ರಾಷ್ಟ್ರೀಯ

ಕರ್ನಾಟಕ ಸೇರಿ 6 ರಾಜ್ಯಗಳ CMಗಳೊಂದಿಗೆ ಮೋದಿ ಸಂವಾದ; ಅನ್​ಲಾಕ್ ಬಳಿಕ ಜನರಲ್ಲಿ ಬೇಜವಾಬ್ದಾರಿತನ ಹೆಚ್ಚಾಗಿರುವ ಕುರಿತು ಪ್ರಧಾನಿ ಆತಂಕ

Pinterest LinkedIn Tumblr

ನವದೆಹಲಿ: ಕರ್ನಾಟಕ ಸೇರಿ 6 ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಡೆಸಿದ ವಿಡಿಯೋ ಸಂವಾದ ಮುಕ್ತಾಯವಾಗಿದ್ದು, ಸಭೆಯಲ್ಲಿ ಅನ್​ಲಾಕ್ ಬಳಿಕ ಜನರಲ್ಲಿ ಬೇಜವಾಬ್ದಾರಿತನ ಹೆಚ್ಚಾಗಿರುವ ಕುರಿತು ಮೋದಿಯವರು ಆತಂಕ ವ್ಯಕ್ತಪಡಿಸಿದ್ದಾರೆಂದು ತಿಳಿದುಬಂದಿದೆ.

ವಿಡಿಯೋ ಸಂವಾದದಲ್ಲಿ ಮೋದಿಯವರು 6 ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಕೊರೊನಾ ಲಸಿಕೆ, ಮೂರನೇ ಅಲೆ ಮುನ್ನೆಚ್ಚರಿಕೆ ಬಗ್ಗೆ ಚರ್ಚೆ ನಡೆಸಿದ್ದಾರೆ.

ಅನೇಕ ರಾಜ್ಯಗಳಲ್ಲಿ ಮಹಾಮಾರಿ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಂಭವನೀಯ ಮೂರನೇ ಅಲೆ ತಡೆಯಲು ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಮೋದಿಯವರು ಸೂಚನೆ ನೀಡಿದ್ದಾರೆ.

ಸಂಭವನೀಯ ಮೂರನೇ ಅಲೆಯ ಬಗ್ಗೆ ಮಾತನಾಡುವ ಹಂತದಲ್ಲಿ ನಾವಿದ್ದೇವೆ. ಕಳೆದ ಕೆಲವು ದಿನಗಳಿಂದ ಈ ಆರು ರಾಜ್ಯಗಳಲ್ಲಿ ಶೇ.80ರಷ್ಟು ಹೊಸ ಕೊರೋನಾ ಪ್ರಕರಣಗಳು ವರದಿಯಾಗಿವೆ. ಟೆಸ್ಟ್-ಟ್ರ್ಯಾಕ್-ಟ್ರೀಟ್-ವ್ಯಾಕ್ಸಿನೇಟ್ ಅನ್ನು ವೇಗಗೊಳಿಸುವ ಮೂಲಕ ಕೊರೋನಾವನ್ನು ತಹಬದಿಗೆ ತನ್ನಿ, ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ರೂ.23 ಸಾವಿರ ಕೋಟಿ ತುರ್ತು ಪರಿಹಾರವನ್ನು ರಾಜ್ಯಗಳು ಕಡ್ಡಾಯವಾಗಿ ಉಪಯೋಗಿಸಲೇಬೇಕು. ಅದರಿಂದ ಆರೋಗ್ಯ ಮೂಲಸೌಕರ್ಯಗಳ ಕೊರತೆ ನೀಗಿಸಿ ಎಂದು ಸೂಚನೆ ನೀಡಿದ್ದಾರೆ.

ಇದೇ ವೇಳೆ ನಗರ ಮತ್ತು ಪಟ್ಟಣಗಳಲ್ಲಿ ಓಡಾಡುವವರು ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇರುವುದು ಕಂಡು ಬರುತ್ತಿದ್ದು, ಈ ಕುರಿತು ಮೋದಿಯವರು ಕಳವಳ ವ್ಯಕ್ತಪಡಿಸಿದ್ದಾರೆ. ಕೋವಿಡ್ ಇನ್ನೂ ಮುಗಿದಿಲ್ಲ ಎಂಬುದನ್ನು ಜನರಿಗೆ ಅಧಿಕಾರಿಗಳು ಮನವರಿಕೆ ಮಾಡಬೇಕೆಂದು ತಿಳಿಸಿದ್ದಾರೆಂದು ತಿಳಿದುಬಂದಿದೆ.

Comments are closed.