ಲಾಹೋರ್: ಮುಂಬೈ ಮೇಲಿನ ದಾಳಿ ಪ್ರಕರಣದ ವಿಚಾರಣೆಗಾಗಿ ಎಲ್ಲಾ 24 ಮಂದಿ ಸಾಕ್ಷಿಗಳನ್ನೂ ಭಯೋತ್ಪಾದನಾ ನಿಗ್ರಹ ನ್ಯಾಯಾಲಯದಲ್ಲಿ ಸಾಕ್ಷ್ಯ ನೀಡುವ ಸಲುವಾಗಿ ಪಾಕಿಸ್ತಾನಕ್ಕೆ ಕಳುಹಿಸುವಂತೆ ಪ್ರಕರಣದ ಮುಖ್ಯ ಪ್ರಾಸೆಕ್ಯೂಟರ್ ಭಾನುವಾರ ಸೂಚಿಸಿದ್ದಾರೆ.
‘ವಿದೇಶಾಂಗ ಸಚಿವಾಲಯವು ಭಾರತ ಸರ್ಕಾರಕ್ಕೆ ಪತ್ರ ಬರೆದು ಎಲ್ಲಾ 24 ಭಾರತೀಯ ಸಾಕ್ಷಿದಾರರನ್ನೂ ಪಾಕಿಸ್ತಾನಕ್ಕೆ ಮುಂಬೈ ದಾಳಿ ಪ್ರಕರಣದಲ್ಲಿ ಸಾಕ್ಷ್ಯ ದಾಖಲು ಮಾಡಿಕೊಳ್ಳುವ ಸಲುವಾಗಿ ಕಳುಹಿಸಿಕೊಡುವಂತೆ ಕೋರಿದೆ’ ಎಂದು ಪ್ರಾಸೆಕ್ಯೂಷನ್ ಮುಖ್ಯಸ್ಥ ಚೌಧರಿ ಅಜ್ಹರ್ ಹೇಳಿದ್ದಾರೆ.
ಆರು ವರ್ಷಗಳಿಂದ ವಿಚಾರಣೆ ನಡೆಸುತ್ತಿರುವ ಇಸ್ಲಾಮಾಬಾದಿನ ಭಯೋತ್ಪಾದನಾ ನಿಗ್ರಹ ನ್ಯಾಯಾಲಯವು ಎಲ್ಲಾ ಪಾಕಿಸ್ತಾನಿ ಸಾಕ್ಷಿದಾರರ ಹೇಳಿಕೆಗಳ ದಾಖಲಾತಿಯನ್ನು ಪೂರ್ಣಗೊಳಿಸಿದೆ. ಈಗ ಚೆಂಡು ಭಾರತದ ಅಂಗಳದಲ್ಲಿ ಇದೆ. ವಿಚಾರಣೆ ಮುಂದಕ್ಕೆ ಸಾಗುವಂತೆ ಸಹಕರಿಕರಿಸಲು ಭಾರತವು ತನ್ನ ಬಳಿ ಇರುವ ಎಲ್ಲಾ ಸಾಕ್ಷಿದಾರರನ್ನೂ ಪಾಕಿಸ್ತಾನಕ್ಕೆ ಕಳುಹಿಸಿಕೊಡಬೇಕು ಎಂದು ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿಯ (ಎಫ್ಐಎ) ವಿಶೇಷ ಪ್ರಾಸೆಕ್ಯೂಟರ್ ಕೂಡಾ ಆಗಿರುವ ಅಜ್ಹರ್ ತಿಳಿಸಿದ್ದಾರೆ.
ಎಲ್ಇಟಿ ಕಾರ್ಯಾಚರಣಾ ಕಮಾಂಡರ್ ಝುಕಿ ಉರ್ ರೆಹಮಾನ್ ಲಖ್ವಿ ಸೇರಿದಂತೆ 7 ಆರೋಪಿಗಳ ವಿಚಾರಣೆ ನಡೆಸುತ್ತಿರುವ ಪಾಕ್ ನ್ಯಾಯಾಲಯವು ಭಾರತದ ಎಲ್ಲಾ 24 ಮಂದಿ ಸಾಕ್ಷಿದಾರರನ್ನೂ ಹೇಳಿಕೆ ದಾಖಲಾತಿ ಸಲುವಾಗಿ ಹಾಜರುಪಡಿಸಿ ಎಂದು ಎಫ್ಐಎಗೆ ಕಳೆದ ತಿಂಗಳು ಆಜ್ಞಾಪಿಸಿತ್ತು.