ಇಸ್ಲಾಮಾಬಾದ್: ಭಾರತ ಗಣರಾಜ್ಯೋತ್ಸವದಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಭಾರತಕ್ಕೆ ಆಗಮಿಸಲಿದ್ದು, ಈ ವೇಳೆ ಕಾಶ್ಮೀರ ವಿವಾದದ ಇತ್ಯರ್ಥ ಕುರಿತು ಭಾರತದೊಂದಿಗೆ ಮಾತುಕತೆ ನಡೆಸುವಂತೆ ಪಾಕಿಸ್ತಾನ ಪ್ರಧಾನಿ ನವಾಸ್ ಷರೀಫ್ ಒತ್ತಾಯಿಸಿದ್ದಾರೆ.
ಭಾರತ ಗಣರಾಜ್ಯೋತ್ಸವದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬರಾಕ್ ಒಭಾಮ ಭಾರತಕ್ಕೆ ಆಗಮಿಸಲಿದ್ದಾರೆ. ಈ ಮಧ್ಯೆ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್, ದೂರವಾಣಿ ಮೂಲಕ ಒಬಾಮಾರನ್ನು ಸಂಪರ್ಕಿಸಿದ್ದಾರೆ.
ಈ ವೇಳೆ ಮಾತನಾಡಿದ ನವಾಜ್, ಭಾರತ ಪಾಕಿಸ್ತಾನದ ನಡುವಿನ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚೆ ನಡೆಸುವಂತೆ ಒತ್ತಾಯಿಸಿದ್ದಾರೆ.
ಕಾಶ್ಮೀರ ವಿವಾದ ಇತ್ಯರ್ಥದಿಂದಾಗಿ ದಕ್ಷಿಣ ಏಷ್ಯನ್ ಪ್ರದೇಶದಲ್ಲಿ ಶಾಂತಿ, ಸ್ಥಿರತೆ ಮತ್ತು ಆರ್ಥಿಕ ಸಹಕಾರ ವೃದ್ಧಿಗೆ ಅನುಕೂಲವಾಗಲಿದೆ ಎಂದು ವಿನಂತಿಸಿಕೊಂಡಿದ್ದಾರೆ. ಅಲ್ಲದೆ ಪಾಕಿಸ್ತಾನ ಮತ್ತು ಅಘ್ಘಾನಿಸ್ತಾನ ದೇಶಗಳ ಸಂಬಂಧ ಸುಧಾರಣೆಯ ಕುರಿತು ಚರ್ಚೆ ನಡೆಸಿದ್ದಾರೆ.
ಪ್ರಧಾನಿ ನವಾಜ್ ಷರೀಫ್ ಅವರ ಶಾಂತಿ ಮತ್ತು ಸ್ಥಿರತೆ ನೆಲೆಸಲು ಕೈಗೊಂಡಿರುವ ಪ್ರಯತ್ನಕ್ಕೆ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಮೆಚ್ಚುಗೆ ಸಹಾ ವ್ಯಕ್ತಪಡಿಸಿದ್ದಾರೆ ಎಂದು ಪಾಕಿಸ್ತಾನ ಕಾರ್ಯಾಲಯದ ಮೂಲಗಳು ತಿಳಿಸಿವೆ.
ಈ ಕುರಿತು ನೇರ ಮಾತುಕತೆ ನಡೆಸಲು ಪಾಕಿಸ್ತಾನಿ ಪ್ರಧಾನಿ ನವಾಜ್ ಷರೀಫ್ ಅವರಿಗೆ ಸ್ವತಃ ಬರಾಕ್ ಒಬಾಮ ಕರೆ ನೀಡಿರುವುದಾಗಿ ಶ್ವೇತ ಭವನದ ಮೂಲಗಳು ಖಚಿತಪಡಿಸಿವೆ.
ಪಾಕಿಸ್ತಾನದಲ್ಲಿ ವಾತಾವರಣ ಶಾಂತಸ್ಥಿತಿಗೆ ಮರಳಿದ ಬಳಿಕ ಪಾಕಿಸ್ತಾನಕ್ಕೆ ಒಮ್ಮೆ ಭೇಟಿ ನೀಡುವುದಾಗಿ ಒಬಾಮ ತಿಳಿಸಿದ್ದಾರೆ ಎಂದು ಕಾರ್ಯಾಲಯ ಅಧಿಕಾರಿಗಳು ಸುದ್ದಿಗಾರರಿಗೆ ವಿವರಿಸಿದ್ದಾರೆ.