ಕುಂದಾಪುರ: ಆಭರಣದ ಅಂಗಡಿಯನ್ನು ಮುಚ್ಚಿ ಮನೆಗೆ ತೆರಳುತ್ತಿದ್ದ ತಂದೆ ಮತ್ತು ಮಕ್ಕಳ ಕಣ್ಣಿಗೆ ಮೆಣಸಿನ ಪುಡಿ ಎರಚಿ ಚೂರಿಯಿಂದ ತಿವಿದು ಮಗನ ಕೈಯಲ್ಲಿದ್ದ ಒಂದು ಕೆಜಿಗೂ ಅಧಿಕ ಚಿನ್ನಾಭರಣಗಳಿದ್ದ ಚೀಲವನ್ನು ಎಗರಿಸಿ ಪರಾರಿಯಾದ ಘಟನೆ ಕುಂದಾಪುರ ತಾಲೂಕಿನ ಉಪ್ಪುಂದದ ಹೆದ್ದಾರಿ ಸಮೀಪ ಮಂಗಳವಾರ ರಾತ್ರಿ ನಡೆದಿದೆ.
ಉಪ್ಪುಂದ ಮಹಾಲಸಾ ಜ್ಯೂವೆಲರ್ಸ್ ಮಾಲಿಕರಾಗಿರುವ ಗಣೇಶ್ ಶೇಟ್ (62) ಮತ್ತು ಅವರ ಮಗ ಸುಧೀಂದ್ರ ಶೇಟ್ (28), ಮಗಳು ದಿವ್ಯಶ್ರೀ (24) ಎನ್ನುವವರೇ ದರೋಡೇಕೋರರ ದಾಳಿಗೆ ತುತ್ತಾದವರು. ಇವರನ್ನು ಸದ್ಯ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ತಂದೆ ಹಾಗೂ ಮಕ್ಕಳನ್ನು ರಕ್ಷಿಸಲು ಬಂದ ನೆರಮನೆಯ ಸುನೀಲ್ ಶೇಟ್ ಎನ್ನುವವರು ದರೋಡೇಕೋರರ ಚೂರಿ ಇರಿತದಿಂದಾಗಿ ಗಂಭೀರ ಗಾಯಗೊಂಡಿದ್ದಾರೆ. ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಡೆದಿದ್ದೇನು?: ಮಂಗಳವಾರ ಸಂಜೆ 8.30ರ ಸುಮಾರಿಗೆ ತಮ್ಮ ಚಿನ್ನದಂಗಡಿಯನ್ನು ಮುಚ್ಚಿ ಹೆದ್ದಾರಿಯ ಸಮೀಪ ಗದ್ದೆಬಯಲಿನಲ್ಲಿರುವ ಸಾಗುತ್ತಿದ್ದವರ ಮೇಲೆ ಕತ್ತಲಲ್ಲಿ ನಾಲ್ಕೈದು ಮಂದಿ ಇದ್ದ ದರೋಡೆಕೋರರ ಗುಂಪೊಂದು ಏಕಾಏಕಿ ಮೆಣಸಿನ ಪುಡಿ ಎರಚಿದ್ದರು. ಈ ಹಟಾತ್ ಘಟನೆಯಿಂದ ತತ್ತರಿಸಿಹೋದ ತಂದೆ ಮಕ್ಕಳು ಬೊಬ್ಬೆ ಹೊಡೆಯಲು ಆರಂಭಿಸಿದರು. ಅಷ್ಟರಲ್ಲಿ ಅಪರಿಚಿತರು ಚೂರಿಯಿಂದ ಗಣೇಶ್ ಮತ್ತು ಸುಧೀಂದ್ರ ಅವರನ್ನು ಗುರಿಯಾಗಿಸಿ ಇರಿಯಲಾರಂಭಿಸಿದರು. ಇವರ ಬೊಬ್ಬೆ ಕೇಳಿದ ನೆರೆಮನೆಯ ಸುನೀಲ್ ಸಹ ಓಡಿ ಬಂದಿದ್ದು ಡಕಾಯಿತರು ಅವನ ಹೊಟ್ಟೆಗೂ ತಿವಿದಿದ್ದರು. ಇವರೆಲ್ಲರೂ ಹಿಂದಿ ಮತ್ತು ಮಳಯಾಳಿ ಭಾಷೆ ಮಾತನಾಡುತ್ತಿದ್ದರು