ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ಸಿಬ್ಬಂದಿ ಸಂತೋಷ್ ಕೊಟ್ಟಾರಿ (31) ಅವರ ಮೇಲೆ ಪವನ್ (20) ಎಂಬಾತ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ಬುಧವಾರ ಮದ್ಯಾಹ್ನ ಸುಮಾರು 2 ಗಂಟೆಯ ಸಮಯ ವಾಮಂಜೂರು ಚೆಕ್ ಪೋಸ್ಟ್ ಬಳಿ ನಡೆದಿದೆ. ಹಲ್ಲೆ ನಡೆಸಿರುವ ಪವನ್ ಮಂಗಳೂರಿನ ಕುಖ್ಯಾತ ರೌಡಿ ವಾಮಂಜೂರು ರೋಹಿಯ ಪುತ್ರ. ಹಲ್ಲೆಗೊಳಾದ ಸಂತೋಷ್ ಕೊಟ್ಟಾರಿ ದ.ಕ.ಜಿಲ್ಲಾ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ರಾಜೇಶ್ ಕೊಟ್ಟಾರಿ ಅವರ ಸಹೋದರರಾಗಿರುತ್ತಾರೆ.
ತಲೆ ಹಾಗೂ ಬೆನ್ನಿಗೆ ಗಂಭೀರವಾಗಿ ಏಟು ತಗಲಿರುವ ಸಂತೋಷ್ ಅವರನ್ನು ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದ್ದು, ಚಿಕಿತ್ಸೆಗೆ ಒಳಪಡಿಸಲಾಗಿದೆ.
ಪವನ್ ಒಂದು ಕಾಲದಲ್ಲಿ ಮಂಗಳೂರಿನ ಸುತ್ತಮುತ್ತ ಕುಖ್ಯಾತ ರೌಡಿಯಾಗಿ ಮೆರೆದು, ತನ್ನ ಸಹಚಾರರಿಂದಲೇ ಹತ್ಯೆಯಾದ ವಾಮಂಜೂರು ರೋಹಿಯ ಪುತ್ರ. ಪವನ್ ಈ ಹಿಂದೆ ಕೂಡ ತಾನು ಕಲಿಯುತ್ತಿದ್ದ ಶಾಲೆಯ ಶಿಕ್ಷಕಿಗೆ ಚೂರಿ ತೋರಿಸಿ ಬೆದರಿಕೆ ಹಾಕಿದ್ದ ಹಿನ್ನೆಲೆಯಲ್ಲಿ ಡಿಬಾರ್ ಆಗಿದ್ದ ಎಂದು ತಿಳಿದು ಬಂದಿದೆ. .
ಆದರೆ ಸಂತೋಷ್ ಕೊಲೆ ಯತ್ನ ಯಾವ ವಿಚಾರದಲ್ಲಿ ನಡೆದಿದೆ ಎಂಬ ಮಾಹಿತಿ ತಕ್ಷಣಕ್ಕೆ ಲಭ್ಯವಾಗಿಲ್ಲ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರಿನಲ್ಲಿ ಸತತ ನಾಲ್ಕು ದಿನಗಳಿಂದ ಕೊಲೆ, ಕೊಲೆಯತ್ನಗಳು ನಡೆಯುತ್ತಿದ್ದು, ಕಳೆದ ಮೂರು ದಿನಗಳಲ್ಲಿ ನಡೆದ ದಾಳಿಯಲ್ಲಿ ಇಬ್ಬರು ಈಗಾಗಲೇ ಇಹಲೋಕ ತ್ಯಜಿಸಿದ್ದಾರೆ. ದಿನಕೊಂದರಂತೆ ನಡೆಯುವ ಇಂತಹ ಪ್ರಕರಣಗಳಿಂದ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ.