ಢಾಕಾ : ಕಳೆದ ವಾರ ಢಾಕಾ ಕೆಫೆಯಲ್ಲಿ 20 ವಿದೇಶೀಯರನ್ನು ಕತ್ತು ಸೀಳಿ ಕೊಲ್ಲಲಾದ ಉಗ್ರ ದಾಳಿಯು ಕೇವಲ ಒಂದು ಸ್ಯಾಂಪಲ್ ಮಾತ್ರ; ಇನ್ನು ಮುಂದಿದೆ ಮಹಾ ನರಮೇಧ ಎಂದು ಐಸಿಸ್ ಉಗ್ರ ಸಂಘಟನೆ ಎಚ್ಚರಿಕೆ ನೀಡಿದೆ.
ಬಾಂಗ್ಲಾದೇಶದಲ್ಲಿ ಇಸ್ಲಾಮಿಕ್ ಶರಿಯಾ ಕಾನೂನು ಸ್ಥಾಪನೆಯಾಗುವ ತನಕವೂ ಈ ರೀತಿಯ ಉಗ್ರ ದಾಳಿಗಳು ನಡೆಯುತ್ತಲೇ ಇರುತ್ತವೆ ಎಂದು ಐಸಿಸ್ ಉಗ್ರ ಸಂಘಟನೆ ತನ್ನ ಹೊಸ ವಿಡಿಯೋದಲ್ಲಿ ಹೇಳಿದೆ.
ಕಳೆದ ವಾರ ಬಾಂಗ್ಲಾದೇಶದ ಐವರು ಉಗ್ರರು (ಇವರಲ್ಲಿ ಹೆಚ್ಚಿನವರು ಸಿರಿವಂತ, ಉದಾರವಾದಿ ಕುಟುಂಬಕ್ಕೆ ಸೇರಿದವರು) ಢಾಕಾ ಕೆಫೆಗೆ ನುಗ್ಗಿ ಅಲ್ಲಿದ್ದ ಇಟಲಿ, ಜಪಾನ್, ಭಾರತ ಮತ್ತು ಅಮೆರಿಕ ಸೇರಿದಂತೆ ಸುಮಾರು 20 ವಿದೇಶೀಯರಿಗೆ ಚಿತ್ರಹಿಂಸೆ ನೀಡಿ ಬಳಿಕ ಗುಂಡಿಟ್ಟು ಸಾಯಿಸಿದ್ದರು.
ಸೈಟ್ ಇಂಟೆಲಿಜೆನ್ಸ್ ಅಂತರ್ಜಾಲ ತಾಣ ನಡೆಸಿರುವ ಐಸಿಸ್ ಉಗ್ರ ವಿಡಿಯೋ ವಿಚಕ್ಷಣೆಯಲ್ಲಿ ಬಾಂಗ್ಲಾದೇಶದ ಉಗ್ರ ಅಬು ಇಸಾ ಅಲ್ ಬೆಂಗಾಲಿ, “ನೀವು ಕಳೆದ ವಾರ ಢಾಕಾ ಕೆಫೆಯಲ್ಲಿ ಕಂಡಿರುವುದು ಕೇವಲ ಒಂದು ಸ್ಯಾಂಪಲ್ ಮಾತ್ರ. ಇಂತಹ ಉಗ್ರ ದಾಳಿಗಳು ಇನ್ನು ಮುಂದುವರಿಯುತ್ತಲೇ ಇರುತ್ತವೆ. ಜಗತ್ತಿನಾದ್ಯಂತ ಇಸ್ಲಾಮಿಕ್ ಶರಿಯಾ ಕಾನೂನನ್ನು ಜಾರಿಗೆ ತರುವುದು ನಮ್ಮ ಧ್ಯೇಯವಾಗಿದ್ದು ಬಾಂಗ್ಲಾದೇಶದಲ್ಲಿ ಅದು ಸ್ಥಾಪನೆಯಾಗುವ ತನಕವೂ, ನೀವು ಸೋಲುವ ತನಕ ಮತ್ತು ನಾವು ಗೆಲ್ಲುವ ತನಕ, ಈ ರೀತಿಯ ಮಹಾ ಉಗ್ರ ದಾಳಿಗಳು ನಡೆಯುತ್ತಲೇ ಇರುತ್ತವೆ’ ಎಂಬ ಎಚ್ಚರಿಕೆಯನ್ನು ಕೊಟ್ಟಿದ್ದಾನೆ.
-ಉದಯವಾಣಿ
Comments are closed.