ಕರಾವಳಿ

ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ಜಾಮೀನು : ಸಾರ್ವಜನಿಕರ ಪ್ರತಿಭಟನೆಗೆ ಮಣಿದ ಪೊಲೀಸರಿಂದ ಮತ್ತೆ ಬಂಧನ

Pinterest LinkedIn Tumblr

Bantwal_Student_Protest_1

ಬಂಟ್ವಾಳ: ವಿದ್ಯಾರ್ಥಿನಿಯ ಮಾನಭಂಗಕ್ಕೆ ಯತ್ನಿಸಿದ ಪ್ರಕರಣವೊಂದು ಬುಧವಾರ ಕೆಲವು ಪ್ರಸಹನಕ್ಕೆ ಕಾರಣವಾಯಿತು. ವಿದ್ಯಾರ್ಥಿನಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಸಂಗಬೆಟ್ಟು ಗ್ರಾಮದ ಕೆರೆಬಳಿ ನಿವಾಸಿ ಅಬ್ಬಾಸ್ ಎಂಬವರ ಪುತ್ರ ಸಿರಾಜ್ ಎಂಬಾತನನ್ನು ಮಂಗಳವಾರ ಬಂಧಿಸಲಾಗಿತ್ತಾದರೂ, ಬುಧವಾರ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದನ್ನು ಭಾರತೀಯ ಜನತಾಪಕ್ಷ ಪ್ರತಿಭಟಿಸಿದ ಹಿನ್ನೆಲೆಯಲ್ಲಿ ಮತ್ತೆ ಆತನನ್ನು ಬಂಧಿಸಿ ಪೊಲೀಸರು ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿದ್ದಾರೆ.

Bantwal_Student_Protest_2

ಸಿದ್ಧಕಟ್ಟೆಯಲ್ಲಿ ಪ್ರತಿಭಟನೆ:

ಆರೋಪಿಯನ್ನು ಯಾವುದೇ ಶಿಕ್ಷೆಗೊಳಪಡಿಸದೇ ಮಧ್ಯಾಂತರ ಜಾಮಿನೀನ ಮೇಲೆ ಬಿಡುಗಡೆಗೊಳಿಸಿರುವ ಪೋಲೀಸರ ಕ್ರಮವನ್ನು ಖಂಡಿಸಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಂದ ಬುಧವಾರ ಸಿದ್ದಕಟ್ಟೆಯಲ್ಲಿ ಬಹತ್ ಪ್ರತಿಭಟನೆ ನಡೆಯಿತು. ವಿದ್ಯಾರ್ಥಿನಿಯೋರ್ವಳು ಕಾಲೇಜಿನಿಂದ ಸಂಜೆ ಮನೆಗೆ ಹಿಂದಿರುಗುತ್ತಿದ್ದ ವೇಳೆ ಕೈ ಹಿಡಿದೆಳೆದು ಮಾನ ಭಂಗಕ್ಕೆ ಯತ್ನಿಸಿದ್ದಲ್ಲದೆ ಕೊಲೆ ಬೆದರಿಕೆಯೊಡ್ಡಿದ ಆರೋಪದಡಿ ಪೊಲಿಸರಿಂದ ಬಂಧಿತನಾದ ಆರೋಪಿ ಸಿರಾಜ್‌ಗೆ ಯಾವುದೇ ಶಿಕ್ಷೆ ವಿಧಿಸದೆ ಬಿಡುಗಡೆ ಮಾಡಿರುವ ಕ್ರಮದ ವಿರುದ್ದ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಘಟನೆಯನ್ನು ಖಂಡಿಸಿ ಸಿದ್ದಕಟ್ಟೆಯಲ್ಲಿ ವ್ಯಾಪಾರಿಗಳು ಬೆಳಗ್ಗಿನಿಂದಲೇ ಅಂಗಡಿಗಳ ಬಾಗಿಲು ತೆರೆಯದೇ ಸ್ವಯಂ ಪ್ರೇರಿತರಾಗಿ ಬಂದ್ ಆಚರಿಸಿದರು. ರಿಕ್ಷಾ ಮೊದಲಾದ ವಾಹನ ಚಾಲಕರು ಸಂಚಾರ ಸ್ಥಗಿತಗೊಳಿಸಿ ಪ್ರತಿಭಟನೆಗೆ ಬೆಂಬಲ ನೀಡಿದರು. ವಿದ್ಯಾರ್ಥಿಯ ಮೇಲೆ ನಡೆದ ಮಾನಭಂಗ ಯತ್ನ ಪ್ರಕರಣವನ್ನು ವಿರೋಧಿಸಿ ಸಿದ್ದಕಟ್ಟೆ ಜಂಕ್ಷನ್‌ನಲ್ಲಿ ಪ್ರತಿಭಟನಾ ಸಭೆ ನಡೆಯಿತು.

