
ಕೊಲೊಂಬೋದಲ್ಲಿ ಬಾಂಬ್ ಸ್ಪೋಟ ನಡೆಸಿದ ಒಂಭತ್ತು ಜನ ಆತ್ಮಾಹುತಿ ದಾಳಿಕೋರರಲ್ಲಿ ಓರ್ವರು ಮಹಿಳೆಯಾಗಿದ್ದರು ಎಂದು ಶ್ರೀಲಂಕಾ ರಕ್ಷಣಾ ಮಂತ್ರಿ ರುವಾನ್ ವಿಜೆವರ್ಧೆನೆ ತಿಳಿಸಿದ್ದಾರೆ.
ಶ್ರೀಲಂಕಾದಲ್ಲಿ ನಡೆದ ಬಾಂಬ್ ಸ್ಪೋಟದಲ್ಲಿ ಸತ್ತವರ ಸಂಖ್ಯೆ ಏರುತ್ತಲೆ ಇದೆ. ಈವರೆಗೆ 359 ಜನ ಸಾವನ್ನಪ್ಪಿದ್ದು, 500ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ದಾಳಿಗೆ ಸಂಬಂಧಿಸಿದಂತೆ 60 ಶಂಕಿತರನ್ನು ಬಂಧಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ವಕ್ತಾರ ರುವಾನ್ ಗುಣಶೇಖರ ಮಾಹಿತಿ ನೀಡಿದ್ದಾರೆ.
ಎರಡು ದಿನಗಳ ಹಿಂದೆ ಈಸ್ಟರ್ ಸಂಭ್ರದ ದಿನ ದ್ವೀಪ ರಾಷ್ಟ್ರದಲ್ಲಿ ನಡೆದ ಬಾಂಬ್ ಸ್ಪೋಟದಿಂದಾಗಿ ವಿಶ್ವವೇ ಬೆಚ್ಚಿದೆ. ಈ ಘಟನೆಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಸಂಘಟನೆ ಹೊತ್ತುಕೊಂಡಿದೆ.
ಶ್ರೀಮಂತ ಉದ್ಯಮಿ ಹಾಗೂ ಸ್ಪೈಸ್ ವಾಣಿಜ್ಯಗಾರ ಮೊಹಮ್ಮದ್ ಯೂಸಫ್ ಇಬ್ರಾಹಿಂನ ಇಬ್ಬರು ಮಕ್ಕಳು ಈ ಸರಣಿ ಬಾಂಬ್ ಆತ್ಮಾಹುತಿ ದಾಳಿಕೋರರಾಗಿದ್ದಾರೆ. 33 ವರ್ಷದ ಇಮ್ಸತ್ ಅಹಮದ್ ಇಬ್ರಾಹಿಂ ಮತ್ತು 31 ವರ್ಷದ ಇಲಾಮ್ ಅಹಮದ್ ಇಬ್ರಾಹಿಂ ಸಹೋದರರು ಚಿನ್ನಮೊನ್ ಗ್ರಾಂಡ್ ಮತ್ತು ಶಾಂಗ್ರಿಲಾ ಹೊಟೇಲ್ನಲ್ಲಿ ಬಾಂಬ್ ಸ್ಪೋಟಿಸಿದವರು ಎಂದು ಭಾರತದ ಗುಪ್ತಚರ ಮೂಲಗಳು ಫಸ್ಟ್ಪೋಸ್ಟ್ಗೆ ತಿಳಿಸಿದೆ.
ಸಂಸತ್ತಿನಲ್ಲಿ ಪ್ರತಿಧ್ವನಿಸಿದ ರಕ್ಷಣಾ ಇಲಾಖೆ ಲೋಪ
ಈ ದಾಳಿಯ ಕುರಿತು ಹಿರಿಯ ಅಧಿಕಾರಿಗಳಿಗೆ ಈ ಮೊದಲೇ ಮಾಹಿತಿ ತಿಳಿದಿದ್ದು, ಉದ್ದೇಶಪೂರ್ವಕವಾಗಿ ಈ ಮಾಹಿತಿಯನ್ನು ಅವರು ಹಂಚಿಕೊಂಡಿರಲಿಲ್ಲ ಎಂದು ಸಂಸತ್ತಿನಲ್ಲಿ ನಾಯಕರು ತಿಳಿಸಿದ್ದಾರೆ.
ಈಸ್ಟರ್ ಭಾನುವಾರದಂದು ದೇಶದಲ್ಲಿ ಶಾಂತಿ ಕದಡಲು ಉಗ್ರರು ಸಜ್ಜಾಗಿದ್ದರ ಕುರಿತು ಗುಪ್ತಚರ ಇಲಾಖೆಗೆ ಮಾಹಿತಿ ತಿಳಿದಿತ್ತು. ಆದರೆ ರಕ್ಷಣಾ ಇಲಾಖೆ ಉನ್ನತಾಧಿಕಾರಿಗಳು ಈ ಕುರಿತು ಸರಿಯಾದ ಕ್ರಮಕ್ಕೆ ಮುಂದಾಗಲಿಲ್ಲ ಎಂದು ಸಾರ್ವಜನಿಕ ಉದ್ಯಮ ಸಚಿವ ಲಕ್ಷಣ ಕಿರೈಲಾ ಸಂಸತ್ತಿನ ಮುಂದೆ ತಿಳಿಸಿದ್ದಾರೆ.
ದೇಶದ ಚರ್ಚ್ , ಹೊಟೇಲ್ ಹಾಗೂ ರಾಜಕೀಯ ನಾಯಕರ ಮೇಲೆ ಬಾಂಬ್ ದಾಳಿಯಾಗುವ ಬಗ್ಗೆ ಏಪ್ರಿಲ್ 4ರಂದು ರಂದು ಭಾರತದ ಗುಪ್ತಚರ ಇಲಾಖೆ ಮಾಹಿತಿ ನೀಡಿತು. ಏಪ್ರಿಲ್ 7ರಂದು ಅಧ್ಯಕ್ಷ ಮಹಿತ್ತಿಪಾಲ್ ಸೇರಿಸೇನಾ ನೇತೃತ್ವದಲ್ಲಿ ರಕ್ಷಣಾ ಮಂಡಳಿ ಸಭೆ ಕೂಡ ನಡೆದಿತ್ತು. ಆದರೆ, ಈ ಮಾಹಿತಿಯನ್ನು ಅವರು ಬೇರೆಲ್ಲೂ ಹಂಚಿಕೊಂಡಿರಲಿಲ್ಲ ಎಂದಿದ್ದಾರೆ.
ಈ ಗುಪ್ತಚರ ಮಾಹಿತಿಯನ್ನು ಯಾರೋ ನಿಯಂತ್ರಿಸುತ್ತಿದ್ದಾರೆ. ರಕ್ಷಣಾ ಮಂಡಳಿ ರಾಜಕೀಯ ನಡೆಸುತ್ತಿದೆ. ಈ ಕುರಿತು ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.
Comments are closed.