ಮಂಗಳೂರು: ಮಹಾತ್ಮಾ ಗಾಂಧೀಜಿ ಜನ್ಮ ದಿನದ ಅಂಗವಾಗಿ ದ.ಕ.ಜಿಲ್ಲಾ ಕಾಂಗ್ರೆಸ್ ಸೇವಾದಳದ ವತಿಯಿಂದ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧೀಜಿಯವರ ಗೌರರ್ಪಣಾ ಕಾರ್ಯಕ್ರಮದಲ್ಲಿ ಗಾಂಧಿ ಪ್ರತಿಮೆಯೆದುರೇ ಕಾಂಗ್ರೆಸ್ ಕಾರ್ಯಕರ್ತರು ವಾಕ್ಸಮರ ನಡೆಸುವ ಮೂಲಕ ಅಶಾಂತಿ ಉಂಟು ಮಾಡಿದ ವಿಲಕ್ಷಣ ಘಟನೆ ಗುರುವಾರ ನಗರದ ಪುರಭವನದ ಆವರಣದಲ್ಲಿ ನಡೆದಿದೆ.
ಗಾಂಧಿ ಜಯಂತಿ ಪ್ರಯುಕ್ತ ನಗರದ ಪುರಭವನದ ಮುಂಭಾಗದಲ್ಲಿರುವ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಕಾರ್ಯಕ್ರಮದಲ್ಲಿ ಶಾಸಕ ಜೆ.ಆರ್.ಲೋಬೋ, ವಿಧಾನಪರಿಷತ್ ಸದಸ್ಯ ಐವನ್ ಡಿ’ಸೋಜಾ, ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಮೇಯರ್ ಮಹಾಬಲ ಮಾರ್ಲ, ಉಪಮೇಯರ್ ಕವಿತಾ, ಮೂಡದ ಮಾಜಿ ಅಧ್ಯಕ್ಷ ಸುರೇಶ್ ಬಲ್ಲಾಳ್, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಸಹಿತ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳ ಸಮಕ್ಷಮದಲ್ಲೇ ಕಾರ್ಯಕರ್ತರು ವಾಕ್ಸಮರ ನಡೆಸಿದ್ದಾರೆ.
ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಗಾಂಧೀಜಿಯವರ ಆದರ್ಶ ಪಾಲಿಸುವ ಬಗ್ಗೆ ಮಾತನಾಡಿದ ಕಾಂಗ್ರೆಸ್ ಜಿಲ್ಲಾ ಉಸ್ತುವಾರಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಅವರು ಮಹಾತ್ಮಾ ಗಾಂಧಿಯವರ ಆದರ್ಶ, ಅವರು ಪಾಲಿಸುತ್ತಿದ್ದ ಶಿಸ್ತು ಮುಂತಾದ ವಿಚಾರಗಳ ಬಗ್ಗೆ ಹೇಳಿ ಕಾಂಗ್ರೆಸ್ ಕಾರ್ಯಕರ್ತರು ಕೂಡ ಅವರಂತೆ ಶಿಸ್ತು ಪಾಲನೆ ಮಾಡಬೇಕು ಎಂದು ಕರೆ ಕೊಟ್ಟರು.
ಆದರೆ ಹಿಂದಿನ ದಿನ ಸ್ವತಹ ಕೋಡಿಜಾಲ್ ಅವರೇ ಶಿಸ್ತು ಪಾಲನೆ ಮಾಡದೇ ಅಶಿಸ್ತು ತೋರಿದ ಘಟನೆ ಮಾಸುವ ಮುನ್ನವೇ ಇದೀಗ ಕಾರ್ಯಕರ್ತರಿಗೆ ಶಿಸ್ತಿನ ಪಾಠ ಕಲಿಸಿದ ಕೋಡಿಜಾಲ್ ಅವರ ಈ ಮಾತಿನಿಂದ ಕೆರಳಿದ ಕಾರ್ಯಕರ್ತರು ಅಕ್ರೋಷ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಎರಡೂ ಬಣಗಳ ಮಧ್ಯೆ ಮಾತಿನ ಚಕಮಕಿ ನಡೆದು ಹೊಡೆದಾಡುವ ಮಟ್ಟ ತಲುಪಿದೆ. ಈ ಸಂದರ್ಭದಲ್ಲಿ ದ.ಕ.ಜಿಲ್ಲಾ ಯುವ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ಅರುಣ್ ಕುವೆಲ್ಲೋ ಅವರು ಕೋಡಿಜಾಲ್ ಅವರ ಮಾತಿಗೆ ಅಕ್ಷೇಪ ವ್ಯಕ್ತಪಡಿಸಿದ್ದರಿಂದ ಪ್ರಕರಣ ಮತ್ತಷ್ಟು ಜಟಿಗೊಂಡಿತ್ತು.
