ಉಡುಪಿ: ಸರಕಾರದ ಜನಪರವಾದ ಆರೋಗ್ಯ ಸಂಬಂಧಿತ ಸೇವೆಗಳನ್ನು ಯಥಾವತ್ತಾಗಿ ಬಡವರಿಗೆ ತಲುಪಿಸುವ ಕೆಲಸವನ್ನು ಸಂಘಟನೆಗಳು ಮಾಡುವ ಅಗತ್ಯ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ನಗರಾಭಿವೃದ್ಧಿ ಸಚಿವರಾದ ವಿನಯ್ ಕುಮಾರ್ ಸೊರಕೆ ಹೇಳಿದರು.
ಅವರು ಭಾನುವಾರ ಕಲ್ಯಾಣಪುರ ಮಿಲಾಗ್ರಿಸ್ ತ್ರಿಶತಮಾನೋತ್ಸವ ಸಭಾಂಗಣದಲ್ಲಿ ನಡೆದ ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಕಲ್ಯಾಣಪುರ ವಲಯದ ರಜತ ಮಹೋತ್ಸವ ಹಾಗೂ ಮಣಿಪಾಲ ಕೊಂಕಣಿ ಆರೋಗ್ಯ ಕಾಡ್ ಇದರ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಹೆಲ್ತ್ ಕಾರ್ಡ್ ವಿತರಿಸಿ ಮಾತನಾಡಿದರು.
ಕ್ರೈಸ್ತ ಸಮುದಾಯ ಆರೋಗ್ಯ ಹಾಗೂ ಶಿಕ್ಷಣ ವ್ಯವಸ್ಥೆಗೆ ನೀಡಿದ ಸೇವೆ ನಿಜಕ್ಕೂ ಶ್ಲಾಘನಾರ್ಹ ಎಂದ ಸಚಿವರು ಪ್ರತಿಯೊಬ್ಬರು ರೋಗ ಬಂದ ಮೇಲೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರುವ ಬದಲು ನಾವು ಸೇವಿಸುವ ಆಹಾರದಲ್ಲಿ ಹಿತವನ್ನು ಕಾಪಾಡಿ ಆರೋಗ್ಯದ ಬಗ್ಗೆ ಜಾಗೃತಿ ವಹಿಸುವುದು ಅಗತ್ಯ. ಆನಾರೋಗ್ಯ ಪೀಡಿತರಾದವರಿಗೆ ರಿಯಾಯತಿ ದರದಲ್ಲಿ ಚಿಕಿತ್ಸೆ ಒದಗಿಸುವ ಮಹತ್ಕಾರ್ಯವನ್ನು ಮಣಿಪಾಲ ಆಸ್ಪತ್ರೆ ಮಾಡುತ್ತಿದ್ದು ಇಂತಹ ಯೋಜನೆಯನ್ನು ಜನಸಾಮಾನ್ಯರಿಗೆ ತಲುಪಿಸುವ ಕೆಲಸವನ್ನು ಸಂಘ ಸಂಸ್ಥೆಗಳು ಮಾಡಬೇಕು ಎಂದರು.
ರಜತ ಮಹೋತ್ಸವವನ್ನು ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ನಿರ್ದೇಶಕರಾದ ವಂ. ಫರ್ಡಿನಾಂಡ್ ಗೊನ್ಸಾಲ್ವಿಸ್ ಉದ್ಘಾಟಿಸಿ ಕೆಥೊಲಿಕ್ ಸಭಾ ಸಂಸ್ಥೆಯ ಸದಸ್ಯರು ಸಮಾಜದಲ್ಲಿ ಜಾಗೃತಿಯನ್ನು ಹುಟ್ಟುಹಾಕುವುದರೊಂದಿಗೆ ಇತರ ಸಮುದಾಯದೊಂದಿಗೆ ಬೆರೆತು ಉತ್ತಮ ನಾಗರಿಕರಾಗಿ ಬದುಕಿ ಬಾಳಬೇಕು ಎಂದರು.
