ಮಂಗಳೂರು, ಅಕ್ಟೋಬರ್ 06,: ಇತ್ತೀಚಿನ ಅರೋಗ್ಯ ಕ್ಷೇತ್ರದಲ್ಲಿ ಸಂಶೋಧನಾ ಬೆಳವಣಿಗೆಗಳಿಗೆ ವೈದ್ಯಕೀಯರ ನಡುವೆ ಸೋದರತ್ವ ಮನೋಭಾವನೆ ಮತ್ತು ಸಮನ್ವಯ ಕೊರತೆಯೇ ಇದಕ್ಕೆ ಮುಖ್ಯ ಕಾರಣ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಯು.ಟಿ. ಖಾದರ್ ಹೇಳಿದರು.
ನಗರದಲ್ಲಿ ರವಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಗ್ಯ ಕ್ಷೇತ್ರದಲ್ಲಿ ಬಹಳಷ್ಟು ಸ್ವಯಂಸೇವಾ ಸಂಶೋಧಕರು ಸಂಶೋಧನೆ ನಡೆಸುತ್ತಿದ್ದಾರೆ. ಇಲಾಖೆ ಮತ್ತು ಸಂಶೋಧಕರ ಜತೆ ಸಮನ್ವಯತೆ ಕೊರತೆಯಿಂದ ಇವುಗಳ ಲಾಭವನ್ನು ಆರೋಗ್ಯಕ್ಷೇತ್ರ ಪರಿಣಾಮಕಾರಿಯಗಿ ಪಡೆಯಲು ಸಾಧ್ಯವಾಗುತ್ತಿಲ್ಲ. ಸಂಶೋಧನೆಯ ಅಂಶ ಪರಿಶೀಲಿಸಿ ಕ್ರಮ ಜರಗಿಸುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಆರೋಗ್ಯ ಇಲಾಖೆ ರೂಪಿಸುವ ಯೋಜನೆಗಳನ್ನು ಜಾರಿಗೆ ತರುವ ಪೂರ್ವಭಾವಿಯಾಗಿ 6 ತಿಂಗಳ ಮೊದಲು ಅದರ ಬಗ್ಗೆ ಅಧ್ಯಯನ ನಡೆಸಲು ನಿರ್ಧರಿಸಲಾಗಿದೆ ಎಂದರು.
ರೋಗಿಗಳ ಆರೈಕೆ ಮತ್ತು ಚಿಕಿತ್ಸೆಗಳ ಬಗ್ಗೆ ಹೊಸ ವಿಧಾನಗಳು ಬರುತ್ತಿದ್ದು, ಇವುಗಳ ಬಗ್ಗೆ ತಾಲೂಕು ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ತಜ್ಞರಿಂದ ತರಬೇತಿ ಆಯೋಜಿಸಲಾಗುವುದು. ಪ್ರಸ್ತುತ ಚಿಕಿತ್ಸೆ ಹಾಗೂ ಆರೈಕೆಯಲ್ಲಿ ಅಸಮರ್ಪಕತೆಯಿಂದ ಅನೇಕ ಲೋಪಗಳಾಗುತ್ತಿವೆ. ಕೆಲವು ಸ್ವಯಂಸೇವಾ ಆರೋಗ್ಯ ಸಂಶೋಧನಾ ತಂಡಗಳು ಸೇರಿ ಸ್ವಾಸ್ಥ್ಯ ಕರ್ನಾಟಕ ಎಂಬ ಸಂಸ್ಥೆ ಹುಟ್ಟುಹಾಕಿವೆ. ತರಬೇತಿಯಲ್ಲಿ ಇವರ ನೆರವು ಕೂಡ ಪಡೆಯಲಾಗುವುದು ಎಂದು ಸಚಿವ ಖಾದರ್ ವಿವರಿಸಿದರು.
ಹಾವು ಕಡಿತಕ್ಕೆ ಆವಶ್ಯ ಔಷಧ ತರಿಸಲಾಗಿದ್ದು, ದಾಸ್ತಾನು ಇದೆ. ಕೆಲವು ಆವಶ್ಯ ಔಷಧಗಳ ಬೆಲೆಗಳು ಏರಿಕೆಯಾಗುತ್ತಿರುವ ಬಗ್ಗೆ ಅ. 7ರಂದು ಕೇಂದ್ರ ವೈದ್ಯಕೀಯ ಸಚಿವರ ಜತೆ ಚರ್ಚಿಸಲಾಗುವುದು ಎಂದು ಸಚಿವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಜಿಲ್ಲಾ ಪಂಚಾಯತ್ ಸದಸ್ಯ ಮೆಲ್ವಿಲ್ ಡಿ’ಸೋಜ ಉಪಸ್ಥಿತರಿದ್ದರು.