ಮಂಗಳೂರು: ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಶಿಶು ಶಸ್ತ್ರಚಿಕಿತ್ಸೆಗೆ ಪೂರಕವಾಗಿರುವ ಚಿಕಿತ್ಸಾ ಸೌಲಭ್ಯ ಒದಗಿಸಲು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ಸಮೀಪದ ಪ್ರಾದೇಶಿಕ ಅತ್ಯಾಧುನಿಕ ಮಕ್ಕಳ ಚಿಕಿತ್ಸಾ ಕೇಂದ್ರವನ್ನು(ಆರ್ಎಪಿಸಿಸಿ) ಬೆಂಗಳೂರಿನ ಇಂದಿರಾ ಗಾಂಧಿ ಇನ್ಸ್ಟಿಟ್ಯೂಟ್ನ ಮಾದರಿಯಲ್ಲಿ ಮೇಲ್ದರ್ಜೆಗೇರಿಸಲಾಗುವುದು ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಯು. ಟಿ. ಖಾದರ್ ಹೇಳಿದರು.
ನಗರದ ಟಿಎಂಎ ಪೈ ಸಭಾಂಗಣದಲ್ಲಿ ಎರಡು ದಿನಗಳ ಕಾಲ ನಡೆಯುವ 17ನೇ ಕರ್ನಾಟಕ ರಾಜ್ಯ ನವಜಾತಶಿಶು ಸಮ್ಮೇಳನ ‘ಕರ್ನನ್ಯೂಯೋಕಾನ್’ನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ಈ ಕೇಂದ್ರದಲ್ಲಿ ಶಿಶುಗಳಿಗೆ ಅತ್ಯಾಧುನಿಕ ಶಸ್ತ್ರಚಿಕಿತ್ಸೆ ಸೇರಿದಂತೆ ಎಲ್ಲ ರೀತಿಯ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.
ಘಟಕ ಸ್ಥಾಪನೆ: ವಾಮಂಜೂರಿನ ಟಿಬಿ ಆಸ್ಪತ್ರೆಯ ಆವರಣದಲ್ಲಿ ಜಯದೇವ್ ಆಸ್ಪತ್ರೆ, ನಿಮಾನ್ಸ್ , ಕಿದ್ವಾಯಿ ಆಸ್ಪತ್ರೆಗಳ ಘಟಕಗಳನ್ನು ಸ್ಥಾಪಿಸುವ ಯೋಜನೆ ಇದೆ ಎಂದು ಸಚಿವ ಯು. ಟಿ. ಖಾದರ್ ಹೇಳಿದರು.
ಆಧುನಿಕ ಶುಶೂಷೆ ವ್ಯವಸ್ಥೆ: ಪ್ರತೀ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಸುಸಜ್ಜಿತ, ಆಧುನಿಕ ಶಿಶು ಶುಶ್ರೂಷೆ ವ್ಯವಸ್ಥೆ ಮಾಡಲು ವೈದ್ಯಕೀಯ ಸಚಿವರೊಂದಿಗೆ ಮಾತುಕತೆ ನಡೆಸುತ್ತೇನೆ. ಇದರ ಜತೆಗೆ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲು ಕನಿಷ್ಠ 20ಎಕರೆ ಭೂಮಿ ಬೇಕು ಎಂಬ ನಿಯಮ ಮೆಡಿಕಲ್ ಕೌನ್ಸಿಲ್ ರೂಪಿಸಿದೆ. ಆದರೆ ಕೆಲವು ಪ್ರದೇಶಗಳಲ್ಲಿ ಇಷ್ಟು ಪ್ರಮಾಣದ ಭೂಮಿ ಲಭಿಸದ ಹಿನ್ನೆಲೆಯಲ್ಲಿ ಕಾಲೇಜು ಆಸ್ಪತ್ರೆ ತೆರೆಯಲು ಮುಂದಾಗುತ್ತಿಲ್ಲ. ಇದಕ್ಕಾಗಿ ಈ ನಿಯಮವನ್ನು ಸಡಿಲಿಸಿ 10 ಎಕರೆ ಭೂಮಿ ನಿಗದಿಗೊಳಿಸುವಂತೆ ಚರ್ಚೆ ನಡೆಸಲಾಗುವುದು ಎಂದು ಅವರು ಹೇಳಿದರು.
