ನ್ಯೂಯಾರ್ಕ್, ಸೆ.28: ವೀಸಾ ಅಥವಾ ಪಾಸ್ಪೋರ್ಟ್ಗಳ ನವೀಕರಣಕ್ಕಾಗಿ ಅರ್ಜಿ ಸಲ್ಲಿಸುವಾಗ ಅದರಲ್ಲೂ ವಿಶೇಷವಾಗಿ 1980ರ ದಶಕದಲ್ಲಿ ಅಮೆರಿಕದಲ್ಲಿ ರಾಜಕೀಯ ಅಶ್ರಯಕ್ಕಾಗಿ ಅರ್ಜಿ ಸಲ್ಲಿಸಿದವರಿಗೆ ಎದುರಾಗುವ ಅಡೆತಡೆಗಳನ್ನು ನಿವಾರಿಸುವಂತೆ ಸಿಖ್-ಅಮೆರಿಕನ್ನರ ನಿಯೋಗವೊಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಆಗ್ರಹಿಸಿದೆ.
ಭಾರತೀಯ ರಾಯಭಾರಿ ಕಚೇರಿಯು ಅನಿವಾಸಿ ಸಿಖ್ ಸಮುದಾಯಕ್ಕೆ ವೀಸಾಗಳನ್ನು ನೀಡಲು ನಿರಾಕರಿಸುತ್ತಿರುವುದರಿಂದ ಹಾಗೂ ಅವರ ಪಾಸ್ಪೋರ್ಟ್ಗಳನ್ನು ನವೀಕರಣಗೊಳಿಸದಿರುವುದರಿಂದಾಗಿ ಅವರಿಗೆ ಭಾರತದಲ್ಲಿರುವ ತಮ್ಮ ಕುಟುಂಬಿಕರನ್ನು ಭೇಟಿಯಾಗಲು ಹಾಗೂ ಭಾರತದಲ್ಲಿ ತಮ್ಮ ಹೂಡಿಕೆಯ ಬಗ್ಗೆ ಮುತುವರ್ಜಿ ವಹಿಸಲು ಸಾಧ್ಯವಾಗುತ್ತಿಲ್ಲವೆಂದು ನಿಯೋಗವು ಪ್ರಧಾನಿಗೆ ಸಲ್ಲಿಸಿದ ಮನವಿಪತ್ರದಲ್ಲಿ ದೂರಿದೆ.
ಪಂಜಾಬ್ ಉದ್ವಿಗ್ನ ಪರಿಸ್ಥಿತಿಯನ್ನೆದುರಿಸುತ್ತಿದ್ದ ವರ್ಷಗಳಲ್ಲಿ ಅಮೆರಿಕದಲ್ಲಿ ರಾಜಕೀಯ ಆಶ್ರಯಕ್ಕಾಗಿ ಅರ್ಜಿ ಸಲ್ಲಿಸಿದ್ದರೆಂಬ ಕಾರಣಕ್ಕಾಗಿ ನೂರಾರು ಅನಿವಾಸಿ ಸಿಖ್ಖರಿಗೆ ಭಾರತ ಸಂದರ್ಶನಕ್ಕೆ ಅನುಮತಿ ನಿರಾಕರಿಸಲಾಗುತ್ತಿದೆಯೆಂದು ಸಿಖ್ಖ್-ಅಮೆರಿಕನ್ ಸಮುದಾಯದ 29 ಮಂದಿ ಸದಸ್ಯರ ನಿಯೋಗವು ಶನಿವಾರ ಪ್ರಧಾನಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದೆ.
ಸಿಖ್ ಸಮುದಾಯವು ಎದುರಿಸುತ್ತಿರುವ ಇತರ ಸಮಸ್ಯೆಗಳ ಬಗೆಗೂ ನಿಯೋಗವು ಪ್ರಧಾನಿ ಜೊತೆ ಸುದೀರ್ಘವಾಗಿ ಚರ್ಚಿಸಿತೆಂದು ಮೂಲಗಳು ತಿಳಿಸಿವೆ.
ರ ಸಿಖ್ ಗಲಭೆ ಹಾಗೂ ಗುಜರಾತ್ನಲ್ಲಿ ಸಿಖ್ಖ್ ರೈತರ ಸಮಸ್ಯೆಗಳ ಬಗ್ಗೆಯೂ ನಿಯೋಗವು ಪ್ರಧಾನಿಯ ಗಮನವನ್ನು ಸೆಳೆಯಿತು. ಪಂಜಾಬ್ನ ಯುವಜನರು ಮಾದಕದ್ರವ್ಯ ಚಟಕ್ಕೆ ದಾಸರಾಗುತ್ತಿರುವ ಬಗ್ಗೆಯೂ ನಿಯೋಗವು ಕಳವಳ ವ್ಯಕ್ತಪಡಿಸಿದೆ. ನಿಯೋಗವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಸಿಖ್ಸಮುದಾಯವು ಭಾರತಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು. ಕಳೆದ ವಾರ ಕೇಂದ್ರ ಸರಕಾರ ಆರಂಭಿಸಿದ ‘ಮೇಕ್ ಇನ್ ಇಂಡಿಯಾ’ದ ಬಗ್ಗೆಯೂ ಅವರು ಮಾಹಿತಿ ನೀಡಿದರು.