Bantwal_Student_Protest_3

ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಬಿಜೆಪಿ ಮುಖಂಡರಾದ ರಾಜೆಶ್ ನಾಯ್ಕ್ ಉಳೇಪಾಡಿಗುತ್ತು, ತುಂಗಪ್ಪ ಬಂಗೇರ, ಜಿ.ಆನಂದ, ಜಗದೀಶ ಅಧಿಕಾರಿ. ಸುಲೋಚನಾ ಭಟ್, ಜಿಲ್ಲಾ ಪಂಚಾಯತ್ ಸದಸ್ಯೆ ನಳಿನಿ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯ ವಸಂತ ಅಣ್ಣಳಿಕೆ, ವಿಶ್ವ ಹಿಂದೂ ಪರಿಷತ್‌ನ ಜಿಲ್ಲಾ ಕಾರ್ಯದ್ಯುಕ್ಷ ಜಿತೇಂದ್ರ ಕೊಟ್ಟಾರಿ ಮತ್ತಿತರರು ವೇದಿಕೆಯಲ್ಲಿದ್ದರು. ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಸಭೆಯಲ್ಲಿ ಭಾಗವಹಿಸಿದ್ದರು. ವಿವಿಧ ಕಾಲೇಜುಗಳಿಂದಲೂ ಭಾರಿ ಸಂಖ್ಯೆಯಲ್ಲಿವಿದ್ಯಾರ್ಥಿಗಳು ಆಗಮಿಸಿದ್ದರು.

ಮತ್ತೆ ಬಂಧನ: ಪೊಲೀಸರ ಎಡವಟ್ಟಿನಿಂದಾಗಿ ಮಧ್ಯಂತರ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದ ಆರೋಪಿ ಸಿರಾಜ್‌ನನ್ನು ಬುಧವಾರ ಮತ್ತೆ ನಾಯಾಲಯಕ್ಕೆ ಹಾಜರುಪಡಿಸಲಾಯಿತು. ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದ್ದಾರೆ. ಈ ವಿಚಾರವನ್ನು ಪ್ರತಿಭಟನಾ ಸಭೆಯಲ್ಲಿ ಬಂಟ್ವಾಳ ಪೊಲೀಸ್ ವತ್ತ ನಿರೀಕ್ಷ ಬೆಳ್ಳಿಯಪ್ಪ ಘೋಷಿಸಿದ ಬಳಿಕ ಪ್ರತಿಭಟನೆಯನ್ನು ಮುಕ್ತಾಯಗೊಳಿಸಲಾಯಿತು.

