ಮಂಗಳೂರು: ವೃಕ್ಷ ಬಿಸಿನೆಸ್ ಸೊಲ್ಯೂಶನ್ (ಇಂಡಿಯಾ) ಲಿಮಿಟೆಡ್ ಸಂಸ್ಥೆಯು ಏಜೆಂಟರು ಮತ್ತು ಗ್ರಾಹಕರಿಗೆ ಹಣ ಮರಳಿಸದೆ ವಂಚನೆ ಮಾಡಿರುವುದರಿಂದ ಗ್ರಾಹಕರ ಪ್ರಶ್ನೆಗೆ ಉತ್ತರಿಸಲಾಗದೆ ಏಜೆಂಟರು ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ ಎಂದು ದ.ಕ. ಜಿಲ್ಲಾ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ.
ಅಧಿಕ ಬಡ್ಡಿ ನೀಡುವ ಆಮಿಷದಿಂದ ಗ್ರಾಹಕರಿಂದ ಏಜೆಂಟರು ಹಣ ಸಂಗ್ರಹಿಸಿ ವೃಕ್ಷ ಸಂಸ್ಥೆಗೆ ನೀಡಿದ್ದು ಒಂದು ವರ್ಷದಿಂದ ಹಣವನ್ನು ಮರು ಸಂದಾಯ ಮಾಡುವಂತೆ ಕೇಳಿಕೊಂಡರೂ ಸಂಸ್ಥೆ ಹಣ ಸಂದಾಯ ಮಾಡಿಲ್ಲ ಎಂದು ಪ್ರಮೋದಿನಿ ಶೆಟ್ಟಿ ಎಂಬವರು 71 ಗ್ರಾಹಕರನ್ನು ಸೇರಿಸಿ ದೂರು ನೀಡಿದ್ದಾರೆ.
ಪೊಲೀಸರು ಸಂಸ್ಥೆಯ ಪಾಲುದಾರ ರಾದ ಜೀವರಾಜ್ ಪುರಾಣಿಕ್, ರೋಶನ್ ಡಿಸೋಜಾ, ವೇಣುಗೋಪಾಲ್ರವರ ಮೇಲೆ ಕೇಸು ದಾಖಲಿಸಿಕೊಂಡಿದ್ದಾರೆ. ವೃಕ್ಷ ಸಂಸ್ಥೆಯು ತನ್ನ ಏಳು ಕೋಟಿ ಮಾರುಕಟ್ಟೆ ಬೆಲೆ ಬಾಳುವ ಸ್ಥಳವನ್ನು 4 ಕೋಟಿ 60 ಲಕ್ಷ ರು.ಗೆ ಮಾರಾಟ ಮಾಡಿರುವ ಬಗ್ಗೆ ತಿಳಿದು ಬಂದಾಗ ಗ್ರಾಹಕರು ಹಾಗೂ ಏಜೆಂಟರ ನೊಂದಣಿ ಪ್ರಕ್ರಿಯೆಯನ್ನು ತಡೆಯಲು ಪ್ರಯತ್ನಿಸಿದ್ದರು. ಆದರೆ ರಾಜಕೀಯ ಪ್ರಭಾವ ಬಳಸಿಕೊಂಡು ಕಂಪೆನಿಯ ಆಡಳಿತ ಮುಖ್ಯಸ್ಥರು ನೋಂದಣಿ ಮಾಡುವಲ್ಲಿ ಯಶಸ್ವಿಯಾಗಿದ್ದರು.
ನೋಂದಣಿ ಕಚೇರಿಯಲ್ಲಿ ಸೇರಿದ್ದ ಎಲ್ಲಾ ಗ್ರಾಹಕ ಹಾಗೂ ಏಜೆಂಟರು ಪೊಲೀಸ್ ಠಾಣೆಗೆ ತೆರಳಿ ಸಂಸ್ಥೆಯ ಎಂ.ಡಿ. ಹಾಗೂ ಪಾಲುದಾರರನ್ನು ಬಂಧಿಸುವಂತೆ ಒತ್ತಾಯಿಸಿದ್ದರು. ಆರೋಪಿಗಳು ಪ್ರಮೋದಿನಿ ಶೆಟ್ಟಿ, ಅಂಕಿತಾ ಶೆಟ್ಟಿ ಸೇರಿದಂತೆ ಇತರ ಗ್ರಾಹಕರ ಖಾತೆಗೆ ಹಣ ಹಾಕುವಂತೆ ಭರವಸೆ ನೀಡಿ ಬಂಧನದಿಂದ ಪಾರಾದರು. ಆದರೆ ಆನಂತರ ಕೆಲವರಿಗೆ ಮಾತ್ರ ಅಲ್ಪ ಸ್ವಲ್ಪ ಹಣ ನೀಡಿದ್ದು ಉಳಿದಂತೆ ಯಾರೊಬ್ಬರಿಗೂ ಹಣ ಸಂದಾಯ ಮಾಡಿಲ್ಲ. ಗ್ರಾಹಕರಿಂದ ಹತ್ತು ಕೋಟಿಗೂ ಮಿಕ್ಕಿ ಸಂಗ್ರಹಿಸಿದ ಹಣವನ್ನು ಮರುಪಾವತಿ ಮಾಡುವಲ್ಲಿ ವಿಳಂಬ ಮಾಡುತ್ತಿದ್ದಾರೆ ಎಂದು ಏಜೆಂಟರು ದೂರುತ್ತಿದ್ದು, ವೃಕ್ಷ ಸಂಸ್ಥೆಯು ಹಣ ಹಿಂದಿರುಗಿಸದೇ ಇದ್ದಲ್ಲಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಕೂಡಲೇ ಸಂಸ್ಥೆ ಎಂ.ಡಿ. ಹಾಗೂ ಪಾಲುದಾರರನ್ನು ಬಂಧಿಸಿ ಅವ್ಯವಹಾರದ ತನಿಖೆ ನಡೆಸಬೇಕೆಂದು ತುಳುನಾಡ ರಕ್ಷಣಾ ವೇದಿಕೆಯ ಮುಖಾಂತರ ಒತ್ತಾಯಿಸಲಾಗಿದೆ.