ಕುಂದಾಪುರ: ಆಭರಣದ ಅಂಗಡಿಯನ್ನು ಮುಚ್ಚಿ ಮನೆಗೆ ತೆರಳುತ್ತಿದ್ದ ತಂದೆ ಮತ್ತು ಮಕ್ಕಳ ಕಣ್ಣಿಗೆ ಮೆಣಸಿನ ಪುಡಿ ಎರಚಿ ಚೂರಿಯಿಂದ ತಿವಿದು ಮಗನ ಕೈಯಲ್ಲಿದ್ದ ಒಂದು ಕೆಜಿಗೂ ಅಧಿಕ ಚಿನ್ನಾಭರಣಗಳಿದ್ದ ಚೀಲವನ್ನು ಎಗರಿಸಿ ಪರಾರಿಯಾದ ಘಟನೆ ಮಂಗಳವಾರ ರಾತ್ರಿ ನಡೆದಿದ್ದು ಪೊಲೀಸರು ರಾತ್ರಿ ನಾಕಾಬಂದಿ ನಡೆಸಿ ನಾಲ್ವರು ಆರೋಪಿಗಳನ್ನು ಅಂದು ತಡರಾತ್ರಿ ಬಂಧಿಸಿದ್ದಾರೆ.
ಶಿವಪ್ರಕಾಶ್ ರಿಪ್ಪನ್ಪೇಟೆ, ಚಂದ್ರಹಾಸನ್ ನಿಟ್ಟೂರು ಉಡುಪಿ, ಪ್ರದೀಪ್ ಪೂಜಾರಿ ಕಾರ್ಕಳ ಹಿರ್ಗಾನ, ದುರ್ಗಾದಾಸ್ ನಿಟ್ಟೂರು ಎನ್ನುವವರು ಬಂಧಿತ ಆರೋಪಿಗಳಾಗಿದ್ದು. ಈ ಕ್ರತ್ಯದ ಪ್ರಮುಖ ರುವಾರಿ ಉಡುಪಿ ಉದ್ಯಾವರ ಮೂಲದ ರವಿ ಜತ್ತನ್ ಎಂಬಾತ ದರೋಡೆಗೈದ ಚಿನ್ನದ ಸಮೇತ ಪರಾರಿಯಾಗಿದ್ದಾನೆ.
(ಚೂರಿ ಇರಿತದಿಂದ ಗಾಯಗೊಂಡವರು)
ಉಪ್ಪುಂದ ಮಹಾಲಸಾ ಜ್ಯೂವೆಲರ್ಸ್ ಮಾಲಿಕರಾಗಿರುವ ಗಣೇಶ್ ಶೇಟ್ (62) ಮತ್ತು ಅವರ ಮಗ ಸುಧೀಂದ್ರ ಶೇಟ್ (28), ಮಗಳು ದಿವ್ಯಶ್ರೀ (24) ಎನ್ನುವವರೇ ದರೋಡೇಕೋರರ ದಾಳಿಗೆ ತುತ್ತಾದವರು. ಈ ವೇಳೆ ತಂದೆ ಹಾಗೂ ಮಕ್ಕಳನ್ನು ರಕ್ಷಿಸಲು ಬಂದ ನೆರಮನೆಯ ಸುನೀಲ್ ಶೇಟ್ ಎನ್ನುವವರು ದರೋಡೇಕೋರರ ಚೂರಿ ಇರಿತದಿಂದಾಗಿ ಗಂಭೀರ ಗಾಯಗೊಂಡಿದ್ದು ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೈಂದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಪ್ರಗತಿಯಲ್ಲಿದೆ. ಪರಾರಿಯಾದ ರವಿ ಜತ್ತನ್ ಪತ್ತೆಗೆ ವ್ಯಾಪಕ ಶೋಧ ನಡೆಯುತ್ತಿದೆ.