Bantwal_Student_Protest_4

ಚಿತ್ರೀಕರಣ ಮಾಡುತ್ತಿದವನಿಗೆ ಹಲ್ಲೆ: ಪ್ರತಿಭಟನಾ ಸಭೆಯ ದಶ್ಯಗಳನ್ನು ತನ್ನ ಮೊಬೈಲ್ ಮೂಲಕ ಚಿತ್ರೀಕರಣ ಮಾಡುತ್ತಿದ್ದ ಯುವಕನಿಗೆ ಈ ಸಂದರ್ಭ ಪ್ರತಿಭಟನಾ ನಿರತ ಯುವಕರು ಹಲ್ಲೆ ನಡೆಸಿದರು. ಇದರಿಂದಾಗಿ ಕೆಲ ಕಾಲ ಸ್ಥಳದಲ್ಲಿ ಬಿಗುವಿನ ವಾತವರಣ ನಿರ್ಮಾಣ ಗೊಂಡಿತು. ತಕ್ಷಣ ಪೊಲೀಸರು ಮಧ್ಯ ಪ್ರವೇಶಿಸಿ ದೃಶ್ಯ ಸೆರೆ ಹಿಡಿಯುತ್ತಿದ್ದಾನನ್ನು ಯುವಕರ ಕೈಯಿಂದ ರಕ್ಷಿಸಿ ವಶಕ್ಕೆ ಪಡೆದುಕೊಂಡು ಠಾಣೆಗೆ ಕರೆದೊಯ್ದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಬಂದೋಬಸ್ತ್‌ಗಾಗಿ ಹೆಚ್ಚಿನ ಪೊಲೀಸರನ್ನು ಸಿದ್ದಕಟ್ಟೆಯಲ್ಲಿ ನಿಯೋಜಿಸಲಾಗಿತ್ತು. ಎಎಸ್ಪಿ ರಾಹುಲ್ ಕುಮಾರ್, ವತ್ತನಿರೀಕ್ಷ ಬೆಳಿಯಪ್ಪ, ನಗರ ಪೊಲೀಸ್ ಠಾಣಾ ಎಸೈ ನಂದಕುಮಾರ್, ಗ್ರಾಮಾಂತರ ಠಾಣಾ ಎಸೈ ನಾಗರಾಜ್, ಪುಂಜಾಲಕಟ್ಟೆ ಠಾಣಾ ಎಸೈ ಲತೇಶ್ ಕುಮಾರ್ ಹಾಗೂ ಸಿಬ್ಬಂದಿಗಳು ಹಾಜರಿದ್ದರು.

Bantwal_Student_Protest_5

ಪ್ರಕರಣದ ಹಿನ್ನೆಲೆ:

ಬಂಟ್ವಾಳದ ಖಾಸಗಿ ಕಾಲೇಜೊಂದರ ಪ್ರಥಮ ಪದವಿ ವಿದ್ಯಾರ್ಥಿನಿ ಸಂಗಬೆಟ್ಟುವಿನ ವೀರಭದ್ರ ದೇವಸ್ಥಾನದ ಪಕ್ಕದ ರಸ್ತೆಯಲ್ಲಿ ತನ್ನ ಮನೆಯತ್ತ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿ ಸಿರಾಜ್ ಪಿಕಫ್ ವಾಹನದಲ್ಲಿ ಬಂದು ಇಳಿದವನೇ ಆಕೆಯ ಬಳಿ ಬಂದು ಆಕೆಯ ಕೈಯನ್ನು ಹಿಡಿದೆಳೆದು ಮಾನಭಂಗಕ್ಕೆ ಯತ್ನಿಸಿದ್ದ ಎನ್ನಲಾಗಿದೆ. ಈ ವೇಳೆ ಯುವತಿ ಜೋರಾಗಿ ಬೊಬ್ಬೆ ಹೊಡೆದಾಗ ಆಕೆಯ ಮಾವ ಬರುತ್ತಿರುವುದನ್ನು ಕಂಡು ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಕೊಲ್ಲುವುದಾಗಿ ಬೆದರಿಕೆಯೊಡ್ಡಿ ಆತ ಮೊದಲೇ ಮುಖ್ಯ ರಸ್ತೆಯಲ್ಲಿ ನಿಲ್ಲಿಸಿದ್ದ ತನ್ನ ಪಿಕಪ್ ವಾಹನದಲ್ಲಿ ಪರಾರಿಯಾಗಿದ್ದ .

ವಿಷಯ ತಿಳಿಯುತ್ತಿದ್ದಂತೆ ಪರಿಸರದಲ್ಲಿ ಸಾರ್ವಜನಿಕರು ಹಾಗೂ ಸ್ಥಳಕ್ಕಾಗಮಿಸಿದ ಪೊಲೀಸರು ಪಿಕಪ್ ವಾಹನದ ಬಗ್ಗೆ ಪರಿಶೀಲನೆ ನಡೆಸಿದ್ದರು. ಯುವತಿಯ ಚಿಕ್ಕಪ್ಪ ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಯುವಕನನ್ನು ಬಂದಿಸಿದ್ದರು. ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸಿ ಮದ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು.

Write A Comment