ಕೊನೆಗೆ ಶಾಸಕ ಜೆ.ಆರ್.ಲೋಬೋ, ವಿಧಾನಪರಿಷತ್ ಸದಸ್ಯ ಐವನ್ ಡಿ’ಸೋಜಾ, ಸೇರಿದಂತೆ ಇತರ ಮುಖಂಡರು ಎರಡೂ ತಂಡಗಳನ್ನು ಸಮಾಧಾನ ಪಡಿಸುವಲ್ಲಿ ಯಶಸ್ವಿಯದರು.. ಆದರೆ ದೇಶಕ್ಕೆ ಶಾಂತಿ ಸಂದೇಶವನ್ನು ನೀಡಿದಂತಹ ಮಹನೀಯರ ಪ್ರತಿಮೆಯೆದುರೇ ಇಂತಹ ಒಂದು ಅಶಾಂತಿ ಕದಡುವ ಕೆಲಸ ಮಾಡಿರುವ ಕಾಂಗ್ರೆಸ್ ಕಾರ್ಯಕರ್ತರ ಬಗ್ಗೆ ಸಾರ್ವಜನಿಕರು ಮರುಕಪಡುವಂತಾಯಿತು.
ಮುಖ್ಯಮಂತ್ರಿಗಳ ಎದುರೇ ತರಾಟೆ :
ಬುಧವಾರ ಮಂಗಳೂರಿಗೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ಹೋಗಿದ್ದ ಇಬ್ರಾಹಿಂ ಕೋಡಿಜಾಲ್ ಅವರಿಗೆ ಒಳಕ್ಕೆ ಪ್ರವೇಶಿಸಲು ಪಾಸ್ ಸಿಕ್ಕಿರಲಿಲ್ಲ. ಶಾಸಕ ಜೆ.ಆರ್.ಲೋಬೋ ಅವರು ಮುಖ್ಯಮಂತ್ರಿ ಸ್ವಾಗತಿಸಲು ಪ್ರವೇಶ ಪಡೆದು ಹೋಗಿದ್ದರು. ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷರಾಗಿರುವ ಕೋಡಿಜಾಲ್ ಇಬ್ರಾಹಿಂ ಅವರಿಗೆ ವಿಮಾನ ನಿಲ್ದಾಣದ ಒಳಕ್ಕೆ ಪ್ರವೇಶ ನಿರಾಕರಿಸಲಾಗಿತ್ತು. ಇದರಿಂದ ಆಕ್ರೋಷಿತರಾದ ಇಬ್ರಾಹಿಂ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಸಮ್ಮುಖದಲ್ಲೇ ಶಾಸಕರನ್ನು ತರಾಟೆಗೆ ತೆಗೆದುಕೊಳ್ಳುವ ಮೂಲಕ ಅಶಿಸ್ತು ತೋರಿದ್ದರು. ಆದರೆ ಸ್ವತಹ ಶಿಸ್ತು ಪಾಲಿಸಿದ ಇಬ್ರಾಹಿಂ ಅವರು ಇಂದು ಶಿಸ್ತು ಪಾಲನೆ ಬಗ್ಗೆ ಮಾತನಾಡಿರುವುದು ಕಾರ್ಯಕರ್ತರ ಅಕ್ರೋಷಕ್ಕೆ ಕಾರಣವಾಗಿತ್ತು.