ಕುಂದಾಪುರ: ಕೊಲ್ಲೂರಿನ ಶ್ರೀ ನಿತ್ಯಾನಂದ ಮಠದ ವಿಮಲಾನಂದ ಶ್ರೀಗಳ ಸಮಾಧಿಯ ಮುಂದೆ ಇಡಲಾಗಿದ್ದ ಹುಂಡಿಗೆ ಕನ್ನ ಹಾಕಿದ ಕಳ್ಳರು ಸುಮಾರು ಮೂರು ಸಾವಿರ ರೂ. ನಗದು ದೋಚಿದ ಘಟನೆ ಬುಧವಾರ ತಡರಾತ್ರಿ ನಡೆದಿದೆ.
ಕಳ್ಳರು ಮಠದ ಮುಂಭಾಗದ ಬಾಗಿಲು ಒಡೆಯುವ ಮೂಲಕ ಒಳ ನುಸುಳಲು ಪ್ರಯತ್ನಿಸಿದ್ದು ಕಬ್ಬಿಣದ ಬಲವಾದ ಸರಳುಗಳುಳ್ಳ ಬಾಗಿಲು ಇದ್ದ ಕಾರಣದಿಂದಾಗಿ ಕಳ್ಳರಿಗೆ ಒಳಪ್ರವೇಶ ಸಾಧ್ಯವಾಗಿಲ್ಲ. ಇದರಿಂದ ಕಳ್ಳರು ಸಮಾಧಿಯೆದುರು ಕೈಗೆ ಸಿಕ್ಕ ಹುಂಡಿಯನ್ನೇ ದೋಚಿ ಪರಾರಿಯಾಗಿದ್ದಾರೆ. ಆಶ್ಚರ್ಯಕರ ಸಂಗತಿಯೆಂದರೇ ಚಿಲ್ಲರೇ ಹಣವನ್ನು ಅಲ್ಲಿಯೇ ಬಿಟ್ಟ ಈ ಖದೀಮರು ನೋಟುಗಳನ್ನು ಮಾತ್ರ ಕೊಂಡೊಯ್ದಿದ್ದಾರೆ ಎನ್ನಲಾಗಿದೆ.
ಕಳೆದ ನಾಲ್ಕೈದು ತಿಂಗಳ ಹಿಂದೆ ಇಲ್ಲಿನ ಶ್ರೀ ವಿಮಲಾನಂದ ಶ್ರೀಗಳ ಸಮಾಧಿ ವಿಚಾರದಲ್ಲಿ ರಾಜ್ಯಮಟ್ಟದಲ್ಲಿ ಸುದ್ದಿಯಾಗಿದ್ದ ಈ ನಿತ್ಯಾನಂದ ಮಠಕ್ಕೆ ಇದರ ತರುವಾಯ ರಾತ್ರಿ ವೇಳೆ ಕಲ್ಲು ತೂರಾಟ ನಡೆಸುವ ಮೂಲಕ ಕಿಡಿಗೇಡಿಗಳು ಸಮಸ್ಯೆ ಮಾಡಿದ್ದರು. ಈ ಎಲ್ಲಾ ವಿವಾದಗಳ ಬಳಿಕ ಮಠದ ಹುಂಡಿಗೆ ಕನ್ನ ಹಾಕುವ ಮೂಲಕ ಮಠಕ್ಕೆ ಇನ್ನೊಂದು ಶಾಕ್ ಎದುರಾಗಿದೆ.
ಈ ಬಗ್ಗೆ ಮಠದ ಮುಖ್ಯಸ್ಥ ಜಯಾನಂದ ಕೊಲ್ಲೂರು ಅವರು ಕೊಲ್ಲೂರು ಪೊಲಿಸ್ ಠಾಣೆ ಮೆಟ್ಟಿಲೇರಿದ್ದಾರೆ.