ಕುಂದಾಪುರ: ಕುಂದಾಪುರ ತಾಲೂಕಿನಾದ್ಯಂತ ವಿಜಯದಶಮಿ ದಿನವಾದ ಶನಿವಾರ ಶ್ರೀ ಶಾರದಾ ದೇವಿ ವಿಸರ್ಜನಾ ಮೆರವಣಿಗೆ ವೂಭವೋಪೇತವಾಗಿ ನಡೆಯಿತು. ಕೋಟೇಶ್ವರ, ಕೋಟ, ಸಾಲಿಗ್ರಾಮ, ಹೆಮ್ಮಾಡಿ, ಕುಂದಾಪುರ ಸಾರ್ವಜನಿಕ ಶಾರದೋತ್ಸವ, ನಾಯಾಯಣಗುರು ಸಂಘ ಮೊದಲಾದೆಡೆ ಸಂಭ್ರಮದಿಂದ ವಿಸರ್ಜನಾ ಮೆರವಣಿಗೆ ನಡೆಯಿತು.
ಕೋಟೇಶ್ವರ ಶಾರದೋತ್ಸವ:
ಇಲ್ಲಿನ ಕೋಟೇಶ್ವರದಲ್ಲಿ ನಡೆದ ದ್ವಿತೀಯ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವದ ವಿಸರ್ಜನಾ ಮೆರವಣಿಗೆ ಶನಿವಾರ ರಾತ್ರಿ ಸಂಭ್ರಮ ಸಡಗರದಿಂದ ಜರುಗಿತು.
ಕೋಟೇಶ್ವರ ಕೋಟಿಲಿಂಗೇಶ್ವರ ರಥಬೀದಿಯಿಂದ ಹೊರಟ ಪುರಮೆರವಣಿಗೆಯಲ್ಲಿ ಹಿಂದೂಜಾಗರಣ ವೇದಿಕೆ ಕೋಟೇಶ್ವರ ಘಟಕದಿಂದ ಹುಲಿವೇಷ ಹಾಗೂ ಬೆಂಕಿ ಸಾಹಸದ ಟ್ಯಾಬ್ಲೋ, ಹುಲಿವೇಷ, ಯಕ್ಷಗಾನ, ಸೇರಿದಂತೆ ವಿವಿಧ ಬಗೆಯ ಟ್ಯಾಬ್ಲೋಗಳು ಜನರನ್ನು ಆಕರ್ಷಿಸಿದವು. ಸಾವಿರಾರು ಜನರು ಪುರಮೆರವಣಿಗೆಯಲ್ಲಿ ಪಾಲ್ಘೊಂಡು ಮೆರವಣಿಗೆಯ ಕಳೆ ಹೆಚ್ಚಿಸಿದರು. ಅಂಕದಕಟ್ಟೆ ಮೂಲಕವಾಗಿ ಬೀಜಾಡಿ ಬೈಪಾಸ್ (ಮುದ್ದೇರ್ಕಟ್ಟೆಯಿಂದ) ಸಾಗಿಬಂತು. ಬಳಿಕ ಕೋಟೇಶ್ವರ ಕೋಟಿತೀರ್ಥ ಸರೋವರದಲ್ಲಿ ಶಾರದಾ ವಿಗ್ರಹವನ್ನು ಜಲಸ್ತಂಭನ ಮಾಡಲಾಯಿತು.
ಈ ಸಂದರ್ಭದಲ್ಲಿ ಶಾರದೋತ್ಸವ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ ಮಾರ್ಕೋಡು, ಗೌರವಾಧ್ಯಕ್ಷ ಎಂ. ಪ್ರಭಾಕರ ಶೆಟ್ಟಿ, ಉಪಾಧ್ಯಕ್ಷರಾದ ರಾಮ ನಾಯ್ಕ, ರಾಜೇಶ್ ಕೊಟೇಶ್ವರ, ವಾದಿರಾಜ್ ಹೆಬ್ಬಾರ್, ಅಶೋಕ್ ಪೂಜಾರಿ ಬೀಜಾಡಿ, ಸುಜಾತ ರಮೇಶ್, ಕಾರ್ಯದರ್ಶಿ ವಿಶ್ವನಾಥ ಆಚಾರ್ಯ ತೆಕ್ಕಟ್ಟೆ, ಸಂಘದ ಪದಾಧಿಕಾರಿಗಳು ಮೊದಲಾದವರು ಉಪಸ್ಥಿತರಿದ್ದರು.