ಉದ್ಯಮಿ, ಬಹುಕೋಟಿ ವಂಚಕ ನೀರವ್ ಮೋದಿ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಯುನೈಟೆಡ್ ಕಿಂಗ್ಡಮ್ನ ವೆಸ್ಟ್ಮಿನ್ಸ್ಸ್ಟರ್ ನ್ಯಾಯಾಲಯ ತಿರಸ್ಕರಿಸಿದೆ. ಈ ಮೂಲಕ ಜಾಮೀನು ಪಡೆದು ಜೈಲಿನಿಂದ ಆಚೆ ಬರುವ ನೀರವ್ ಮೋದಿ ಎರಡನೇ ಪ್ರಯತ್ನವೂ ವಿಫಲವಾಗಿದೆ. ಅರ್ಜಿ ಕುರಿತ ಮುಂದಿನ ವಿಚಾರಣೆಯನ್ನು ಮೇ 24ಕ್ಕೆ ಕೋರ್ಟ್ ಮುಂದೂಡಿದೆ.
ಇತ್ತೀಚೆಗಷ್ಟೇ ನೀರವ್ ಮೋದಿ ಲಂಡನ್ನ ಹಾಲ್ಬಾರ್ನ್ ಮೆಟ್ರೋ ಸ್ಟೇಷನ್ನಲ್ಲಿ ಬಂಧನಕ್ಕೊಳಗಾಗಿದ್ದರು. ಇಂದು ಅವರನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಅರ್ಜಿ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ಪಂಜಾಬ್ ನ್ಯಾಷನಲ್ ಬ್ಯಾಂಕ್ನಿಂದ 13,500 ಕೋಟಿ ರೂ. ಸಾಲ ಪಡೆದಿದ್ದ ನೀರವ್ ಮೊದಿ, ಮರುಪಾವತಿ ಮಾಡದೇ ಭಾರತದಿಂದ ಕಾಲ್ಕಿತ್ತಿದ್ದರು. ಸದ್ಯ ಭಾರತದ ಪರ ವಕೀಲರು ನ್ಯಾಯಾಲಯದಲ್ಲಿ ನೀರವ್ ಮೋದಿ ವಿರುದ್ಧ ಧಾವೆ ಹೂಡಿದ್ದಾರೆ. ಭಾರತಕ್ಕೆ ಬಹು ಕೋಟಿ ವಂಚಕನನ್ನು ಹಸ್ತಾಂತರಿಸುವಂತೆಯೂ ಮನವಿ ಮಾಡಲಾಗಿದೆ.
“ನೀರವ್ ಮೋದಿ ಮೇಲಿರುವ ಗುರುತರ ಆರೋಪಗಳಿಗೆ ತಕ್ಕ ಸಾಕ್ಷಿಗಳಿವೆ ಮತ್ತು ಅವರಿಗೆ ಜಾಮೀನು ನೀಡಿದರೆ ಅವರು ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಮತ್ತು ಪುರಾವೆಗಳನ್ನು ತಿರುಚುವ ಸಾಧ್ಯತೆ ಇದೆ. ಈ ಕಾರಣದಿಂದ ಅವರಿಗೆ ಜಾಮೀನು ನೀಡಬೇಡಿ,” ಎಂದು ಟಾಬಿ ಕ್ಯಾಡ್ಮ್ಯಾನ್ ಕೋರ್ಟ್ಗೆ ಕಳೆದ ವಿಚಾರಣೆ ದಿನ ಮನವಿ ಮಾಡಿದ್ದರು. ಟಾಬಿ ಕ್ಯಾಡ್ಮ್ಯಾನ್ ಭಾರತದ ಪರ ಇಂಗ್ಲೆಂಡ್ನಲ್ಲಿ ವಾದ ಮಂಡಿಸುತ್ತಿದ್ದಾರೆ.
ಮುಂದುವರೆದಿದ್ದ ಅವರು, ನೀರವ್ ಮೋದಿ ದೇಶ ಬಿಟ್ಟು ಓಡಿಹೋಗುವ ಆತುರದಲ್ಲಿದ್ದಾರೆ ಎಂಬುದು ಕೂಡ ತನಿಖೆಯಿಂದ ತಿಳಿದುಬಂದಿದೆ ಎಂದಿದ್ದಾರೆ. “ಕೋಟ್ಯಾಂತರ ರೂಪಾಯಿ ಮೌಲ್ಯದ ಡೈಮಂಡ್, ಚಿನ್ನ ಮತ್ತು ಮುತ್ತುರತ್ನಗಳು ನೀರವ್ ಮೋದಿ ಬಳಿ ಇವೆ. ವಿಚಾರಣೆ ವೇಳೆ ಪೊಲೀಸರಿಗೆ ಮೋದಿ ಎಂದೂ ಸಹಕಾರ ನೀಡಿಲ್ಲ. ನೀರವ್ ಮೋದಿಗೆ ಜಾಮೀನು ನೀಡಲೇಬಾರದು,” ಎಂದು ಕ್ಯಾಡ್ಮ್ಯಾನ್ ವಾದ ಮಂಡಿಸಿದ್ದರು.
ವಿಚಾರಣೆಯ ಆರಂಭಕ್ಕೂ ಮುನ್ನ ಪ್ರಕರಣಕ್ಕೆ ಸಂಬಂಧಿಸಿದ ಇನ್ನಷ್ಟು ಸಾಕ್ಷಿಗಳನ್ನು ಕೋರ್ಟ್ಗೆ ಸಲ್ಲಿಕೆ ಮಾಡಲಾಗಿತ್ತು. ವಾದ ಪ್ರತಿವಾದಗಳನ್ನು ಆಲಿಸಿದ ನಂತರ ನೀರವ್ ಮೋದಿಯ ಜಾಮೀನು ಅರ್ಜಿಯನ್ನು ವೆಸ್ಟ್ಮಿನಿಸ್ಟರ್ ನ್ಯಾಯಾಲಯ ತಿರಸ್ಕರಿಸಿದ್ದರು. ಈ ಹಿಂದೆ ವಿಜಯ್ ಮಲ್ಯಾರ ಹಸ್ತಾಂತರ ಪ್ರಕ್ರಿಯೆಗೆ ಅವಕಾಶ ನೀಡಿದ್ದ ನ್ಯಾಯಾಧೀಶರೇ ಈ ಪ್ರಕರಣವನ್ನೂ ಆಲಿಸುತ್ತಿದ್ದಾರೆ. ಇಂದೂ ಕೂಡ ನೀರವ್ ಮೋದಿ ಮನವಿಯನ್ನು ಕೋರ್ಟ್ ಮಾನ್ಯ ಮಾಡಿಲ್ಲ.
Comments are closed.