ಅಂತರಾಷ್ಟ್ರೀಯ

ತೀರ್ಪು ನೀಡಿದ ನಂತರ ಗುಂಡು ಹೊಡೆದುಕೊಂಡ ನ್ಯಾಯಾಧೀಶ!

Pinterest LinkedIn Tumblr


ಬ್ಯಾಂಕಾಕ್: ಹಲವಾರು ಮಂದಿ ಶಂಕಿತ ಕೊಲೆ ಆರೋಪಿಗಳನ್ನು ನಿರ್ದೋಷಿ ಎಂದು ತುಂಬಿದ ಕೋರ್ಟ್ ರೂಂನೊಳಗೆ ತೀರ್ಪು ನೀಡಿದ ಬಳಿಕ ಥಾಯ್ ನ್ಯಾಯಾಧೀಶರು ಎದೆಗೆ ಗುಂಡು ಹೊಡೆದುಕೊಂಡ ಘಟನೆ ಬ್ಯಾಂಕಾಕ್ ನಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.

ಟೀಕಾಕಾರರ ಪ್ರಕಾರ, ಥಾಯ್ ಲ್ಯಾಂಡ್ ಕೋರ್ಟ್ ಶ್ರೀಮಂತರು ಮತ್ತು ಬಲಾಢ್ಯರ ಪರವಾಗಿ ಕೆಲಸ ಮಾಡುತ್ತಿದ್ದು, ಸಣ್ಣ, ಪುಟ್ಟ ತಪ್ಪನ್ನೆಸಗಿದ ಜನಸಾಮಾನ್ಯರಿಗೆ ಕಠಿಣ ಶಿಕ್ಷೆ ನೀಡುತ್ತಿರುವುದಾಗಿ ಆರೋಪಿಸಿದ್ದಾರೆ.

ಗನ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಶಂಕಿತ ಮುಸ್ಲಿಮ್ ಆರೋಪಿಗಳನ್ನು ನಿರ್ದೋಷಿ ಎಂದು ಥಾಯ್ ಯಾಲಾ ಕೋರ್ಟ್ ನ ಜಡ್ಜ್ ಕಾನಾಕೋರ್ನ್ ಪಿಯಾನ್ಚಾನಾ ಅವರು ತೀರ್ಪು ನೀಡಿದ ನಂತರ ಹ್ಯಾಂಡ್ ಗನ್ ತೆಗೆದುಕೊಂಡು ಎದೆಗೆ ಗುಂಡು ಹೊಡೆದುಕೊಂಡಿರುವುದಾಗಿ ವರದಿ ವಿವರಿಸಿದೆ.

ಶುಕ್ರವಾರ ಮಧ್ಯಾಹ್ನ ಈ ತೀರ್ಪು ನೀಡುವ ಮುನ್ನ ಫೇಸ್ ಬುಕ್ ನಲ್ಲಿ, ಯಾರನ್ನೇ ಆಗಲಿ ಶಿಕ್ಷಿಸಲು ಸ್ಪಷ್ಟವಾದ ಮತ್ತು ಸಮರ್ಪಕ ಪುರಾವೆಯ ಅಗತ್ಯವಿದೆ. ಒಂದು ವೇಳೆ ಸಮರ್ಪಕ ದಾಖಲೆ ಇಲ್ಲದಿದ್ದರೆ ಶಿಕ್ಷೆ ನೀಡಲು ಹೋಗಬಾರದು. ಈ ಐವರು ಅಪರಾಧ ಎಸಗಿಲ್ಲ ಎಂದು ಹೇಳುತ್ತಿಲ್ಲ. ಅವರು ಹಾಗೇ ತಪ್ಪನ್ನು ಎಸಗಿರಬಹುದು. ಆದರೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಪಾರದರ್ಶಕವಾದ ಹಾಗೂ ಸಮರ್ಪಕವಾದ ಪುರಾವೆಯ ಅಗತ್ಯ ಬೇಕಾಗುತ್ತದೆ ಎಂದು ವಿವರಿಸಿದ್ದರು ಎಂದು ಬ್ಯಾಂಕಾಂಗ್ ಪೋಸ್ಟ್ ವರದಿ ಮಾಡಿದೆ.

ರಾಷ್ಟ್ರೀಯ ಭದ್ರತೆ ಮತ್ತು ರಹಸ್ಯ ಸಂಘಟನೆ, ಸಂಚು ಮತ್ತು ಗನ್ ಲಾ ಅಪರಾಧಕ್ಕೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಯನ್ನು ನಡೆಸುತ್ತಿದ್ದರು. ಆದರೆ ಐವರು ಆರೋಪಿಗಳನ್ನು ಖುಲಾಸೆಗೊಳಿಸುವ ಕಾನಾಕೋರ್ನಾ ಅವರ ತೀರ್ಪಿಗೆ ಹಿರಿಯ ನ್ಯಾಯಾಧೀಶರು ಅಸಮ್ಮತಿ ವ್ಯಕ್ತಪಡಿಸಿದ್ದರು.

ತನಗೆ ತಾನೇ ಗುಂಡು ಹೊಡೆದುಕೊಂಡ ನ್ಯಾಯಾಧೀಶರನ್ನು ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ಚಿಕಿತ್ಸೆ ನಡೆಸುತ್ತಿದ್ದಾರೆ. ನ್ಯಾಯಾಧೀಶ ಕಾನಾಕೋರ್ನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ಎಎಫ್ ಪಿ ವರದಿ ತಿಳಿಸಿದೆ.

ಜಡ್ಜ್ ಕಾನಾಕೋರ್ನ್ ಅವರು ಮಾನಸಿಕ ಒತ್ತಡದಿಂದ ಗುಂಡು ಹೊಡೆದುಕೊಂಡಿದ್ದಾರೆಯೇ ವಿನಃ, ಪ್ರಕರಣದ ಕಾರಣಕ್ಕೆ ಅಲ್ಲ. ಆದರೆ ನಿಖರವಾದ ಕಾರಣ ಏನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳ ಕಚೇರಿಯ ವಕ್ತಾರ ಸೂರಿಯಾನ್ ಹಾಂಗ್ ವಿಲೈ ತಿಳಿಸಿದ್ದಾರೆ.

Comments are closed.