ಮಂಗಳೂರು,ಸೆ.25: ಸೇವೆಯನ್ನು ತನ್ನ ಜೀವನವ್ರತವನ್ನಾಗಿಸಿ, ರಾಜಕಾರಣಿಗಳಿಗೆ ರಾಜಪಥ ದರ್ಶನಗೈದ ಪಂಡಿತ್ ದೀನ ದಯಾಳ್ ಉಪಾಧ್ಯಾಯರು, ಅನ್ನ ಅಂತ್ಯೋದಯ, ಮಕ್ಕಳ ಶಿಕ್ಷಣ ಹಕ್ಕು, ರಾಷ್ಟ್ರೀಯ ಆರ್ಥಿಕ ನೀತಿ, ಯುವಕರ ಸ್ವಾವಲಂಬಿ ಜೀವನ ಇನ್ನಿತರ ವಿಚಾರಧಾರೆಗಳನ್ನು ಅರ್ಪಿಸಿದ ದೂರದರ್ಶಿತ್ವದ ರಾಜತಂತ್ರಜ್ಞ ಎಂದು ಹಾಸನದ ಪೂರ್ಣಚಂದ್ರ ತೇಜಸ್ವಿ ವಿದ್ಯಾಲಯದ ಪ್ರಾಂಶುಪಾಲ ಬೈಕಾಡಿ ಜನಾರ್ದನ ಆಚಾರ್ ಹೇಳಿದರು.
ಅವರು ಭಾ.ಜ.ಪಾ ಮಂಗಳೂರು ನಗರ ದಕ್ಷಿಣ ಮಂಡಲ ವತಿಯಿಂದ ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ನಡೆದ ಪಂಡಿತ್ ದೀನ ದಯಾಳ್ ಉಪಾಧ್ಯಾಯರ ಜನ್ಮದಿನ ಕಾರ್ಯಕ್ರಮದಲ್ಲಿ ಪ್ರಮುಖ ಭಾಷಣ ಮಾಡುತ್ತಾ ಮಾತನಾಡಿದರು. ರಾಷ್ಟ್ರೀಯ ಅಸ್ಮಿತೆ ಇಲ್ಲದ ಸ್ವಾತಂತ್ರ್ಯಕ್ಕೆ ಅರ್ಥವಿರುವುದಿಲ್ಲ ಎಂದಿದ್ದ ಏಕಾತ್ಮ ಮಾನವತಾವಾದದ ಜನಕ ದೀನ ದಯಾಳರು ಧಾರ್ಮಿಕ ಪರಂಪರೆಯ ಪ್ರತಿಪಾದಕರಾಗಿದ್ದರೆಂದು ವಿವರಿಸಿದ ಅವರು ಶಿಕ್ಷಣವನ್ನು ರಾಷ್ಟ್ರದ ಅಭ್ಯುದಯಕ್ಕೆ ಉಪಯೋಗಿಸುವ ರಾಜಕಾರಣಿಗಳು ವಿರಳವಾಗಿದ್ದರೆಂದು ಅಭಿಪ್ರಾಯಿಸಿದರು.
ಸಂಸದ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವೆನ್ಲಾಕ್ ಆಸ್ಪತ್ರೆ, ರೆಡ್ಕ್ರಾಸ್ ಸಂಸ್ಥೆ ಮಂಗಳೂರು ಮತ್ತು ಫಾದರ್ ಮುಲ್ಲರ್ಸ್ ಆಸ್ಪತ್ರೆ ಕಂಕನಾಡಿ ಇವರ ಸಹಯೋಗದಲ್ಲಿ ಪಕ್ಷದ ವತಿಯಿಂದ ಆಯೋಜಿಸಿದ ರಕ್ತದಾನ ಶಿಬಿರವನ್ನು ಹಿರಿಯ ಕಾರ್ಯಕರ್ತ ಶ್ರೀ ಮೋಹನದಾಸ ಬಾಳಿಗ ಉದ್ಘಾಟಿಸಿದರು.
ವೇದಿಕೆಯಲ್ಲಿ ಪ್ರಧಾನ ಕಾರ್ಯದರ್ಶಿ ವೇದವ್ಯಾಸ ಕಾಮತ್, ಜಿಲ್ಲಾ ಉಪಾಧ್ಯಕ್ಷೆ ಪುಷ್ಪಲತಾ ಗಟ್ಟಿ, ಜಿಲ್ಲಾ ಕಾರ್ಯದರ್ಶಿ ಅಶೋಕ್, ಫಾದರ್ ಮುಲ್ಲರ್ಸ್ ಆಸ್ಪತ್ರೆ ಡಾ| ಲವ್ಲಿ ಜಾರ್ಜ್, ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಶ್ರೀಮತಿ ಶ್ರದ್ದಾ, ಪಕ್ಷದ ಪ್ರಮುಖರಾದ ದಯಾನಂದ ಶೆಟ್ಟಿ, ಪ್ರಭಾಮಾಲಿನಿ, ನಿತಿನ್ ಕುಮಾರ್, ಶಿವರಾಮ ಮಣಿಯಾಣಿ, ರಾಜಗೋಪಾಲ ರೈ, ಕಿಶೋರ್ ಕುಮಾರ್ ಬೊಟ್ಯಾಡಿ, ಕ್ಯಾ.ಬ್ರಿಜೇಶ್ ಚೌಟ, ರೂಪಾ ಡಿ.ಬಂಗೇರಾ ಮುಂತಾದವರು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಸುಧೀರ್ ಶೆಟ್ಟಿ ಸ್ವಾಗತಿಸಿ ಪ್ರಸ್ತಾವನೆಗೈದರು, ಜಗದೀಶ್ ಶೆಟ್ಟಿ ವೈಯಕ್ತಿಕ ಗೀತೆ ಹಾಡಿದರು. ರಂಗನಾಥ ಕಿಣಿ ವಂದಿಸಿದರು. ಉಪಾಧ್ಯಕ್ಷ ಬಿ.ರವೀಂದ್ರ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.