ಡೆಲಿವರಿ ಪಾಯಿಂಟ್: ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹೆರಿಗೆಗಾಗಿ ಕೆಲವು ಸೌಲಭ್ಯ, ವೈದ್ಯರ ಕೊರತೆ ಇರುತ್ತದೆ. ಈ ಹಿನ್ನೆಲೆಯಿಂದ ಹೆರಿಗೆಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಪ್ರತೀ 10 ಪಿಎಚ್ಸಿಗಳಿಗೆ ಒಂದು ಡೆಲಿವರಿ ಪಾಯಿಂಟ್ನ್ನು ತೆರೆಯುವ ಉದ್ದೇಶ ಸರಕಾರದ ಮುಂದಿದೆ. ಇಲ್ಲಿ ಹೆರಿಗೆ ಹಾಗೂ ಶಿಶುವಿನ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲ ಸೌಲಭ್ಯಗಳು ಲಭಿಸುವಂತೆ ಮಾಡಲಾಗುವುದು ಎಂದು ಸಚಿವರು ಹೇಳಿದರು.
ಆರೋಗ್ಯದ ಸೂಚ್ಯಂಕ : ರಾಜ್ಯವೊಂದರ ಆರೋಗ್ಯ ಸೂಚ್ಯಂಕ ಆ ರಾಜ್ಯದಲ್ಲಿ ತಾಯಿ-ಮಗುವಿನ ಮರಣ ಸಂಖ್ಯೆಯನ್ನು ಹೊಂದಿಕೊಂಡಿರುತ್ತದೆ. ರಾಜ್ಯದಲ್ಲಿ 1000ಕ್ಕೆ 42ರಷ್ಟಿದ್ದ ಶಿಶು ಮರಣ ಪ್ರಮಾಣ 32ಕ್ಕೆ ಇಳಿಮುಖವಾಗಿದೆ. ಈ ಪ್ರಮಾಣವನ್ನು ಇನ್ನಷ್ಟು ಇಳಿಸಲು ನಾನಾ ಕ್ರಮ ಕೈಗೊಳ್ಳಲಾಗುತ್ತಿದೆ. ನಮ್ಮ ನೆರೆಯ ರಾಜ್ಯಗಳಾದ ಆಂಧ್ರ, ತಮಿಳುನಾಡು, ಕೇರಳ ರಾಜ್ಯಗಳೊಂದಿಗೆ ಗಮನಿಸಿ ಅತ್ಯಂತ ಕನಿಷ್ಠ ಪ್ರಮಾಣಕ್ಕೆ ಇಳಿಸಬೇಕು. ಇದಕ್ಕಾಗಿ ಖಾಸಗಿ ಆಸ್ಪತ್ರೆಗಳು, ಎನ್ಜಿಒ, ಸಂಶೋಧನಾ ಕೇಂದ್ರಗಳು ಕಾರ್ಯನಿರ್ವಹಿಸಬೇಕು . ಪ್ರತಿಯೊಬ್ಬರು ಆಸ್ಪತ್ರೆಗೆ ಬಂದೇ ಹೆರಿಗೆ ಮಾಡುವಂತಾಗಬೇಕು. 108ರಲ್ಲಿ ಆಸ್ಪತ್ರೆಗೆ ಬಂದು ಮಗುವಿನೊಂದಿಗೆ ಮನೆಗೆ ತೆರಳಲು ಬೇಕಾದ ಎಲ್ಲ ಸೌಲಭ್ಯಗಳನ್ನು ಸರಕಾರ ಮಾಡುತ್ತಿದೆ ಎಂದು ಸಚಿವ ಯು. ಟಿ. ಖಾದರ್ ಹೇಳಿದರು.
ವಾರಕ್ಕೊಮ್ಮೆ ಭೇಟಿ ನೀಡಿ: ಖಾಸಗಿ ವೈದ್ಯರು ವಾರಕ್ಕೆ ಒಮ್ಮೆ ಸರಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಅಲ್ಲಿರುವ ಶಿಶುಗಳ ಪರೀಕ್ಷೆ ಮಾಡುವ ಮೂಲಕ ಶಿಶುಗಳ ಆರೋಗ್ಯ ವೃದ್ಧಿಗೆ ಶ್ರಮಿಸಬೇಕು ಎಂದು ಸಚಿವರು ಹೇಳಿದರು.