ಕೆಥೊಲಿಕ್ ಸಭಾ ಕಲ್ಯಾಣಪುರ ವಲಯದಲ್ಲಿ ಕಳೆದ ೨೫ ವರ್ಷಗಳಲ್ಲಿ ಸೇವೆ ಸಲ್ಲಿಸಿದ ಮಾಜಿ ಅಧ್ಯಕ್ಷರುಗಳನ್ನು ಸನ್ಮಾನಿಸಲಾಯಿತು. ಕೆಥೊಲಿಕ್ ಸಭಾ ಕೇಂದ್ರೀಯ ಸಮಿತಿಯ ಮಾಜಿ ಅಧ್ಯಕ್ಷ ಡಾ|ಜೆರಾಲ್ಡ್ ಪಿಂಟೊ ಅವರ ಸಣ್ಣ ಕಥೆಗಳ ಸಂಗ್ರಹ ‘ಅಮರ್ ಉಮರ್’ ನ್ನು ಸಚಿವರು ಅನಾವರಣ ಗೊಳಿಸಿದರು.
ಮಣಿಪಾಲ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಡಾ|ಜಿಕೆ ಪ್ರಭು, ಕಲ್ಯಾಣಪುರ ಮಿಲಾಗ್ರಿಸ್ ಚರ್ಚಿನ ವಂ ಸ್ಟಾನಿ ಬಿ ಲೋಬೊ, ಕೇಂದ್ರೀಯ ಸಮಿತಿಯ ಅಧ್ಯಕ್ಷ ಎಲ್ರೋಯ್ ಕಿರಣ್ ಕ್ರಾಸ್ತಾ, ಕಾರ್ಯದರ್ಶಿ ಮೇರಿ ಡಿ’ಸೋಜಾ, ಸ್ಥಳೀಯ ಘಟಕಾಧ್ಯಕ್ಷೆ ಫೆಲ್ಸಿ ಲೂವಿಸ್, ಮಾಜಿ ಕೇಂದ್ರೀಯ ಅಧ್ಯಕ್ಷರಾದ ಅಲ್ಫೋನ್ಸ್ ಡಿ’ಕೋಸ್ತಾ, ವಾಲ್ಟರ್ ಸಿರಿಲ್ ಪಿಂಟೊ, ವಲಯ ಅಧ್ಯಕ್ಷರಾದ ಆಲ್ಬರ್ಟ್ ಡಿ’ಸೋಜಾ, ಎರಿಕ್ ಗೊನ್ಸಾಲ್ವಿಸ್, ಲೂವಿಸ್ ಆಲ್ಮೇಡಾ, ಆಲೆನ್ ಡಿ’ಸೋಜಾ, ಜಿಲ್ಲಾ ಪಂಚಾಯತ್ ಸದಸ್ಯೆ ಐಡಾ ಗಿಬ್ಬಾ ಡಿ’ಸೋಜಾ, ತಾಲೂಕು ಪಂಚಾಯತ್ ಸದಸ್ಯೆ ರೋಶನಿ ಒಲಿವೇರಾ, ಕ್ಷೇವಿಯರ್ ಡಿ’ಮೇಲ್ಲೊ, ಡಾ.ಶ್ರೀಪತಿ ಶೇಟ್, ವಿವಿಯನ್ ಕರ್ನೆಲಿಯೊ ಉಪಸ್ಥಿತರಿದ್ದರು.
ಕಲ್ಯಾಣಪುರ ವಲಯ ಅಧ್ಯಕ್ಷ ಹ್ಯೂಬರ್ಟ್ ಲೂವಿಸ್ ಸ್ವಾಗತಿಸಿ, ಕಾರ್ಯದರ್ಶಿ ರೋಜಿ ಬಾರೆಟ್ಟೊ ವಂದಿಸಿದರು. ಸ್ಟೀವನ್ ಲೂವಿಸ್ ಹಾಗೂ ವೆರೋನಿಕಾ ಕರ್ನೆಲಿಯೊ ಕಾರ್ಯಕ್ರಮ ನಿರೂಪಿಸಿದರು.