ಅಂತಾಲಿಯಾ (ಟರ್ಕಿ), ನ.16- ಧರ್ಮ ಮತ್ತು ಭಯೋತ್ಪಾದನೆಗಳನ್ನು ಬೇರ್ಪಡಿಸಬೇಕು ಎಂದು ಒತ್ತಿ ಹೇಳಿದ ಪ್ರಧಾನಿ ನರೇಂದ್ರ ಮೋದಿ, ಕೆಲವು ರಾಷ್ಟ್ರಗಳು ಇನ್ನೂ ಕೂಡ ಉಗ್ರವಾದವನ್ನು ತಮ್ಮ ಸರ್ಕಾರದ ನೀತಿಯ ಸಾಧನೆಯನ್ನಾಗಿ ಮಾಡಿಕೊಂಡಿವೆ ಎಂದು ಖಂಡಿಸಿದರು.
ಇಲ್ಲಿ ನಡೆಯುತ್ತಿರುವ ಎರಡು ದಿನಗಳ ಜಿ-20 ರಾಷ್ಟ್ರಗಳ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಯಾವುದೇ ರಾಜಕೀಯ ಉದ್ದೇಶವೂ ಇಲ್ಲದೆ ಇಡೀ ವಿಶ್ವವೇ ಈ ಭಯೋತ್ಪಾದನೆ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕರೆ ನೀಡಿದರು. ಫ್ರಾನ್ಸ್ ರಾಜಧಾನಿ ಪ್ಯಾರಿಸ್ನಲ್ಲಿ ನಡೆದ ಐಎಸ್ ಉಗ್ರರ ದಾಳಿಯ ಬಗ್ಗೆ ಪ್ರಸ್ತಾಪಿಸಿದ ಅವರು, ಭಯೋತ್ಪಾದನೆಯು ತನ್ನ ಹಳೆಯ ಸ್ವರೂಪವನ್ನು ಹಾಗೆಯೇ ಉಳಿಸಿಕೊಂಡಿದೆ. ಕೆಲವು ದೇಶಗಳು ಅದನ್ನೇ ತಮ್ಮ ರಾಜ್ಯನೀತಿಯ ಸಲಕರಣೆಯಂತೆ ಬಳಸಿಕೊಳ್ಳುತ್ತಿವೆ ಎಂದು ಅವರು ತಿಳಿಸಿದರು.
ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ, ಪ್ರಚೋದಿಸುವವರನ್ನು ದೂರವಿಡಬೇಕು ಹಾಗೂ ಮಾನವೀಯತೆಯ ಬೆಂಬಲಿಸುವವರ ಬೆನ್ನಿಗೆ ನಿಲ್ಲಬೇಕು. ವಿಶ್ವಕ್ಕೇ ಪೆಡಂಭೂತವಾಗಿ ನಿಂತಿರುವ ಉಗ್ರವಾದದ ಮೂಲೋತ್ಪಾಟನೆಗೆ ಹೊಸ ನೀತಿಯನ್ನೇ ರೂಪಿಸುವ ಸಂದರ್ಭ ಇದೀಗ ಸನ್ನಿಹಿತವಾಗಿದೆ. ಹೊರ ದೇಶಗಳ ಭಯೋತ್ಪಾದನೆ, ಆಂತರಿಕ ಭಯೋತ್ಪಾದನೆಗಳು ಇಡೀ ಅಭಿವೃದ್ಧಿಯ ಹಾದಿಯನ್ನೇ ಮುಚ್ಚಿ ಹಾಕುತ್ತಿವೆ. ಅದನ್ನು ತೆರವುಗೊಳಿಸುವ ಕೆಲಸ ತುರ್ತಾಗಿ ಆಗಬೇಕಾಗಿದೆ ಎಂದು ಪ್ರಧಾನಿ ಹೇಳಿದರು.