ಇಸ್ಲಾಮಾಬಾದ್,ಡಿ.23: ಪಾಕಿಸ್ತಾನದ ಪೇಶಾವರದ ಸೈನಿಕ ಶಾಲೆಯಲ್ಲಿ ನಡೆದ ಎಳೆಯ ಮಕ್ಕಳ ಕಗ್ಗೊಲೆಯ ಘಟನೆ ಬಗ್ಗೆ ಗುಪ್ತಚರ ಸಂಸ್ಥೆ ಕಳೆದ ಆಗಸ್ಟ್ ತಿಂಗಳಲ್ಲೇ ಸುಳಿವು ನೀಡಿತ್ತು ಎಂಬ ಅಂಶ ಈಗ ಬೆಳಕಿಗೆ ಬಂದಿದೆ. ಬುಡಕಟ್ಟು ಪ್ರಾಂತ್ಯದ ಬರಾಖ ಝಿಯಾ ತಾಲಿಬಾನ್ ಸಂಘಟನೆಯ ಇಬ್ಬರು ಕಮಾಂಡರ್ಗಳಾದ ಬಿಲಾಲ್ ಮತ್ತು ಒಬೇದುಲ್ಲಾ ಮತ್ತಿತರರು ಸೇನೆಯ ವತಿಯಿಂದ ನಡೆಸಲಾಗುತ್ತಿರುವ ಶಾಲೆಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸಲಾಗಿದೆ ಎಂಬ ಮಾಹಿತಿಯನ್ನು ಸರ್ಕಾರಕ್ಕೆ ನೀಡಿದೆ ಎಂಬುದು ಈಗಷ್ಟೇ ಬಯಲಾಗಿದೆ.
ಈ ಉಗ್ರರು ತಮ್ಮ ಸಂಚಿನಂತೆಯೇ ಪೇಶಾವರ ಸೈನಿಕ ಶಾಲೆ ಮೇಲೆ ದಾಳಿ ನಡೆಸಿ, ಪಾಕಿಸ್ತಾನ ಇತಿಹಾಸದಲ್ಲೇ ಕಂಡು ಕೇಳರಿಯದಂತಹ ಭೀಕರ ಕೃತ್ಯ ನಡೆಸಿದ್ದಾರೆ. ಸೈನಿಕರು ಹಾಗೂ ಸರ್ಕಾರದ ಮೇಲಿನ ಸೇಡು ತೀರಿಸಿಕೊಳ್ಳಲು ತಾಲಿಬಾನ್ ಪಾತಕಿಗಳು ಕೆಲವು ಮಕ್ಕಳ ಹತ್ಯೆ ಮಾಡುತ್ತಾರೆ ಎಂದು ಹೇಳಲಾಗಿತ್ತು. ಆದರೆ ಈ ಮಾಹಿತಿಯ ನಿರ್ಲಕ್ಷದಿಂದಾಗಿ ಇಂಥ ದುರ್ಘಟನೆ ನಡೆದಿತ್ತು. ಡಿ.16ರಂದು ತೆಹ್ರಿP-ಇ – ತಾಲಿಬಾನ್ ಉಗ್ರರು ಶಾಲೆಗೆ ನುಗ್ಗಿ 132 ಮಕ್ಕಳು ಹಾಗೂ ಇತರ 9 ಮಂದಿಯನ್ನು ಅತ್ಯಂತ ದಾರುಣವಾಗಿ ಹತ್ಯೆ ಮಾಡಿದ್ದರು.