ಅಂತರಾಷ್ಟ್ರೀಯ

ಮಾಲ್ಡೀವ್ಸ್ ನೀರು ಸಂಸ್ಕರಣಾ ಘಟಕದಲ್ಲಿ ಬೆಂಕಿ: ಕುಡಿಯುವ ನೀರಿಗಾಗಿ ಹಾಹಾಕಾರ; ಭಾರತದಿಂದ ನೀರು ಸರಬರಾಜು

Pinterest LinkedIn Tumblr

il76

ಮಾಲೆ: ಮಾಲ್ಡೀವ್ಸ್ ರಾಜಧಾನಿ ಮಾಲೆಯಲ್ಲಿ ನೀರಿಗಾಗಿ ಹಾಹಾಕಾರ ಎದಿದ್ದು, ಭಾರತೀಯ ಸೇನೆಯ ಬೃಹತ್ ವಿಮಾನಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ.

ಮಾಲೆಯಲ್ಲಿರುವ ಬೃಹತ್ ನೀರು ಸಂಸ್ಕರಣಾ ಘಟಕದಲ್ಲಿ ಉಂಟಾಗಿದ್ದ ಬೆಂಕಿ ಅವಘಡದಿಂದಾಗಿ ಕುಡಿಯುವ ನೀರು ಸರಬರಾಜು ಸಂಪೂರ್ಣ ಸ್ಥಗಿತವಾಗಿದೆ. ಹೀಗಾಗಿ ಮಾಲೆಯಲ್ಲಿರುವ ಸುಮಾರು 1 ಲಕ್ಷ ನಿವಾಸಿಗಳು ಕುಡಿಯುವ ನೀರಿಲ್ಲದೇ ಪರದಾಡುತ್ತಿದ್ದಾರೆ. ಈಗಾಗಲೇ ಮಾಲ್ಡೀವ್ಸ್ ಸರ್ಕಾರದ ವಿರುದ್ಧ ಜನತೆ ಭುಗಿಲೆದ್ದಿದ್ದು, ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.

ಇನ್ನು ಗುರುವಾರ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಕೋಪೋದ್ರಿಕ್ತ ಜನತೆ ಮಾಲೆಯಲ್ಲಿರುವ ಪ್ರಮುಖ ರಸ್ತೆಗಳಲ್ಲಿರುವ ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿದ್ದಾರೆ. ಅಲ್ಲದೇ ಅಲ್ಲಲ್ಲಿ ಕಲ್ಲು ತೂರಾಟದಂತಹ ಘಟನೆಗಳು ನಡೆದಿದ್ದು, ರಾಜಧಾನಿ ಮಾಲೆ ಅಕ್ಷರಶಃ ರಣಾಂಗಣವಾಗಿ ಮಾರ್ಪಟ್ಟಿದೆ.

ಇನ್ನು ಮಾಲೆ ಎದ್ದಿರುವ ನೀರಿನ ಹಾಹಾಕಾರಕ್ಕಾಗಿ ಮಾಲ್ಡೀವ್ಸ್ ಸರ್ಕಾರ ವಿಶ್ವ ಸಮುದಾಯದ ಮೊರೆ ಹೋಗಿದ್ದು, ನೆರವು ನೀಡುವಂತೆ ಭಾರತ, ಶ್ರೀಲಂಕಾ, ಅಮೆರಿಕ ಮತ್ತು ಚೀನಾ ದೇಶಗಳಲ್ಲಿ ಮನವಿ ಮಾಡಿದ್ದಾರೆ. ಇದಕ್ಕೆ ಪೂರಕವಾಗಿ ಸ್ಪಂದಿಸಿರುವ ಭಾರತ ಸರ್ಕಾರ, ಭಾರತೀಯ ಸೇನೆಯ ಬಳಿ ಇರುವ ಬೃಹತ್ ವಿಮಾನಗಳಲ್ಲಿ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿದೆ. ಸೇನೆಯ ಬಳಿ ಇರುವ ಸಿ-17 ಮತ್ತು ಐಎಲ್-76 ಸರಣಿಯ ಐದು ಯುದ್ಧ ವಿಮಾನಗಳು ಮಾಲೆಗೆ ಬೃಹತ್ ಪ್ರಮಾಣದಲ್ಲಿ ಕುಡಿಯುವ ನೀರನ್ನು ಹೊತ್ತು ಸಾಗುತ್ತಿದೆ.

ಪ್ರಸ್ತುತ ಅಗ್ನಿ ಅನಾಹುತದಿಂದಾಗಿ ಹಾನಿಗೀಡಾಗಿರುವ ಮಾಲೆ ನೀರು ಸಂಸ್ಕರಾಣ ಘಟಕದಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದ್ದು, ಇನ್ನು ಒಂದು ವಾರಗಳ ಕಾಲ ದುರಸ್ತಿ ನಡೆಯಲಿದೆ ಎಂದು ಹೇಳಲಾಗುತ್ತಿದೆ. ದುರಸ್ತಿ ಕಾರ್ಯದಲ್ಲಿ ಕೆಲ ಭಾರತೀಯ ಅಧಿಕಾರಿಗಳು ಮತ್ತು ನುರಿತ ಎಂಜಿನಿಯರ್ ಕೂಡ ಪಾಲ್ಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಾಲೆಯಲ್ಲಿರುವ ಹೊಟೆಲ್‌ಗಳು, ರೆಸಾರ್ಟ್‌ಗಳು, ಖಾಸಗಿ ಆಸ್ಪತ್ರೆಗಳು ಮತ್ತು ಮಾಲ್‌ಗಳು ತಮ್ಮದೇ ಆದ ಕುಡಿಯುವ ನೀರಿನ ವ್ಯವಸ್ಥೆ ಹೊಂದಿದ್ದು, ಅಲ್ಲಿ ನೆಲೆಸಿರುವ ನಿವಾಸಿಗಳಿಗೆ ಮಾತ್ರ ನೀರು ಸಿಗದೇ ಪರದಾಡುತ್ತಿದ್ದಾರೆ.

Write A Comment