
ಅಮೇರಿಕಾ: ಈಜುಕೊಳದಲ್ಲಿ ಮುಳುಗುತ್ತಿದ್ದ 34 ವರ್ಷದ ವ್ಯಕ್ತಿಯನ್ನು 11 ವರ್ಷದ ಪೋರ ಕಾಪಾಡಿದ್ದಾನೆ. ಭಾರತೀಯ ಮೂಲದ ಅದ್ವೈಕ್ ನಂದಿಕೊಟ್ಕುರ್ ತನಗಿಂತ ದುಪ್ಪಟ್ಟು ಭಾರವಿರುವ ವ್ಯಕ್ತಿಯನ್ನು ಈಜುಕೊಳದಿಂದ ಎತ್ತಿ ಬದುಕುಳಿಸಿದ್ದಾನೆ.
ಅಮೆರಿಕಾದ ಮಿನ್ನೆಸೊಟ ಬಳಿಯಿರುವ ಈಗನ್ ಕಾಂಪ್ಲೆಕ್ಸ್ನಲ್ಲಿರುವ ಈಜುಕೊಳದಲ್ಲಿ ಶ್ರೀನಿವಾಸ(34) ತನ್ನ ಗಳೆಯರು ಮತ್ತು ಕುಟುಂಬಸ್ಥರ ಜೊತೆ ಸ್ವಿಮ್ ಮಾಡುತ್ತಿದ್ದರು. ಆತನಿಗೆ ಈಜು ಬರುತ್ತಿರಲಿಲ್ಲ. ಆದರೆ ಈಜಲು ಪ್ರಯತ್ನಿಸುತ್ತಿದ್ದರು. ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ನೋಡನೋಡುತ್ತಿದ್ದಂತೆ 77 ಕೆಜಿ ತೂಕದ ವ್ಯಕ್ತಿ ತೇಲಲು ಆಗದೆ 8 ಅಡಿ ಆಳವಿರುವ ಈಜುಕೊಳದೊಳಗೆ ಮುಳುಗುತ್ತಿದ್ದರು. ಅಲ್ಲಿ ಏನಾಯಿತು ಎಂದು ನೋಡುವಷ್ಟರಲ್ಲಿ ಆತ ಸಂಪೂರ್ಣ ಮುಳುಗಿದ್ದ.
ಅದೇ ಕಾಂಪ್ಲೆಕ್ಸ್ನಲ್ಲಿ ವಾಸವಿದ್ದ ಅದ್ವೈಕ್ ತನ್ನ ಹೆತ್ತವರ ಜೊತೆ ಸ್ವಿಮ್ಮಿಂಗ್ ಪೂಲ್ ಬಳಿ ಸುತ್ತಾಡುತ್ತಿದ್ದ. ಈ ಘಟನೆ ಸಂಭವಿಸಿದಾಗ ತಾಯಿ ಲಲಿತಾ ಮರೆಡ್ಡಿ ಮತ್ತು ತಂದೆ ರಘು ನಂದಿಕೊಟ್ಕುರ್ ಅವರೂ ಸಹ ಇದ್ದರು.
ಸ್ವಿಮ್ಮಿಂಗ್ ಪೂಲ್ನಲ್ಲಿ ಮುಳುಗುತ್ತಿರುವ, ಪ್ರಜ್ಞೆ ಕಳೆದುಕೊಂಡಿರುವ ವ್ಯಕ್ತಿಯನ್ನು ಅದ್ವೈಕ್ನ ತಾಯಿ ಲಲಿತಾ ನೋಡಿದರು. ಆಗ ಲಿಲತಾ ತಕ್ಷಣ ಅಲ್ಲೇ ಪಕ್ಕದಲ್ಲಿ ಇದ್ದ 9 ಜನರನ್ನು ಸಹಾಯಕ್ಕೆ ಕರೆದರು. ಆದರೆ ಯಾರೊಬ್ಬರೂ ಈಜುಕೊಳಕ್ಕೆ ಧುಮುಕಿ ಆತನನ್ನು ಬದುಕಿಸುವ ಸಾಹಸಕ್ಕೆ ಮುಂದಾಗಲಿಲ್ಲ.
ರಘು ಮತ್ತು ಲಲಿತಾಗೆ ಈಜು ಬರುತ್ತಿತ್ತು. ಆಗ ರಘು ಸ್ವಿಮ್ಮಿಂಗ್ ಪೂಲ್ಗೆ ಧುಮುಕಿ ತೇಲುವ ಟೂಬ್ನ ಸಹಾಯದಿಂದ ಆಳಕ್ಕೆ ಮುಳುಗಿ ಶ್ರೀನಿವಾಸನನ್ನು ಬದುಕಿಸಲು ಮುಂದಾದರು. ‘ಆದರೆ ಆ ತೇಲುವ ಟೂಬ್ ನನ್ನನ್ನು ಮೇಲಕ್ಕೆ ಎತ್ತುತ್ತಿತ್ತು. ನನಗೆ ಆ ವ್ಯಕ್ತಿಯನ್ನು ಹಿಡಿಯಲು ಸಾಧ್ಯವಾಗಲಿಲ್ಲ’. ಆಗ ಇದೆಲ್ಲವನ್ನು ನೋಡುತ್ತಿದ್ದ ಲಲಿತಾಗೆ ಏನು ಮಾಡಬೇಕೆಂದು ತೋಚದಾಯಿತು. 30 ಕೆಜಿ ಇರುವ ತನ್ನ 11 ವರ್ಷದ ಮಗನಿಗೆ ಆ ವ್ಯಕ್ತಿಯನ್ನು ಬದುಕಿಸಲು ಹೇಳಿದಳು.
