ವಿಶ್ವಸಂಸ್ಥೆ(ಪಿಟಿಐ): ವಿಶ್ವ ಶಾಂತಿ ಹಾಗೂ ಭದ್ರತೆಗೆ ಅತ್ಯಂತ ಗಂಭೀರ ಬೆದರಿಕೆಯಾಗಿರುವ ಭಯೋತ್ಪದನೆ ವಿರುದ್ಧ ನಮ್ಮ ಹೋರಾಟ, ಯಾವುದೇ ಧರ್ಮದ ವಿರುದ್ಧ ಅಲ್ಲ ಎಂದು ಭಾರತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ತಿಳಿಸಿದೆ.
ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ ಅವರು ಮಾತನಾಡಿ, ಭಾರತದ್ದು ಭಯೋತ್ಪಾದನೆ ವಿರುದ್ಧ ಹೋರಾಟವೇ ಹೊರತು, ಯಾವುದೇ ಧರ್ಮದ ವಿರೋಧಿಯಾದ ಮುಖಾಮುಖಿ ಹೋರಾಟವಲ್ಲ. ಇದು ಮಾನವೀಯ ಮೌಲ್ಯಗಳು ಮತ್ತು ಅಮಾನವೀಯತೆ ಪಡೆಗಳ ನಡುವಿನ ಹೋರಾಟ ಎಂದು ಹೇಳಿದ್ದಾರೆ.
ಭಯೋತ್ಪಾದನೆ ಸಿದ್ಧಾಂತ ಮತ್ತು ನಿರೂಪಣೆ ಮೇಲೆ ಭದ್ರತಾ ಮಂಡಳಿಯಲ್ಲಿ ನಡೆದ ಚರ್ಚೆಯಲ್ಲಿ ಅಕ್ಬರುದ್ದೀನ್ ಅವರು ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತದ ನಿಲುವನ್ನು ಸ್ಪಷ್ಟಪಡಿಸಿದರು.
ಜಾಗತಿಕ ಶಾಂತಿ ಮತ್ತು ಭದ್ರತೆಗೆ ಭಯೋತ್ಪಾದನೆ ಅತ್ಯಂತ ಗಂಭೀರ ಸಮಸ್ಯೆಯಾಗಿದೆ ಎಂದು ಅವರು ವಿವರಿಸಿದರು.