ಜಕಾರ್ತ (ಇಂಡೋನೇಷ್ಯಾ), ಡಿ.20-ಇಂಡೋನೇಷ್ಯಾದ ಸುಲಾಬಸ್ಸೀ ಕಡಲ ತೀರದಲ್ಲಿ ಸಂಭವಿಸಿರುವ ದೋಣಿ ದುರಂತದಲ್ಲಿ ನೂರಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸುಮಾರು 150 ಜನರಿದ್ದ ಪ್ರಯಾಣಿಕರ ದೋಣಿ, ಕಡಲ ತೀರಕ್ಕೆ ಬರುವ ಸಂದರ್ಭ ಬೃಹತ್ ಅಲೆಗಳು ಎದ್ದು ದೋಣಿ ಪಲ್ಟಿಯಾಗಿದೆ. ಬೆರಳೆಣಿಕೆಯಷ್ಟು ಜನರನ್ನು ರಕ್ಷಿಸಲಾಗಿದ್ದು, ದೋಣಿಯಲ್ಲಿ 19 ಜನ ಮಕ್ಕಳು ಮತ್ತು 10 ಜನ ಸಿಬ್ಬಂದಿ ಸಹಿತ ಸುಮಾರು 150 ಮಂದಿ ಇದ್ದರು. ದೋಣಿಯಲ್ಲಿದ್ದವರ ಪೈಕಿ ಕರಾವಳಿ ಪಡೆ 20ಕ್ಕೂ ಕಡಿಮೆ ಸಂಖ್ಯೆಯ ಪ್ರಯಾಣಿಕರನ್ನು ರಕ್ಷಿಸಿದೆ. ಸುಮಾರು ನಾಲ್ಕೈದು ಮೀಟರ್ ಎತ್ತರದ ಅಲೆಗಳು ಸಮುದ್ರದಲ್ಲಿ ಎದ್ದಿದ್ದೇ ಈ ಅಪಘಾತಕ್ಕೆ ಕಾರಣ ಎಂದು ಕರಾವಳಿ ಪಡೆ ಅಧಿಕಾರಿಗಳು ತಿಳಿಸಿದ್ದಾರೆ.
ನಾಪತ್ತೆಯಾಗಿರುವ ಪ್ರಯಾಣಿಕರಿಗಾಗಿ ರಕ್ಷಣಾ ಕಾರ್ಯ ಮುಂದುವರೆದಿದೆ. ಆದರೆ, ಇನ್ನೂ ಕೂಡ ಅಲೆಗಳು ಅಪ್ಪಳಿಸುತ್ತಿರುವುದರಿಂದ ನಾಪತ್ತೆಯಾಗಿರುವ 100ಕ್ಕೂ ಹೆಚ್ಚು ಜನ ಯಾರೂ ಬದುಕುಳಿದಿಲ್ಲ ಎಂದು ರಕ್ಷಣಾ ಸಿಬ್ಬಂದಿ ಶಂಕಿಸಿದ್ದಾರೆ.
ದೋಣಿಯಲ್ಲಿದ್ದವರ ಪೈಕಿ ಬಹುತೇಕ ಜನ ಸಿರಿಯಾ, ಇರಾಕ್ ಮತ್ತು ಪಾಕಿಸ್ಥಾನದಿಂದ ಬಂದಿದ್ದ ನಿರಾಶ್ರಿತರಾಗಿದ್ದರು. ಯುದ್ಧಪೀಡಿತ ಸಿರಿಯಾ ಮತ್ತು ಇರಾಕ್ ದೇಶಗಳಿಂದ ಪ್ರತಿದಿನ ನಿರಾಶ್ರಿತರು ಯುರೋಪ್ ರಾಷ್ಟ್ರಗಳಿಗೆ ಈ ರೀತಿ ವಲಸೆ ಹೋಗುತ್ತಲೇ ಇದ್ದಾರೆ. ಹವಾಮಾನ ವೈಪರೀತ್ಯದಿಂದಾಗಿ ಸಮುದ್ರದಲ್ಲಿ ಅಲೆಗಳು ಏಳುತ್ತಿರುವುದರಿಂದ ಇಂತಹ ದುರಂತಗಳು ಆಗಾಗ ಸಂಭವಿಸುತ್ತಲೇ ಇರುತ್ತವೆ.