‘ಅಮ್ಮ ನನಗೆ ಸ್ವಿಮ್ಮಿಂಗ್ ಪೂಲ್ಗೆ ಧುಮುಕಲು ಹೇಳಿದರು. ಆ ವ್ಯಕ್ತಿ ತುಂಬಾ ಭಾರವಿದ್ದಾನೆ ಎಂದು ಹೇಳಿದೆ. ಆದರೂ ನಾನು ಧುಮುಕಿದೆ’ ಎಂದು ಅದ್ವೈಕ್ ಹೇಳುತ್ತಾನೆ.
ಶ್ರೀನಿವಾಸ 77 ಕೆಜಿ ತೂಕವಿದ್ದ ವ್ಯಕ್ತಿ. ಅವರನ್ನು ಈಜುಕೊಳದ ತಳಭಾಗದಿಂದ ಮೇಲೆತ್ತುವುದು 11 ವರ್ಷದ ಪೋರನಿಗೆ ಸಾಹಸದ ಕೆಲಸವೇ ಆಗಿತ್ತು. ಅಷ್ಟೇ ಅಲ್ಲದೇ ನೀರಿನ ಒತ್ತಡ ಕೆಳಗೆ ತಳ್ಳುತ್ತಿತ್ತು. ಆದರೆ ಅದ್ವೈಕ್ ಧೈರ್ಯ ಮಾಡಿ ಈಜುಕೊಳಕ್ಕೆ ಧುಮುಕಿ 77 ಕೆಜಿ ತೂಕದ ವ್ಯಕ್ತಿಯನ್ನು ಮೇಲೆತ್ತಿದ್ದ.
ಅದ್ವೈಕ್ ಶ್ರೀನಿವಾಸನನ್ನು ಮೇಲೆತ್ತಿದಾಗ, ಆತನ ತಂದೆ ರಘು, ಚಿಕ್ಕಪ್ಪ ಸುಸೀಲ್ ಕುಮಾರ್ ನಂದಿಕೊಟ್ಕೂರ್ ಮತ್ತಿತರರು ಸೇರಿ ಆ ವ್ಯಕ್ತಿಯನ್ನು ಈಜುಕೊಳದಿಂದ ಹೊರಗೆ ಎಳೆದುಕೊಂಡರು. ಅದೃಷ್ಟವಶಾತ್ ಶ್ರೀನಿವಾಸ ಪ್ರಾಣಾಪಾಯದಿಂದ ಪಾರಾಗಿದ್ದರು. ಸುಸೀಲ್ ವೃತ್ತಿಪರ ಈಜುಗಾರನಲ್ಲ. ಯಾವುದೇ ತರಬೇತಿ ಪಡೆದಿರಲಿಲ್ಲ. ಆದರೂ ಸಾಹಸ ಮಾಡಿ ಆ ವ್ಯಕ್ತಿಯ ಜೀವವನ್ನು ಕಾಪಾಡಿದ್ದರು.
ವಿಷಯ ತಿಳಿದಾಕ್ಷಣ ಸ್ಥಳಕ್ಕಾಗಮಿಸಿದ ಈಗನ್ ಪೊಲೀಸ್ ಠಾಣೆಯ ಪೊಲೀಸರು ಘಟನೆ ಸಂಬಂಧ ವಿಚಾರಣೆ ನಡೆಸಿದರು. ಅಲ್ಲದೇ ಶ್ರೀನಿವಾಸರನ್ನು ಬದುಕುಳಿಸಿದ ಅದ್ವೈಕ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.
‘ಅಪ್ರಾಪ್ತ ಹುಡಗನೊಬ್ಬ ಸ್ವಿಮ್ಮಿಂಗ್ ಪೂಲ್ಗೆ ಧುಮುಕಿ ವ್ಯಕ್ತಿಯನ್ನು ಬದುಕಿಸಿರುವುದು ಅಚ್ಚರಿಯ ಸಂಗತಿ. ಬದುಕುಳಿದಿರುವ ವ್ಯಕ್ತಿ ತುಂಬಾ ಅದೃಷ್ಟವಂತ’ ಎಂದು ಪೊಲೀಸ್ ಅಧಿಕಾರಿ ಅರೋನ್ ಮಾಚ್ಟೆಮಸ್ ಸಿಎನ್ಎನ್ ಗೆ ಹೇಳಿದರು.
ಪೊಲೀಸ್ ಇಲಾಖೆ ಅದ್ವೈತ್ ಮತ್ತು ಸುಸೀಲ್ ಅವರನ್ನು ‘ಲೈಫ್ ಸೇವಿಂಗ್ ಅವಾರ್ಡ್’ಗೆ ನಾಮಿನೇಟ್ ಮಾಡಿದೆ.
Comments are closed.