ಉಡುಪಿ: ಉಡುಪಿ ಡಿವೈಎಸ್ಪಿಪ್ರಭುದೇವ ಮಾನೆ ಅವರ ಕಚೇರಿ ಮತ್ತು ಮನೆಗೆ ಸೆ.30ರಂದು ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಆದಾಯಕ್ಕಿಂತ ಹೆಚ್ಚಿನ ಸಂಪತ್ತನ್ನು ಪತ್ತೆ ಮಾಡಿದ್ದಾರೆ. ಈ ಸಂದರ್ಭ ಮಹತ್ವದ ದಾಖಲೆಗಳು ಲಭಿಸಿದೆ.
ಉಡುಪಿ ಡಿವೈಎಸ್ಪಿ ಕಚೇರಿ ಮತ್ತು ಬ್ರಹ್ಮಗಿರಿಯಲ್ಲಿರುವ ಬಾಡಿಗೆ ಫ್ಲ್ಯಾಟ್ಗೆ ಹಾಗೂ ಹುಬ್ಬಳ್ಳಿಯಲ್ಲಿರುವ ಸ್ವಂತ ಮನೆಗೆ ಮಂಗಳವಾರ ಏಕಕಾಲದಲ್ಲಿ ದಾಳಿ ಮಾಡಲಾಗಿದೆ.
ಊಡುಪಿ ಬ್ರಹ್ಮಗಿರಿಯ ಫ್ಲ್ಯಾಟ್ನಲ್ಲಿ ಸುಮಾರು 5 ಲ.ರೂ. ಮೌಲ್ಯದ ಗೃಹೋಪಕರಣಗಳು, 20,000 ರೂ. ನಗದು ಹಾಗೂ 100 ಗ್ರಾಂ ಚಿನ್ನ ದೊರೆತಿದೆ. ಹುಬ್ಬಳ್ಳಿಯಲ್ಲಿರುವ ಸ್ವಂತ ಮನೆ ಸುಮಾರು 30 ಲ.ರೂ. ಬೆಲೆಬಾಳುವಂತದ್ದಾಗಿದ್ದು ಇದನ್ನು ಏಳು ಮಂದಿಗೆ ಬಾಡಿಗೆಗೆ ನೀಡಿರುವುದು ಗೊತ್ತಾಗಿದೆ. ಅಲ್ಲದೆ ಧಾರವಾಢ ಕಲಗಡಗಿಯಲ್ಲಿ 4 ಎಕರೆ ತೋಟ ಇವರ ಹೆಸರಿನಲ್ಲಿದೆ ಎಂದು ದಾಳಿಯ ನೇತೃತ್ವ ವಹಿಸಿದ್ದ ಲೋಕಾಯುಕ್ತ ಎಸ್ಪಿ ಸದಾನಂದ ವರ್ಣೆಕರ್ ಅವರು ತಿಳಿಸಿದ್ದಾರೆ.
ಫ್ಲ್ಯಾಟ್ ಮೇಲೆ ದಾಳಿ ಮಾಡುವಾಗ ಪ್ರಭುದೇವ ಮಾನೆ ಹಾಗೂ ಅವರ ಕುಟುಂಬದವರಿದ್ದು ತನಿಖೆಗೆ ಯಾವುದೇ ರೀತಿಯಲ್ಲಿ ಆಕ್ಷೇಪ, ಅಡ್ಡಿ ವ್ಯಕ್ತಪಡಿಸಲಿಲ್ಲ ಎಂದು ತಿಳಿದುಬಂದಿದೆ.
ಒಟ್ಟಿನಲ್ಲಿ ಲೋಕಾಯುಕ್ತ ಅಧಿಕಾರಿಯಾಗಿ ಭ್ರಷ್ಟರ ವಿರುದ್ಧ ಸಮರ ಸಾರಿದ್ದ ಮಾನೆ ಈಗ ಲೋಕಾ ಅಧಿಕಾರಿಗಳ ತನಿಖೆಗೆ ತಲೆಬಾಗಬೇಕಾದ ಪರಿಸ್ಥಿತಿ ತಂದುಕೊಂಡಿದ್ದಾರೆ. ಮಾನೆ ವಿರುದ್ಧ ಸದ್ಯ ಪ್ರಕರಣ ದಾಖಲಾಗಿದೆ.