ಢಾಕಾ: ನೆರೆಯ ಬಾಂಗ್ಲಾದೇಶದಲ್ಲಿ ಜಾತ್ಯತೀತ ಹೋರಾಟಗಾರರು ಹಾಗೂ ಅಲ್ಪಸಂಖ್ಯಾತ ಸಮುದಾಯದವರ ಹತ್ಯೆ ಮುಂದುವರೆದಿದ್ದು, 70 ವರ್ಷದ ಬೌದ್ಧ ಬಿಕ್ಕು ಮವಾಂಗ್ ಷೋ ವೂ ಅವರನ್ನು ದುಷ್ಕರ್ಮಿಗಳು ಕಳೆದ ರಾತ್ರಿ ಹತ್ಯೆ ಮಾಡಿದ್ದಾರೆ.
ಢಾಕಾದ ಬಂದರಬನ್ ಹಿಲ್ಸ್ ಜಿಲ್ಲೆಯ ನೈಖಾಂಗಚಾರಿ ಪ್ರದೇಶದಲ್ಲಿರುವ ಬೌದ್ಧ ವಿಹಾರದ ಮುಖ್ಯಸ್ಥರಾಗಿದ್ದ ಮವಾಂಗ್ ಅವರನ್ನು ಅವರ ನಿವಾಸದಲ್ಲೇ ಹತ್ಯೆ ಮಾಡಲಾಗಿದೆ. ಭಕ್ತರೊಬ್ಬರು ಅವರಿಗೆ ಬೆಳಗಿನ ತಿಂಡಿ ಕೊಡಲು ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ರಾತ್ರಿ ಮವಾಂಗ್ ಅವರು ತಮ್ಮ ನಿವಾಸದಲ್ಲಿ ಒಬ್ಬರೇ ಇದ್ದಾಗ ದುಷ್ಕರ್ಮಿಗಳು ಅವರ ಕತ್ತು ಸೀಳಿ ಹತ್ಯೆ ಮಾಡಿದ್ದಾರೆ ಎಂದು ನೈಖಾಂಗಚಾರಿ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಖಾಜಿ ಅಹ್ಸನ್ ತಿಳಿಸಿದ್ದು, ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದರು.