀರ್ ಇವರು ತಮ್ಮ ಅಮೋಘ ಕುಣಿತ ,ನಟನೆ, ವಾಕ್ಚಾತುರ್ಯಗಳಿಂದ ಜನಮನಗೆದ್ದರೆ, ಶ್ರೀ ಕೃಷ್ಣನಾಗಿ ದ್ವೀಪದ ಚಿರಪರಿಚಿತ, ಯಕ್ಷಪಟು ಶ್ರೀನಿವಾಸ್ ಭಟ್, ಕಳವಾರು ಇವರು ತಮ್ಮ ಎಂದಿನ ಘನತೆ, ಗಾಂಭೀರ್ಯದ ವೇಷಗಾರಿಕೆ, ಮಾತುಗಾರಿಕೆ, ಕುಣಿತದ ಮೂಲಕ ತಮ್ಮ ನೈಜ ಪ್ರತಿಭೆಗಳಿಗೆ ಸಾಕ್ಷಿಯಾದರು.
ರಾಮಪ್ರಸಾದ್ ಅಮ್ಮೆನಡ್ಕ ರ ಶಕಟಾಸುರ ಮತ್ತು ಚಾಣೂರ, ಕಿರಣ್ ಉಪಾಧ್ಯಾಯ ರ ಕಂಸಾಸುರ ಪಾತ್ರಗಳ ವೇಷಭೂಷಣ, ಅಬ್ಬರದ ಗತ್ತಿಗಾರಿಕೆಯ ನಟನೆ, ನಾವು ವೃತ್ತಿಪರರಿಗೇನೋ ಕಮ್ಮಿಯಿಲ್ಲವೆಂದು ಸಾರಿಹೇಳುವಂತಿತ್ತು. ಹಾಗೆನೇ ಪ್ರವೀಣ್ ಶೆಟ್ಟಿ , ಕಿನ್ನಿಗೋಳಿ ಇವರ ವಾತಾಸುರ , ಮೋಹನದಾಸ್ ರೈಗಳ ವಿಜಯನ ಪಾತ್ರ, ದೆನುಕ ಮತ್ತು ಮುಷ್ಠಿಕನಾಗಿ ರಾಜೇಶ್ ಮಾವಿನಕಟ್ಟೆ, ಅಕ್ರೂರಬ್ನಾಗಿ ಶ್ರೀಮತಿ ಶೋಭಾ ರಾಮಪ್ರಸಾದ್ ಬಲರಾಮನಾಗಿ ರಾಜೇಶ್ ಶೆಟ್ಟಿಗಾರ್, ರಜಕನ ಪಾತ್ರದಲ್ಲಿ ಜಗದೀಶ್ ಜೆಪ್ಪು ಇವರೆಲ್ಲರೂ ತಮ್ಮ ಪಾತ್ರಗಳಿಗೆ ಜೀವತುಂಬುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನುವುದಕ್ಕೆ ಸೇರಿದ್ದ ಜನಸ್ತೋಮದ ಚಪ್ಪಾಳೆ, ಸಿಳ್ಳುಗಳೇ ಸಾಕ್ಷಿಯಾಗಿದ್ದುವು. ನಮ್ಮ ಬಳಗದ ಹಾಲಿ ಅಧ್ಯಕ್ಷ ದಾಮೋದರ್ ಮಿಜಾರ್ ಇವರ ದಿಢೀರ್ ನಿರ್ಮಿತ ಸುಂದರ ರಂಗಸ್ಥಳದಲ್ಲಿ ಈ ಯಕ್ಷಕಲಾವಿದರು ರಂಜಿಸಿದರೆ, ಹಿಮ್ಮೇಳದಲ್ಲಿ ಭಾಗವತರುಗಳಾಗಿ ಸುಮುಧುರ ಕಂಠದ ನಾರಾಯಣ ಪಂಜತೊಟ್ಟಿ, ಎ಼ಚ್.ಕೆ.ಪೈ ಮತ್ತು ಮಹೇಶ್ ನಾಯಕ್ ಸಹಕರಿಸಿದ್ದರು.
