ಕರಾವಳಿ

ಪೊಯ್ಯಮೂಲೆ: ಮನೆಗೆ ಬೆಂಕಿ ಹಚ್ಚಿದ ಕುಡುಕ

Pinterest LinkedIn Tumblr

Fire1

ಬಂಟ್ವಾಳ, ಸೆ.14: ತನ್ನ ಪತ್ನಿ ಹಾಗೂ ಮೂವರು ಮಕ್ಕಳನ್ನು ಯಾರೋ ಕೊಲೆ ಮಾಡಿದ್ದರೆಂದು ಶನಿವಾರ ರಾತ್ರಿ ಪೊಲೀಸರಿಗೆ ಸುಳ್ಳು ಮಾಹಿತಿ ನೀಡಿ ಸಾರ್ವಜನಿಕರನ್ನು, ಪತ್ರಕರ್ತರನ್ನು ಹಾಗೂ ಪೊಲೀಸರನ್ನು ಆತಂಕಪಡುವಂತೆ ಮಾಡಿದ ಪುಣಚ ಗ್ರಾಮದ ಪೊಯ್ಯಮೂಲೆ ಕೃಷ್ಣ ನಾಯ್ಕ ರವಿವಾರ ನಿಜವಾಗಿಯೂ ತನ್ನ ಮನೆಗೆ ಬೆಂಕಿ ಕೊಟ್ಟು ಮತ್ತೊಂದು ರಾದ್ಧಾಂತ ಸೃಷ್ಟಿಸಿದ ಘಟನೆ ನಡೆದಿದೆ.

ರವಿವಾರ ಈತ ತನ್ನ ಪತ್ನಿಯೊಡನೆ ಜಗಳಕ್ಕೆ ನಿಂತು ಮಾತಿಗೆ ಮಾತು ಬೆಳೆಸಿದ್ದು, ನಿಮ್ಮನ್ನೆಲ್ಲಾ ಮನೆಯೊಳಗೆ ಹಾಕಿ ಬೆಂಕಿ ಹಾಕುತ್ತೇನೆ ಎಂದು ಹೇಳಿದ್ದು, ಅದರಂತೆ ಕೃಷ್ಣ ನಾಯ್ಕ ಸೀಮೆ ಎಣ್ಣೆಯೊಂದಿಗೆ ಸುರಿದು ತನ್ನ ಹಂಚಿನ ಮನೆಯ ಪಕ್ಕಾಸಿಗೆ ಬೆಂಕಿ ಹಚ್ಚಿದ್ದು, ದಗದಗನೆ ಉರಿಯುತ್ತಿದ್ದ ಬೆಂಕಿ ಪಕ್ಕಾಸಿಗೆ ಹತ್ತಿ ಮನೆ ಪೂರ್ಣವಾಗಿ ಹರಡುತ್ತಿತ್ತು. ಇದರಿಂದ ಆತಂಕಕ್ಕೀಡಾದ ಆತನ ಪತ್ನಿ ಹಾಗೂ ಮಕ್ಕಳು ಬೊಬ್ಬೆ ಹಾಕಿದಾಗ ನೆರೆಮನೆಯವರು ಬಂದು ಬೆಂಕಿ ಆರಿಸಿದರು.

ಬೆಂಕಿಯ ಕೆನ್ನಾಲಿಗೆ ಮನೆ ಬಾಗಶಃ ಸುಟ್ಟು ಹೋಗಿದೆ. ಈ ಬಗ್ಗೆ ಸ್ಥಳೀ ಯರು ವಿಟ್ಲ ಪೊಲೀಸರಿಗೆ ಮಾಹಿತಿ ನೀಡಿದ್ದು, ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಈ ಹೊತ್ತಿಗೆ ಕೃಷ್ಣ ನಾಯ್ಕ ಮನೆಯೊಳಗೆ ಮುದುಡಿ ಮಲಗಿದ್ದ ಎನ್ನಲಾಗಿದೆ. ಕಂಠಪೂರ್ತಿ ಮದ್ಯ ಕುಡಿದು ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿರುವ ಕಾರಣ ಪೊಲೀಸರು ಆತನನ್ನು ಬಂಧಿಸಿಲ್ಲ. ಈತನ ವಿಕೃತ ವರ್ತನೆಯಿಂದ ಭಯಭೀತರಾದ ಪತ್ನಿ, ಮಕ್ಕಳು ಮನೆಯಿಂದ ನೇರವಾಗಿ ತವರು ಮನೆ ಸೇರಿದ್ದಾರೆ.

ಈತ ಶನಿವಾರ ಎಬ್ಬಿಸಿದ್ದ ರಾದ್ಧಾಂತದಿಂದ ಪೊಲೀಸರಿಂದ ಹಾಗೂ ಸಾರ್ವಜನಿಕರು ಆತನನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದರಿಂದ ತೀವ್ರ ಮುಜುಗರಕ್ಕೀಡಾದ ಈತ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡಿದಂತೆ ಈತ ತನ್ನ ಪತ್ನಿ ಹಾಗೂ ಮಕ್ಕಳ ಜತೆ ಈ ರೀತಿಯಾಗಿ ವರ್ತಿಸಿದ್ದಾನೆ ಎನ್ನಲಾಗಿದೆ.

Write A Comment