ಕುಂದಾಪುರ: ಪ್ರೊ ಕಬ್ಬಡಿಯಲ್ಲಿ ಯು ಮುಂಬಾ ತಂಡದ ಪ್ರಸಿದ್ಧ ರೈಡರ್ ಆಗಿ ಮಿಂಚಿದ ಯುವ ಕಬ್ಬಡಿ ಆಟಗಾರ ರಿಶಾಂಕ್ ದೇವಾಡಿಗ ಗಂಗೊಳ್ಳಿ ಗುರುವಾರ ಗಂಗೊಳ್ಳಿಯ ವಿವಿಧ ಶಾಲೆಗಳಿಗೆ ಭೇಟಿ ನೀಡಿದರು.
ಗಂಗೊಳ್ಳಿಯ ಸ.ವಿ.ಹಿರಿಯ ಪ್ರಾಥಮಿಕ ಶಾಲೆ, ಸಂತ ಜೋಸೆಫರ ಹಿರಿಯ ಪ್ರಾಥಮಿಕ ಶಾಲೆ, ಸ್ಟೆಲ್ಲಾ ಮಾರೀಸ್ ಪ್ರೌಢ ಶಾಲೆ, ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು, ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆ, ಸರಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆ, ಅಂಜುಮಾನ್ ಉರ್ದು ಘೋಷಾ ಶಾಲೆ ಹಾಗೂ ತೌಹೀದ್ ಆಂಗ್ಲ ಮಾಧ್ಯಮ ಶಾಳೆಗಳಿಗೆ ಭೇಟಿ ನೀಡಿದ ರಿಶಾಂಕ್ ದೇವಾಡಿಗ ಗಂಗೊಳ್ಳಿ ಅವರನ್ನು ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಆಡಳಿತ ಮಂಡಳಿ ಸದಸ್ಯರು ಮತ್ತು ವಿದ್ಯಾರ್ಥಿಗಳು ಹೃದಯಸ್ಪರ್ಶಿ ಸ್ವಾಗತ ನೀಡಿದರು.
ಶಾಲೆಗಳಿಗೆ ಭೇಟಿ ನೀಡಿದ ರಿಶಾಂಕ್ ದೇವಾಡಿಗರನ್ನು ಶಾಲಾ ವಿದ್ಯಾರ್ಥಿಗಳು ಸುತ್ತುವರಿದು ಸಂಭ್ರಮಿಸಿದರು. ಇವರ ಹಸ್ತಾಕ್ಷರ ಪಡೆದುಕೊಳ್ಳಲು ಮುಗಿ ಬಿದ್ದ ವಿದ್ಯಾರ್ಥಿಗಳನ್ನು ನಿಯಂತ್ರಿಸುವುದೇ ದೊಡ್ಡ ಸವಾಲಾಯಿತು.
ಹಲವೆಡೆ ಶಾಲಾ ವಿದ್ಯಾರ್ಥಿಗಳೊಂದಿಗೆ ಸಂವಾದ, ಮಾತುಕತೆ ನಡೆಸಿ ಮಾತನಾಡಿದ ರಿಶಾಂಕ್ ದೇವಾಡಿಗ, ದೇಶದಲ್ಲಿ ಕಬ್ಬಡಿ ಆಟಕ್ಕೆ ಹೆಚ್ಚಿನ ಅವಕಾಶಗಳಿವೆ. ದೇಶದಲ್ಲಿ ಕಬ್ಬಡಿ ಆಟಗಾರರರ ಸಂಖ್ಯೆ ಬಹಳಷ್ಟು ಕಡಿಮೆ ಇರುವುದರಿಂದ ಯುವ ಜನರು ಕಬ್ಬಡಿ ಆಟದ ಕಡೆ ಹೆಚ್ಚಿನ ಗಮನ ಹರಿಸಬೇಕು. ಹೆಚ್ಚು ಹೆಚ್ಚು ಕಬ್ಬಡಿ ಆಟ ಆಡಿ ದೇಶಿಯ ಈ ಕ್ರೀಡೆಯನ್ನು ಪ್ರೋತ್ಸಾಹಿಸಬೇಕು ಎಂದು ಕರೆ ನೀಡಿದರು.
ರಿಶಾಂಕ್ ದೇವಾಡಿಗರ ತಾಯಿ ಪಾರ್ವತಿ ದೇವಾಡಿಗ, ಗ್ರಾಪಂ ಮಾಜಿ ಸದಸ್ಯ ಬಿ.ರಾಘವೇಂದ್ರ ಪೈ, ಜಿಪಂ ಮಾಜಿ ಉಪಾಧ್ಯಕ್ಷ ರಾಜು ದೇವಾಡಿಗ, ಮಾಧವ ದೇವಾಡಿಗ, ಶ್ರೀಧರ ದೇವಾಡಿಗ, ದಯಾನಂದ ದೇವಾಡಿಗ, ಗ್ರಾಪಂ ಸದಸ್ಯೆ ಮಂಜುಳಾ ದೇವಾಡಿಗ, ಮಹಮ್ಮದ್ ಹುಸೈನ್, ಶಂಕರ ದೇವಾಡಿಗ ಮೊದಲಾದರು ಉಪಸ್ಥಿತರಿದ್ದರು.