ಚೆಂಡೆವಾದಕರಾಗಿ ಧನಂಜಯ್ ಕಿನ್ನಿಗೋಳಿ ಮತ್ತು ಮೋಹನ್ ಎಡನೀರ್ ಮಿಂಚಿದ್ದರು ಮದ್ದಳೆಗಾರರಾಗಿ ಲಕ್ಷ್ಮೀಶ್ ಕಡಮಣತ್ತಾಯ ಮತ್ತು ಚಕ್ರತಾಳದಲ್ಲಿ ಸತೀಶ್ ಕೊಲ್ಯ ಇವರು ಸೇವೆಸಲ್ಲಿಸಿದ್ದರು. ಹಾಗೇನೇ ಹಿನ್ನೆಲೆಯಲ್ಲಿ ಸಹಕಾರ ನೀಡಿದವರಲ್ಲಿ ದೂಮಣ್ಣ ರೈ, ಸಿ.ಎಲ್ ಮೆಂಡನ್, ಶ್ರೀಧರ್ ಎಡನೀರ್, ಅಯ್ಯಪ್ಪ ಎಡನೀರ್, ಸುನೀಲ್ ಕದ್ರಿ ಮತ್ತು ಕರುಣಾಕರ ಪದ್ಮಶಾಲಿ ಪ್ರಮುಖರು.
ಈ ಅವಿಸ್ಮರಣೀಯ ಸಮಾರಂಭದ ಯಶಸ್ಸಿನ ಪಾಲುದಾರರೆಲ್ಲರನ್ನೂ ಹಾಗೂ ನಮ್ಮ ಸಾಂಸ್ಕ್ರೃತಿಕ ಕಾರ್ಯಕ್ರಮಕ್ಕೆ ವೈಭವದ ಮೆರುಗುನ್ನಿತ್ತ ಯಕ್ಷಗಾನ ಪ್ರದರ್ಶನದ ರೂವಾರಿ ರಮೇಶ್ ಮಂಜೇಶ್ವರ , ಕನ್ನಡ ಸಂಘ ಬಹರೈನ್ ನ ಅಧ್ಯಕ್ಷ ರಾಜೇಶ್ ಶೆಟ್ಟಿ, ದೂಮಣ್ಣ ರೈ,ಸುನೀಲ್ ಕದ್ರಿ ಅಲ್ಲದೆ ನೃತ್ಯ ಸಂಯೋಜಕರಾಗಿ ಸಹಕರಿಸಿದ ವಿಧುಷಿ ಶ್ರೀಮತಿ ಅಸ್ತಿಕ ಸುನೀಲ್ ಶೆಟ್ಟಿ, ಧನುಶ್, ಸಂತೋಷ್ ಕುಮಾರ್, ಸಮೂಹ ನೃತ್ಯದಲ್ಲಿ ಪಾಲ್ಗೋಂಡ ಕುಮಾರಿ ನಮಿತಾ ಸಾಲ್ಯಾನ್, ಕುಮಾರಿ ಹರಿಣಿ ಶೆಟ್ಟಿ, ಲವಣಕುಮಾರ್ ಹಾಗೂ ಯಕ್ಷಗಾನದ ಎಲ್ಲಾ ಕಲಾವಿದರನ್ನು ವಿಶ್ವಕರ್ಮ ಸೇವಾ ಬಳಗದ ಸ್ಥಾಪಕಾಧ್ಯಕ್ಷ ಕೆ.ಬಿ.ಜಗದೀಶ್ ಆಚಾರ್ ಇವರು ಬಳಗದ ಅಧ್ಯಕ್ಷ ದಾಮೋದರ್ ಮಿಜಾರ್ ಇವರ ಉಪಸ್ಥಿತಿಯಲ್ಲಿ ಶ್ರೀ ವಿಶ್ವಕರ್ಮ ದೇವರ ಸುಂದರ ಸ್ಮರಣಿಕೆಗಳನ್ನು ನೀಡುವುದರ ಜತೆಗೆ ಕಾರ್ಯಕ್ರಮದ ಕೊನೆಯಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಶ್ರಮಿಸಿದ ಸಮಸ್ತ ಬಂಧು – ಬಾಂಧವರಿಗೆ ವಂದನಾರ್ಪಣೆಗೈದರು.