ಇಸ್ಲಮಾಬಾದ್: ರಾಜಧಾನಿ ಇಸ್ಲಾಮಾಬಾದ್ ತಲುಪುವ ಮುಖ್ಯ ಹೆದ್ದಾರಿಯನ್ನು ತಡೆಹಿಡಿದು ನಡೆಸುತ್ತಿದ್ದ ಪ್ರತಿಭಟ ಹಿಂಸಾರೂಪಕ್ಕೆ ತಿರುಗಿದೆ. ಸಾವಿರಾರು ಪ್ರತಿಭಟನಾಕಾರರನ್ನು ಚದುರಿಸಲು ಪಾಕಿಸ್ತಾನದ ಸೇನಾ ಪಡೆ ಕಾರ್ಯಾಚಾರಣೆ ವೇಳೆ ಓರ್ವ ಭದ್ರತಾ ಅಧಿಕಾರಿ ಮೃತಪಟ್ಟಿದ್ದು 150ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
2017ರ ಚುನಾವಣಾ ಕಾಯಿದೆಯಲ್ಲಿ ಪ್ರವಾದಿತ್ವದ ಅಂತಿಮ ಪ್ರಮಾಣಕ್ಕೆ (ಖತ್ಮ್-ಇ-ನಬೂವ್ವತ್) ಬದಲಾವಣೆಗಳನ್ನು ಕಳೆದ ಸೆಪ್ಟೆಂಬರ್ನಲ್ಲಿ ತರಲಾಗಿತ್ತು. ಈ ಕಾರಣಕ್ಕೆ ಕಾನೂನು ಸಚಿವ ಝಾಹೀದ್ ಹಮೀದ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂಬುದು ಪ್ರತಿಭಟಕಾರರು ಆಗ್ರಹಿಸಿದ್ದರು.
ಈ ಪ್ರತಿಭಟನೆ ಕಳೆದ ಹಲವು ದಿನಗಳಿಂದ ಸಾಗುತ್ತಿದ್ದು, ಮಾಹಿತಿಗಳ ಪ್ರಕಾರ ಎರಡು ಸಾವಿರಕ್ಕೂ ಅಧಿಕ ಪ್ರತಿಭಟನಾಕಾರರು ಎರಡು ವಾರಕ್ಕಿಂತಲೂ ಮೊದಲೇ ಪ್ರತಿಭಟನೆಗಿಳಿದು ಇಸ್ಲಾಮಾಬಾದ್ ಹೆದ್ದಾರಿ ಮತ್ತು ಇಸ್ಲಾಮಾಬಾದ್ಗೆ ಸಂಪರ್ಕ ನೀಡುವ ಮುರ್ರೀ ರಸ್ತೆ ತಡೆ ಮಾಡಿದ್ದರು.
ಆದರೆ ಶುಕ್ರವಾರದಂದು ಇಸ್ಲಾಮಾಬಾದ್ ಹೈಕೋರ್ಟ್ ಆಂತರಿಕ ವ್ಯಾವಹಾರ ಸಚಿವರಿಗೆ ರಸ್ತೆ ಸಂಚಾರ ಸುಗಮ ಮಾಡದೇ ಇರುವುದಕ್ಕೆ ನೋಟಿಸ್ ನೀಡಿತ್ತು. ಇದು ಪ್ರತಿಭಟನಾಕಾರರಿಗೆ ಮತ್ತಷ್ಟು ಉದ್ರಿಕ್ತಗೊಳ್ಳುವಂತೆ ಮಾಡಿತ್ತು. ಶನಿವಾರ ಪ್ರತಿಭಟನೆ ತೀವ್ರಗೊಂಡಿದ್ದು, ಪ್ರತಿಭಟನಾಕಾರರನ್ನು ತೆರವುಗೊಳಿಸಲು ಮುಂದಾದ ಪೊಲೀಸ್ ಮತ್ತು ಪ್ರತಿಭಟನಾಕಾರರ ನಡುವೆ ಗಲಾಟೆ ಸಂಭವಿಸಿದೆ. ಪರಿಣಾಮ ಓರ್ವ ಭದ್ರತಾ ಸಿಬ್ಬಂಧಿ ಮೃತಪಟ್ಟು 150ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಇಸ್ಲಾಮಿಕ್ ಪ್ರತಿಭಟನಾಕರರನ್ನು ಚದುರಿಸುವಲ್ಲಿ ಪಾಕ್ ಭದ್ರತಾ ಸಿಬ್ಬಂದಿ ಮತ್ತು ಪೊಲೀಸರು ತೀವ್ರ ಕಾರ್ಯಾಚರಣೆ ಕೈಗೊಂಡಿದ್ದು ಹೀಗಾಗಿ ಖಾಸಗಿ ಟಿವಿ ವಾಹಿನಿಗಳ ಮೇಲೆ ನಿರ್ಬಂಧ ಹೇರಿದೆ. ಅಲ್ಲದೇ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಟ್ವಿಟರ್ ಎಲ್ಲವನ್ನೂ ಕೆಲ ದಿನಗಳ ಕಾಲ ಸ್ಥಗಿತಗೊಳಿಸಲಾಗಿದೆ.
ಸೇನಾ ಮುಖ್ಯಸ್ಥ ಜನರಲ್ ಖಮರ್ ಜಾವೇದ್ ಬಾಜ್ವಾ ಪ್ರಧಾನ ಮಂತ್ರಿ ಶಾಹಿದ್ ಖಕಾನ್ ಅಬ್ಬಾಸಿಯೊಂದಿಗೆ ದೂರವಾಣಿ ಮೂಲಕ ಪ್ರಸಕ್ತ ಸ್ಥಿತಿಯನ್ನು ಹಳಿಕೊಂಡಿದ್ದು, ಸಮಸ್ಯೆಗೆ ಶಾಂತಿಯುತ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.
Comments are closed.