ಉಡುಪಿ, ಸೆ.18: ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಕಾಣಿಯೂರು ಮಠದ ವತಿಯಿಂದ ರಥಬೀದಿಯ ಕನಕ ಗೋಪುರದ ಎದುರು ಇರುವ ಕನಕನ ಮೂರ್ತಿಗೆ ಸುಮಾರು 12ಲಕ್ಷ ರೂ. ವೌಲ್ಯದ 15ಕೆ.ಜಿ.ತೂಕದ ರಜತ ಕವಚವನ್ನು ಬುಧವಾರ ಸಮರ್ಪಿಸ ಲಾಯಿತು.
ಪರ್ಯಾಯ ಕಾಣಿಯೂರು ಮಠಾಧೀಶ ಶ್ರೀವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಹಾಗೂ ಶಿರೂರು ಮಠಾಧೀಶ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ರಜತ ಕವಚವನ್ನು ಕನಕನ ಮೂರ್ತಿಗೆ ಸಮರ್ಪಿಸಿದರು. ಜನರಲ್ಲಿ ಪರಿವರ್ತನೆ ತಂದು ಎಲ್ಲರಿಂದಲೂ ಮಾನ್ಯರಾದ ಕನಕದಾಸರು, ಶುದ್ಧ ಭಕ್ತಿಯ ಭಗವಂತನ ದಾಸ. ತನ್ನಲ್ಲಿರುವ ಎಲ್ಲವನ್ನು ತ್ಯಾಗ ಮಾಡಿ ದೊಡ್ಡ ವ್ಯಕ್ತಿಯಾಗಿ ಬೆಳೆದರು. ಉಡುಪಿಯ ಕೃಷ್ಣನನ್ನು ನಿತ್ಯ ನೋಡುವ ಭಾಗ್ಯ ರಥಬೀದಿಯಲ್ಲಿ ನೆಲೆಸಿರುವ ಕನಕದಾಸರಿಗೆ ಮಾತ್ರ ಸಿಗುತ್ತಿದೆ ಎಂದು ಕಾಣಿಯೂರು ಶ್ರೀ ಹೇಳಿದರು.
ಮುಖ್ಯ ಅತಿಥಿಯಾಗಿ ರಾಜ್ಯ ನಗರಾ ಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ರಾಜ್ಯ ಸರಕಾರವು ಉಡುಪಿಯನ್ನು ಹೆರಿಟೇಜ್ ವಿಲೇಜ್ ಆಗಿ ಪರಿವರ್ತಿ ಸಲು ಉದ್ದೇಶಿಸಿದ್ದು, ಕೇಂದ್ರ ಸರಕಾರದ ಸ್ಮಾರ್ಟ್ ಸಿಟಿ ಯೋಜನೆಯನ್ನು ಇದಕ್ಕೆ ಬಳಸಿಕೊಂಡು ಇನ್ನಷ್ಟು ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.
ನಗರಸಭೆ ಅಧ್ಯಕ್ಷ ಪಿ.ಯುವರಾಜ್, ಯುವ ಭಾರತ ರಾಜ್ಯ ಪ್ರಭಾರಿ ನಿಕೀತ ರಾಜ್, ಕನಕ ಸದ್ಭಾವನ ಜ್ಯೋತಿ ರಥಯಾತ್ರೆ ಸಮಿತಿಯ ಸಂಚಾಲಕ ಎಂ.ಕೃಷ್ಣ ಮೂರ್ತಿ, ಹೈಕೋರ್ಟ್ ಹಿರಿಯ ವಕೀಲ ಅಮೃತೇಶ್ ಎನ್.ಪಿ., ಕುರುಬ ಮುಖಂಡರಾದ ಮೇಟಿ ಮುದಿಯಪ್ಪ, ಜಗದೀಶ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕವಚ ನಿರ್ಮಿಸಿದ ಶಿಲ್ಪಿಗಳಾದ ಸುಧೀರ್ ಆಚಾರ್ಯ ಹಾಗೂ ಗುರುರಾಜ್ ಆಚಾರ್ಯರನ್ನು ಸನ್ಮಾನಿಸಲಾಯಿತು. ಮಠದ ಕೃಷ್ಣ ಮೂರ್ತಿ ಆಚಾರ್ಯ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ದರು. ವಿಷ್ಣು ಪ್ರಸಾದ್ ಪಾಡಿಗಾರ್ ವಂದಿಸಿದರು.