ಎನ್ನಲಾಗಿದೆ. ಈ ಸಂದರ್ಭ ಸ್ಥಳದಿಂದ ಓಡಿದ ದಿವ್ಯಶ್ರೀ ಸಮೀಪದ ಮನೆಗೆ ಬಂದು ನಡೆದ ಘಟನೆಯನ್ನು ತಿಳಿಸಿದ್ದಾರೆ. ಅಷ್ಟರಲ್ಲಾಗಲೇ ಚಿನ್ನವನ್ನು ಎಗರಿಸಿದ್ದ ಅಪರಿಚಿತರು ಕತ್ತಲಲ್ಲಿ ಹೆದ್ದಾರಿಯ ಮೂಲಕ ಪರಾರಿಯಾಗಿದ್ದಾರೆ. ಸುದ್ದಿ ತಿಳಿದ ಪೊಲೀಸರು ತಕ್ಷಣವೇ ಹೆದ್ದಾರಿಯಲ್ಲಿ ನಾಕಾಬಂದಿ ನಡೆಸಿ ದರೋಡೆಕೋರರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ದರೋಡೆಕೋರರ ಬಂಧನ: ಸಿನಿಮೀಯ ರೀತಿಯಲ್ಲಿ ದರೋಡೆ ನಡೆಸಿ ಅಲ್ಲಿಂದ ಕಾಲ್ಕಿತ್ತಿದ್ದ ಆಗಂತುಕರನ್ನು ಸೆರೆ ಹಿಡಿಯಲು ಬೈಂದೂರು ಪೊಲಿಸರು ಸೇರಿದಂತೆ ವಿವಿದೆಡೆಯಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಲಾಗಿತ್ತು. ಈ ನಾಕಾಬಂದಿ ಮೂಲಕ ಡಕಾಯಿತರ ತಂಡದ ಮೂವರನ್ನು ಬಂಧಿಸುವಲ್ಲಿ ಬೈಂದೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಈ ದರೋಡೆಕೋರರ ತಂಡ ಕಾರಿನಲ್ಲಿ ಹೆದ್ದಾರಿಯ ಮೂಲಕ ಸಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗುತ್ತಿದ್ದಂತೆಯೆ ವಿವಿಧೆಡೆ ಈ ಮಾಹಿತಿಯನ್ನು ರವಾನಿಸಿ ಬೈಂದೂರು ಪೊಲೀಸರು ಕಾರಿನ ಬೆನ್ನಟ್ಟಿದ್ದಾರೆ. ನಾವುಂದದಲ್ಲಿ ಪೊಲೀಸರನ್ನು ಕಂಡಾಕ್ಷಣ ಪರಾರಿಯಾಗಲು ದರೋಡೆಕೋರರು ಯತ್ನಿಸಿದಾಗ ಪೊಲೀಸರು ಕಾರಿಗೆ ಹಿಂದಿನಿಂದ ಢಿಕ್ಕಿ ಹೊಡೆದು ಕಾರನ್ನು ನಿಲ್ಲಿಸಿ ಅದರಲ್ಲಿದ್ದ ಮೂವರನ್ನು ಸೆರೆಹಿಡಿದಿದ್ದಾರೆ. ಈ ವೇಳೆ ಓರ್ವ ಆರೋಪಿ ಪರಾರಿಯಾಗಿದ್ದು ಪೊಲೀಸರು ಆತನ ಪತ್ತೆಗೆ ಬಲೆಬೀಸಿದ್ದಾರೆ.
ಉದ್ಯಾವರ ಮೂಲದ ರವಿ ಜತ್ತನ್ ಎಂಬಾತನೇ ಈ ಕ್ರತ್ಯದ ರುವಾರಿಯಾಗಿದ್ದು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಪ್ರಗತಿಯಲ್ಲಿದೆ.