ಬಂಟ್ವಾಳ,ಸೆ.20: ಇನ್ಮುಂದೆ ಬಂಟ್ವಾಳ ಪೊಲೀಸ್ ಉಪವಿಭಾಗ ವ್ಯಾಪ್ತಿಯಲ್ಲಿ ಪಿಎಸ್ ಖದರ್..! ಈವರೆಗೆ ಇಲ್ಲಿದ್ದ ಬಂಟ್ವಾಳ ಡಿವೈಎಸ್ಪಿ ಹುದ್ದೆಯನ್ನು ಹಿಂದಕ್ಕೆ ಪಡೆದುಕೊಂಡಿರುವ ಪೊಲೀಸ್ ಇಲಾಖೆ ಶಾಂತಿ ಸುವ್ಯವಸ್ಥೆಯ ಉದ್ದೇಶದಿಂದ ಬಂಟ್ವಾಳಕ್ಕೆ ಎಎಸ್ಪಿ ಹುದ್ದೆಯನ್ನು ಸೃಷ್ಟಿಸಿದೆ. ಬಂಟ್ವಾಳ ಎಎಸ್ಪಿ ಕಛೇರಿ ವ್ಯಾಪ್ತಿಗೆ ಬಂಟ್ವಾಳ ನಗರ, ಬಂಟ್ವಾಳ ಗ್ರಾಮಾಂತರ, ವಿಟ್ಲ, ಬೆಳ್ತಂಗಡಿ, ವೇಣೂರು ಹಾಗೂ ಪೂಂಜಾಲಕಟ್ಟೆ ಠಾಣೆಗಳು ಸೇರ್ಪಡೆಗೊಳ್ಳಲಿದೆ, ಬಂಟ್ವಾಳ ಪರಿಸರದಲ್ಲಿನ ಕೋಮುಸೂಕ್ಷ್ಮತೆ ಹಾಗೂ ಬೆಳ್ತಂಗಡಿ-ವೇಣೂರು ಪರಿಸರದಲ್ಲಿನ ನಕ್ಸಲ್ ಸಮಸ್ಯೆಗಳ ಹಿನ್ನೆಲೆಯಲ್ಲಿ ಬಂಟ್ವಾಳದಲ್ಲಿ ಈ ಬದಲಾವಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಮಂಗಳೂರಿಗೆ ಕಮೀಷನರ್ ಕಛೇರಿ ಬಂದ ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಕಚೇರಿ ಬಂಟ್ವಾಳ ಅಥವಾ ಪುತ್ತೂರಿಗೆ ವರ್ಗಾವಣೆಗೊಳಿಸುವ ಬಗ್ಗೆ ಚರ್ಚೆ ನಡೆದಿತ್ತು. ಇದೀಗ ಬಂಟ್ವಾಳಕ್ಕೂ ಐಪಿಎಸ್ ಗ್ರೇಡ್ನ ನೂತನ ಎಎಸ್ಪಿ ನೇಮಕಗೊಳಿಸಿ ಸರಕಾರ ಆದೇಶಿಸಿದೆ. ಈ ನಡುವೆ ಕಳೆದ ಫೆ.೧೮ ರಿಂದ ಬಂಟ್ವಾಳದಲ್ಲಿ ಡಿವೈಎಸ್ಪಿಯಾಗಿ ಅಧಿಕಾರದಲ್ಲಿದ್ದ ರಶ್ಮಿ. ಪರಡ್ಡಿಯವರನ್ನು ಬೆಂಗಳೂರಿನ ಇಲಾಖೆಯ ಕೇಂದ್ರ ಕಚೇರಿಗೆ ವರ್ಗಾಯಿಸಲಾಗಿದೆ.
ಬಂಟ್ವಾಳದ ಮೊದಲ ಎಎಸ್ಪಿಯಾಗಿ ರಾಹುಲ್ ಕುಮಾರ್ ಎಸ್ ಶನಿವಾರ ಅಧಿಕಾರ ಸ್ವೀಕರಿಸಿದ್ದಾರೆ.ಡಿವೈಎಸ್ಪಿ ರಶ್ಮೀ ಪರಡ್ಡಿ,ಸಿಐ ಬೆಳಿಯಪ್ಪ,ಎಸೈಗಳಾದ ನಂದಕುಮಾರ್,ಚಂದ್ರಶೇಖರಯ್ಯ,ನಾಗರಾಜ್ರವರು ಉಪಸ್ಥಿತರಿದ್ದರು. ಬಂಟ್ವಾಳ ನಗರ ಠಾಣೆಯ ಹಳೆಯ ಕಚೇರಿಯನ್ನೇ ಸುಂದರಗೊಳಿಸಿ ಎಎಸ್ಪಿ ಕಚೇರಿಯನ್ನಾಗಿಸಲಾಗಿದೆ.
ಬೆಂಗಳೂರಿಗೆ ಉನ್ನತ ಹುದ್ದೆಗೆ ಮುಂಬಡ್ತಿಯಾಗಿ ವರ್ಗಾವಣೆಗೊಂಡಿರುವ ಡಿ.ವೈ.ಎಸ್.ಪಿ.ರಶ್ಮಿ ಪರಡ್ಡಿಯವರನ್ನು ಬಂಟ್ವಾಳ ಎ.ಎಸ್.ಪಿ. ಕಚೇರಿಯಲ್ಲಿ ಬೀಳ್ಕೊಡಲಾಯಿತು. ಬಂಟ್ವಾಳ ಎ.ಎಸ್.ಪಿ. ರಾಹುಲ್ ಕುಮಾರ್ ಎಸ್ ಅವರು ಸ್ಮರಣಿಕೆ ನೀಡಿದರು. ಸಿಬ್ಬಂದಿಗಳು ಉಪಸ್ಥಿತರಿದ್ದರು