ಮಂಗಳೂರು,ಅ.01: ದೇಶದಲ್ಲಿ ಭಕ್ತಿಯೇ ಪ್ರಧಾನ ಹೊರತು ವೇದ, ಶಾಸ್ತ್ರಗಳಲ್ಲ ಎಂದು ಕುದ್ರೋಳಿ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ರೂವಾರಿ ಹಾಗೂ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಗುಡುಗಿದ್ದಾರೆ
ಬುಧವಾರ ನಗರದ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕುದ್ರೋಳಿ ಕ್ಷೇತ್ರದಲ್ಲಿ ದಲಿತ ವಿಧವಾ ಮಹಿಳೆಯರಿಬ್ಬರಿಗೆ ಅರ್ಚಕಿಯ ಸ್ಥಾನಮಾನ ನೀಡಿ ಅರ್ಚಕರನ್ನಾಗಿ ನೇಮಕ ಮಾಡುವ ಮೂಲಕ ಕ್ಷೇತ್ರ ನೂತನ ಕ್ರಾಂತಿಯನ್ನು ಮಾಡಿದೆ. ಆದರೆ ಕೆಲವೇ ಕೆಲವೇ ಮಂದಿ ಈ ಬಗ್ಗೆ ವಿರೋಧ ವ್ಯಕ್ತಪಡಿಸಿರುವುದು ಗಮನಕ್ಕೆ ಬಂದಿದೆ. ಅಂಥಹ ವಿರೋಧಿಗಳಿಗೆ ಒಂದೇ ಒಂದು ಪ್ರಶ್ನೆ.. ಎಲ್ಲಾ ವಿಷಗಳಲ್ಲೂ ಮಹಿಳೆಯರಿಗೆ ಸ್ಥಾನಮಾನ ನೀಡಿ ಗೌರವಿಸುವ ನಾವು ಅವರನ್ನು ವಿಧವೆಯರಾದ ತಕ್ಷಣ ಸಮಾಜ ಕಟ್ಟುಪಾಡುಗಳಿಂದ ಹೊರಗಿಡಲು ಏನು ಕಾರಣ… ದಲಿತರು, ವಿಧವೆಯರು, ಮಹಿಳೆಯರು ದೇವಸ್ಥಾನದಲ್ಲಿ ಪೂಜೆ ಮಾಡಬಾರದೆಂದು ನಾವೇ ತೀರ್ಮಾನಿಸಿರುವುದಲ್ಲದೆ ದೇವರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿಲ್ಲ. ಮನೆಯಲ್ಲಿ ಮಹಿಳೆಯರು ಪೂಜೆ ಮಾಡಬಹುದು ಮತ್ತೇಕೆ ದೇವಸ್ಥಾನದಲ್ಲಿ ಪೂಜೆ ಮಾಡಬಾರದು ಎಂದು ಪ್ರಶ್ನಿಸಿದರು.
ಶಾಸ್ತ್ರಗಳು , ವೇದಗಳೇ ಮೇಲೂ ಎಂಬುದು ನಮ್ಮ ಮನಸ್ಸಿನಲ್ಲಿದೆ. ಆದರೆ ಭಕ್ತಿಯೊಂದಿದ್ದರೆ ಮಂತ್ರ, ಶಾಸ್ತ್ರಗಳ ಅವಶ್ಯಕತೆ ಉದ್ಭವವಾಗುದಿಲ್ಲ ಎಂಬುದನ್ನು ನಾರಾಯಣ ಗುರುಗಳು ಪ್ರತಿಪಾದಿಸಿದ್ದರು. ಹಿಂದೂಗಳ ಪವಿತ್ರ ಸ್ಥಳ ಕಾಶಿಯಲ್ಲಿ ಭಕ್ತರೇ ಪೂಜೆ ಸಲ್ಲಿಸುತ್ತಾರೆ. ತಿರುಪತಿಯಲ್ಲಿ ಮಂತ್ರ ಪಠನೆ ಮಾಡುವುದಿಲ್ಲ. ಹಾಗಾದರೆ ಕುದ್ರೋಳಿ ಕ್ಷೇತ್ರದ ಬಗ್ಗೆ ಯಾಕೆ ಅಪಸ್ವರ ಎಂದರು.ಧರ್ಮ, ಶಾಸ್ತ್ರ ದೇವರ ಹೆಸರಲ್ಲಿ ಭಯ ಹುಟ್ಟಿಸುವ ಕೆಲಸವಾಗುತ್ತಿದೆ ಎಂದು ಆರೋಪಿಸಿದ ಪೂಜಾರಿಯವರು ಮುಂದೊಂದು ದಿನ ಇದೇ ಭಯೋತ್ಪಾದನೆಯಾಗಿ ಬದಲಾಗಲಿದೆ. ಇದರ ವಿರುದ್ಧ ಹೋರಾಟ ಅನಿವಾರ್ಯವಾಗಲಿದೆ ಎಂದು ಹೇಳಿದರು.
ಕೆಲವು ದಿನಗಳ ಹಿಂದೆ ಕುದ್ರೋಳಿ ಕ್ಷೇತ್ರದಲ್ಲಿ ಮಂಗಳೂರು ದಸರಾ ಉದ್ಘಾಟನೆಗೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮುಜೂರಾಯಿ ಇಲಾಖೆಯ ಅಧೀನದಲ್ಲಿರುವ ದೇವಸ್ಥಾನಗಳಲ್ಲಿ ಮಹಿಳಾ ಅರ್ಚಕಿಯರನ್ನು ನೇಮಿಸುವ ಬಗ್ಗೆ ಚಿಂತಿಸುವುದಾಗಿ ತಿಳಿಸಿದ್ದರು. ಅಲ್ಲದೆ ಇಂದು ಮಂಗಳೂರಿಗೆ ಆಗಮಿಸಿದ ಅವರು ಮಾಧ್ಯಮದವರೊಂದಿಗೆ ಈ ವಿಷಯವಾಗಿ ಪ್ರಸ್ತಾಪಿಸಿದರು. ಅವರು ಈ ಬಗ್ಗೆ ತೀರ್ಮಾನ ಕೈಗೊಳ್ಳಲು ಸ್ವತಂತ್ರರು. ಮಾತ್ರವಲ್ಲದೇ ಈ ಬಗ್ಗೆ ಸಚಿವ ಸಂಪುಟದ ಅನುಮೋದನೆ ಪಡೆಯಬೇಕೆಂದಿಲ್ಲ. ಆದರೆ ಅನುಮೋದನೆ ಪಡೆದು ಇದು ಕಾರ್ಯರೂಪಕ್ಕೆ ಬಂದಲ್ಲಿ ರಾಜ್ಯದ ಇತಿಹಾಸದಲ್ಲೇ ಒಂದು ಹೊಸ ಚರಿತ್ರೆಯೇ ನಿರ್ಮಾಣವಾಗುತ್ತದೆ. ಜೊತೆಗೆ ಇಂತಹ ಒಂದು ಕ್ರಾಂತಿಕಾರಿಕ ಬದಲಾವಣೆಯನ್ನು ತಂದತಹ ಭಾರತದ ಪ್ರಥಮ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಸಿದ್ದರಾಮಯ್ಯನವರು ಪಾತ್ರರಾಗುತ್ತಾರೆ ಎಂದು ಪೂಜಾರಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್.ಸಾಯಿರಾಮ್, ಉಪಾಧ್ಯಕ್ಷ ರಾಘವೇಂದ್ರ ಕೂಳೂರು, ಖಜಾಂಚಿ ಪದ್ಮರಾಜ್ ಆರ್., ಟ್ರಸ್ಟಿಗಳಾದ ಬಿ.ಕೆ.ತಾರಾನಾಥ, ಕೆ.ಮಹೇಶ್ವರಚಂದ್ರ, ಅಭಿವೃದ್ಧಿ ಸಮಿತಿ ಸದಸ್ಯರಾದ ಹರಿಕೃಷ್ಣ ಬಂಟ್ವಾಳ್, ಡಾ.ಬಿ.ಜಿ.ಸುವರ್ಣ, ಎಂ.ಶೇಖರ ಪೂಜಾರಿ, ಡಿ.ಡಿ.ಕಟ್ಟೆಮಾರ್, ಲೀಲಾಕ್ಷ ಕರ್ಕೇರಾ ಮುಂತಾದವರು ಉಪಸ್ಥಿತರಿದ್ದರು.