ಕಠ್ಮಂಡು, ಏ.28-ಭೂಕಂಪದಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯ ಪರಿಣಾಮಕಾರಿಯಾಗಿಲ್ಲ ಎಂದು ನೇಪಾಳ ಪ್ರಧಾನಿ ಸುಶೀಲ ಕೊಯಿರಾಲಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭೂಕಂಪದಿಂದ ನೊಂದ ಸಂತ್ರಸ್ತರಿಗೆ ಕುಡಿಯುವ ನೀರು, ಆಹಾರದ ಕೊರತೆಯಾಗಿದ್ದು ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಮತ್ತೊಂದು ಭೂಕಂಪ ಎಲ್ಲಿ ಸಂಭವಿಸುವುದೋ ಎಂಬ ಆತಂಕದಲ್ಲಿರುವ ನಾಗರಿಕರು ಮನೆ ಮಠ ತೊರೆದು ಹೊರಗಡೆ ಬಂದಿದ್ದಾರೆ. ಇದುವರೆಗೆ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಮೃತ
ದೇಹಗಳನ್ನು ಹೊರತೆಗೆದಿದ್ದು ಇನ್ನೂ ಸಾವಿರಾರು ಶವಗಳು ಕಟ್ಟಡಗಳ ಅವಶೇಷಗಳಡಿ ಸಿಲುಕಿಕೊಂಡಿದ್ದಾರೆಂದು ಹೇಳಲಾಗುತ್ತಿದೆ. ನೇಪಾಳದ ಒಟ್ಟು 9 ಜಿಲ್ಲೆಗಳನ್ನು ಹೆಚ್ಚು ತೊಂದರೆಗೊಳಗಾದ ಪ್ರದೇಶಗಳೆಂದು ಸರ್ಕಾರ ಘೋಷಿಸಿದ್ದು,ಯುದ್ಧೋಪಾದಿಯಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದ್ದರೂ ಒಂದೇ ಸಮನೆ ಸುರಿಯುತ್ತಿರುವ ಮಳೆಯಿಂದ ಕೊಂಚ ಅಡ್ಡಿಯಾಗಿದೆ.
ರಕ್ಷಣಾ ಕಾರ್ಯ ಸಮರ್ಪಕವಾಗಿಲ್ಲ ಈ ನಿಟ್ಟಿನಲ್ಲಿ ಎಲ್ಲ ರಾಜಕೀಯ ಪಕ್ಷಗಳು ದೇಶದ ಹಿತದೃಷ್ಟಿಯಿಂದ ಈ ರಕ್ಷಣಾ ಕಾರ್ಯದಲ್ಲಿ ಎಲ್ಲಾ ರೀತಿಯ ನೆರವು ನೀಡಬೇಕೆಂದು ಪ್ರಧಾನಿ ಸುಶೀಲ ಕೊಯಿರಾಲಾ ಮನವಿ ಮಾಡಿದ್ದಾರೆ. ಸಂತ್ರಸ್ತರ ನೆರವಿಗಾಗಿ ನೇಪಾಳ ಸರ್ಕಾರ ಎಲ್ಲ ರೀತಿಯ ಅಗತ್ಯಕ್ರಮಗಳನ್ನು ಕೈಗಳ್ಳುತ್ತಿದೆ ಹಾಗೂ ಪುನವರ್ಸತಿ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ ಎಂದು ಪ್ರಧಾನಿ ತಿಳಿಸಿದ್ದಾರೆ. ಭೂಕಂಪದಿಂದ ನಲುಗಿದ ಜನರು ಪ್ಲಾಸ್ಟಿಕ್ ಟೆಂಟ್ಗಳ ಮೊರೆ ಹೋಗಿದ್ದಾರೆ. ಇಲ್ಲಿಯವರೆಗೆ ಸುಮಾರು 5 ಸಾವಿರ ಜನರು ಮೃತಪಟ್ಟಿದ್ದು, 8 ಸಾವಿರಕ್ಕೂ ಹೆಚ್ಚು ಜನ ಗಾಯಗೊಂಡ ಬಗ್ಗೆ ವರದಿಯಾಗಿದೆ.
-ಕೃಪೆ: ಈ ಸಂಜೆ