ರಾಜ್ಯ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕ ಡಾ. ರಮೇಶ್ ಮಾತನಾಡಿ, ನಗರದ ಆರ್ಎಪಿಸಿಸಿಯಲ್ಲಿ ಮಕ್ಕಳ ವಿಶೇಷ ನಿಗಾ ಘಟಕವನ್ನು ಜನವರಿ ತಿಂಗಳಲ್ಲಿ ಆರಂಭಿಸಲಾಗುವುದು. ಪ್ರಸ್ತುತ ಇರುವ ಶಿಶು ನಿಗಾ ಬೆಡ್ಗಳ ಸಂಖ್ಯೆಯನ್ನು 6ರಿಂದ 12ಕ್ಕೆ ಏರಿಸಲಾಗುವುದು. ಶಸ್ತ್ರ ಚಿಕಿತ್ಸಾ ಕೇಂದ್ರ ಮುಂದಿನ ಡಿಸೆಂಬರ್ನಲ್ಲಿ ಆರಂಭವಾಗುವುದು ಎಂದರು.
ಮಣಿಪಾಲ ವಿಶ್ವವಿದ್ಯಾನಿಲಯದ ಪ್ರೊ ವೈಸ್ಚಾನ್ಸ್ಲರ್ ಡಾ. ವಿ. ಸುಂದರ ಶೆಟ್ಟಿ ಮಾತನಾಡಿ, ವೈದ್ಯಕೀಯ ಕ್ಷೇತ್ರ ಅತ್ಯಾಧುನಿಕ ಬೆಳವಣಿಗೆ ಆಗುತ್ತಿದೆ. ಅದನ್ನು ಅಳವಡಿಸಿಕೊಳ್ಳಬೇಕು ಎಂದರು. ರಾಜ್ಯ ಎನ್ಎನ್ಎಫ್ ಅಧ್ಯಕ್ಷ ಡಾ. ಬಿ. ಶಾಂತರಾಮ ಬಾಳಿಗ ಮಾತನಾಡಿ, ಕಳೆದ ಹಣಕಾಸು ವರ್ಷದಲ್ಲಿ ರಾಜ್ಯದಲ್ಲಿ ಒಟ್ಟು 12,771ಮಕ್ಕಳ ಮರಣ ಸಂಭವಿಸಿದೆ. ಈ ಪೈಕಿ 8971ಶಿಶುಗಳಾಗಿವೆ. ನಮ್ಮ ಆರೋಗ್ಯ ಕೇಂದ್ರಗಳಲ್ಲಿ ಮೂಲ ಸೌಕರ್ಯಗಳ ಕೊರತೆಯಿಂದ ಈ ಶಿಶುಗಳ ಸಾವು ಸಂಭವಿಸುತ್ತಿದೆ. ಸರಕಾರ ಈ ಬಗ್ಗೆ ತಕ್ಷಣ ಗಮನ ಹರಿಸಬೇಕು ಎಂದರು. ನವಜಾತ ಶಿಶು ಮಾಹಿತಿ ಸಂಬಂಧಿಸಿದ ವೆಬ್ಸೈಟ್ನ್ನು ಡಾ ಪಿ. ಪಿ. ಮಯ್ಯ ಮತ್ತು ಡಾ. ಸ್ವರ್ಣ ರೇಖ ಭಟ್ ಉದ್ಘಾಟಿಸಿದರು. ಅವರನ್ನು ಸಚಿವರು ಸನ್ಮಾನಿಸಿದರು.
ಡಾ. ರಾಮಚಂದ್ರ ಕಾಮತ್ ಉಪಸ್ಥಿತರಿದ್ದರು. ಸಂಘಟನಾ ಕಾರ್ಯದರ್ಶಿ ಡಾ. ರಾಜೇಶ್ ಎಸ್.ಎಂ ಸ್ವಾಗತಿಸಿದರು. ಡಾ. ಅರ್ಚನಾ ಬಿಳಗಿ ವಾರ್ಷಿಕ ವರದಿ ಮಂಡಿಸಿದರು. ಜಂಟಿ ಸಂಘಟನಾ ಕಾರ್ಯದರ್ಶಿ ಡಾ. ಕಿರಣ್ ಬಾಳಿಗಾ ವಂದಿಸಿದರು.