ಮಂಗಳೂರು: ನಗರದ ಕಾಲೇಜೊಂದರ ವಿದ್ಯಾರ್ಥಿಗಳ ಮೇಲೆ ತಂಡವೊಂದು ಹಲ್ಲೆ ಮಾಡಿ ಪರಾರಿಯಾದ ಘಟನೆ ಗುರುವಾರ ಪಂಪ್ವೆಲ್ ಸಮೀಪ ನಡೆದಿದೆ. ಹಲ್ಲೆಯಲ್ಲಿ ಗಾಯಗೊಂಡ ವಿದ್ಯಾರ್ಥಿಗಳನ್ನು ಖಲಂದರ್ ಶಾಹಿದ್, ಶಮೀಮ್, ಮುಹಮ್ಮದ್ ಶಹಾದ್, ಅಶಿಕ್, ಅಶ್ಫತುಲ್ಲಾ ಹಾಗೂ ಶಾಬಾಜ್ ಎಂದು ಗುರುತಿಸಲಾಗಿದೆ. ಇವರಲ್ಲಿ ಖಲಂದರ್ ಗೆ ಗಂಭೀರ ಪ್ರಮಾಣದ ಗಾಯಗಳಾಗಿದ್ದು ಎಲ್ಲಾ ಗಾಯಾಳುಗಳು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಇವರೆಲ್ಲರೂ ನಗರದ ಎಂಐಎಫ್ ಎಸ್ ಸಿ ಕಾಲೇಜ್ ವಿದ್ಯಾರ್ಥಿಗಳಾಗಿದ್ದಾರೆ
ಕೆಲವು ದಿನಗಳ ಹಿಂದೆ ಕಾಲೇಜ್ ನಲ್ಲಿ ನಡೆದಿದ್ದ ಕಾರ್ಯಕ್ರಮವೊಂದರ ಸಂದರ್ಭ ಖಲಂದರ್ ಹಾಗೂ ಇತರರು ಮೊಬೈಲ್ ನಲ್ಲಿ ಕಾಲೇಜಿನ ವಿದ್ಯಾರ್ಥಿನಿಯರ ಫೋಟೋ ತೆಗೆಯುತ್ತಿದ್ದರೆನ್ನಲಾಗಿದೆ. ಈ ವೇಳೆ ವಿದ್ಯಾರ್ಥಿಗಳ ತಂಡವೊಂದು ಆಕ್ಷೇಪ ವ್ಯಕ್ತಪಡಿಸಿತ್ತು. ಆನಂತರ ಪ್ರಾಂಶುಪಾಲರ ಮಧ್ಯಸ್ಥಿಕೆಯಲ್ಲಿ ರಾಜಿ ಪಂಚಾತಿಕೆ ನಡೆದಿತ್ತು.
ಆದರೆ ಹಿಂದೂ ಹುಡುಗಿಯರ ಫೋಟೋವನ್ನು ತೆಗೆಯುತ್ತಿದ್ದರೆಂಬ ಕಾರಣಕ್ಕೆ ಕಾಲೇಜ್ ಒಳಗಡೆ ಶುರುವಾದ ವಿವಾದ ಇದೀಗ ಆರು ಮಂದಿ ವಿದ್ಯಾರ್ಥಿಗಳ ಮೇಲೆ ಹಲ್ಲೆಯಲ್ಲಿ ಕೊನೆಗೊಂಡಿದೆ.
ಇಂದು ಬೆಳಿಗ್ಗೆ ಖಲಂದರ್ ಹಾಗೂ ಇತರ ವಿದ್ಯಾರ್ಥಿಗಳು ಪಂಪ್ ವೆಲ್ ಸಮೀಪ ಬಸ್ ಕಾಯುತ್ತಿದ್ದಾಗ ಅಲ್ಲಿಗೆ ಕಾರ್ ಹಾಗೂ ಬೈಕ್ಗಳಲ್ಲಿ ಬಂದ ತಂಡ ಹಲ್ಲೆ ನಡೆಸಿ ಪರಾರಿಯಾಗಿದೆ. ಭಜರಂಗದಳ ಸಂಘಟನೆಯ ಕಾರ್ಯಕರ್ತರು ದಾಳಿ ನಡೆಸಿರುವುದಾಗಿ ಗಾಯಗೊಂಡ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಅಲ್ಲದೇ ಭಜರಂಗದಳ ಸ್ಥಳೀಯ ನಾಯಕ ಪುನೀತ್, ಪ್ರದೀಪ್ ಪಂಪ್ವೆಲ್, ಪ್ರಮೋದ್ ಕೊಟ್ಟಾರಿ ಹಾಗೂ ಇತರರ ವಿರುದ್ಧ ವಿದ್ಯಾರ್ಥಿಗಳು ದೂರು ನೀಡಿದ್ದಾರೆ. ಕಂಕನಾಡಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.