ಮಂಗಳೂರು,ಅ.03 : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ವತಿಯಿಂದ ಶುಕ್ರವಾರದಂದು ಅಕಾಡೆಮಿಯ ಕಛೇರಿಯಲ್ಲಿ ಹಮ್ಮಿಕೊಂಡ ಬ್ಯಾರಿ ಭಾಷಾ ದಿನಾಚರಣೆ ಕಾರ್ಯಕ್ರಮವು ಬಹಳ ವೈಭವಯುತವಾಗಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿಯ ಅಧ್ಯಕ್ಷರಾದ ಜನಾಬ್ ಬಿ.ಎ. ಮೊಹಮ್ಮದ್ ಹನೀಫ್ ವಹಿಸಿದ್ದರು. ಕಾರ್ಯಕ್ರಮವನ್ನು ಬ್ಯಾರಿ ಸಂಸ್ಕೃತಿಯಾದ ದಫ್ ಬಾರಿಸುವುದರೊಂದಿಗೆ ಉದ್ಘಾಟಿಸಿದ್ದು ಸುಧಾ ವಾರಪತ್ರಿಕೆಯ ಉಪಸಂಪಾದಕ ಜನಾಬ್ ಬಿ.ಎಮ್. ಹನೀಫ್ ಭಾಷೆಯ ಪ್ರಾಮುಖ್ಯತೆಯನ್ನು ಕಾರ್ಯಕ್ರಮದ ಆವಶ್ಯಕತೆಯು ಅರ್ಥಪೂರ್ಣವಾಗಿದೆ ಎಂದು ಅಭಿಪ್ರಾಯಪಟ್ಟರು.
ಮಂಗಳೂರು ವಿಶ್ವವಿದ್ಯಾಲಯದ ಪ್ರಾಂಶುಪಾಲರಾದ ಶ್ರೀ ಸತ್ಯನಾರಾಯಣ ಮಲ್ಲಿಪಟ್ಣ ಇವರು ಭಾಷೆಯ ಮಾತಿಗೆ ಸಾಮರ್ಥ್ಯ ಇರುವ ಹಾಗೆ ಲಿಪಿಗೆ ಸಾಮರ್ಥ್ಯ ಇಲ್ಲ. ಹಾಗೂ ಬ್ಯಾರಿ ಭಾಷೆಯ ಕೊಡುಗೆ ವಿಶೇಷವಾದುದೆಂದು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಬಹುಭಾಷಾ ಹಿರಿಯ ಸಾಹಿತಿ ಮುಹಮ್ಮದ್ ಬಡ್ಡೂರು, ಬದ್ರಿಯಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ| ಎನ್. ಇಸ್ಮಾಯಿಲ್ ಹಾಗೂ ಅಲ್-ಬದ್ರಿಯಾ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಹಾಜಿ ಬಿ.ಎಮ್. ಮುಮ್ತಾಝ್ ಅಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಬ್ಯಾರಿ ಭಾಷೆಯಲ್ಲಿ ಮಹತ್ತರ ಸಾಧನೆಗೈದ ಅಬ್ದುಲ್ ಅಝೀಝ್ ಬೈಕಂಪಾಡಿ, ಇಬ್ರಾಹಿಮ್ ತಣ್ಣೀರುಬಾವಿ, ಬಿ.ಎ. ಷಂಶುದ್ದೀನ್ ಮಡಿಕೇರಿ, ರಹೀಮ್ ಬಿ.ಸಿ. ರೋಡ್, ಇಸ್ಮಾಯಿಲ್ ಮೂಡುಶೆಡ್ಡೆ, ಹಂಝ ಮಲಾರ್ ಹಾಗೂ ಮುಹಮ್ಮದ್ ಶರೀಫ್ ನಿರ್ಮುಂಜೆ ಇವರನ್ನು ಅಕಾಡೆಮಿಯ ಪರವಾಗಿ ಸನ್ಮಾನಿಸಲಾಯಿತು.
ಅಕಾಡೆಮಿಯ ರಿಜಿಸ್ಟ್ರಾರ್ ಉಮರಬ್ಬ ಸ್ವಾಗತ ಭಾಷಣ ಮಾಡಿದರು. ಅಕಾಡೆಮಿಯ ಸದಸ್ಯ ಹಾಗೂ ಸದಸ್ಯ ಸಂಚಾಲಕರಾದ ಜನಾಬ್ ಹಮೀದ್ ಪಡುಬಿದ್ರಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಕೊನೆಯದಾಗಿ ಅಕಾಡೆಮಿಯ ಸದಸ್ಯ ಅಬ್ಬಾಸ್ ಕಿರುಗೊಂದ ವಂದಿಸಿದರು. ಈ ಸಂದರ್ಭದಲ್ಲಿ ಹಿರಿಯ ಸಾಹಿತಿಗಳು, ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.