( ಫೈಲ್ ಚಿತ್ರ )
ಮಂಗಳೂರು,ಅ.14: ಹುಲಿಗಳ ಸರಸ ವಿರಸಕ್ಕೆ ತಿರುಗಿ ಎರಡು ಹುಲಿಗಳ ನಡುವೆ ಘರ್ಷಣೆ ನಡೆದು ಹೆಣ್ಣು ಹುಲಿ ಗಾಯಗೊಂಡ ಘಟನೆ ಸೋಮವಾರ ಮಂಗಳೂರಿನ ಹೊರವಲಯದ ಪಿಲಿಕುಳ ನಿಸರ್ಗಧಾಮದ ಮೃಗಾಲಯದಲ್ಲಿ ನಡೆದಿದೆ.
ಹುಲಿ ಸಂತಾನ ಅಭಿವೃದ್ಧಿ ಉದ್ದೇಶದಿಂದ ಮೃಗಾಯಲದ ಕುಮಾರ್ ಎಂಬ ಗಂಡು ಹುಲಿಯನ್ನು ಬಂಟಿ ಎಂಬ ಹೆಣ್ಣು ಹುಲಿ ಭೇಟಿಗೆ ಸೋಮವಾರ ಬಿಡಲಾಗಿತ್ತು. ಕೆಲ ಹೊತ್ತು ಒಟ್ಟಿಗೆ ಇದ್ದ ಕುಮಾರ್ ಮತ್ತು ಬಂಟಿ ಇದ್ದಕ್ಕಿದ್ದಂತೆ ಪರಸ್ಪರ ಜಗಳ ಶುರು ಮಾಡಿತ್ತು. ಈ ಸಂದರ್ಭ ಕುಮಾರ್ ಬಂಟಿಯ ಕತ್ತಿನಲ್ಲಿ ಹಿಡಿದು ಗಂಭೀರವಾಗಿ ಗಾಯಗೊಳಿಸಿತ್ತು. ಇದನ್ನು ಗಮನಿಸಿದ ಮೃಗಾಲಯದ ಸಿಬ್ಬಂದಿ ವೈದ್ಯರಿಗೆ ಮಾಹಿತಿ ನೀಡಿದರು. ವೈದ್ಯರು ತಕ್ಷಣ ಭೇಟಿ ನೀಡಿ ಗಾಯಗೊಂಡ ಹುಲಿಗೆ ಚಿಕಿತ್ಸೆ ನೀಡಿದರು.