ರಾಷ್ಟ್ರೀಯ

ಮೂಢನಂಬಿಕೆಗೆ ತನ್ನಿಬ್ಬರು ಮಕ್ಕಳನ್ನು ದೇವರಿಗೆ ಬಲಿಕೊಟ್ಟ ದಂಪತಿ; ಮತ್ತೆ ಬದುಕಿ ಬರುತ್ತಾರೆ ಎಂಬ ಮೂಢನಂಬಿಕೆಯೇ ಕಾರಣ

Pinterest LinkedIn Tumblr

ಆಂಧ್ರಪ್ರದೇಶ: ಜನ ಎಷ್ಟೇ ಸುಕ್ಷಿತರಾಗಿದ್ದರು ಮೂಢನಂಬಿಕೆ ಎಂಬ ಪಿಡುಗಿನಿಂದ ಇನ್ನೂ ಹೊರಬರುತ್ತಿಲ್ಲ. ಮೂಢನಂಬಿಕೆ ಬಲಿಯಾಗಿ ಮಾಡಬಾರದ ಕೃತ್ಯ ಎಸಗುತ್ತಿದ್ದು, ಇಂಥದೇ ಒಂದು ಭಯಾನಕ, ಘನಘೋರ ಘಟನೆ ಆಂಧ್ರಪ್ರದೇಶದಲ್ಲೊಂದು ನಡೆದುಹೋಗಿದೆ.

ಜನವರಿ 24ರಂದು ರಾತ್ರಿ ಹೆತ್ತ ತಂದೆ ತಾಯಿಯ ರಕ್ಕಸ ಏಟಿಗೆ ಹೆಣ್ಣು ಮಕ್ಕಳಿಬ್ಬರು ಬರ್ಬರವಾಗಿ ಹತ್ಯೆಯಾಗಿದ್ರು. ತಾವೇ ಸಾಕಿ, ಬೆಳೆಸಿದ ಇಬ್ಬರು ಹೆಣ್ಣು ಮಕ್ಕಳನ್ನ ಅಮಾನುಷವಾಗಿ ತಂದೆ ತಾಯಿಯೇ ಕೊಂದು ಹಾಕುವ ಮೂಲಕ ಮೂಢನಂಬಿಕೆಯ ಜಾಲಕ್ಕೆ ಬಲಿಯಾಗಿದ್ದಾರೆ.

ಮದನಪಲ್ಲಿಯ ಪ್ರತಿಷ್ಠಿತ ಶಿಕ್ಷಣೋದ್ಯಮಿಯಾಗಿರೋ ದಂಪತಿಯೇ ಧಾರ್ಮಿಕ ಅಂಧತ್ವದಲ್ಲಿ ಮುಳುಗಿ ತಮ್ಮ 22 ವರ್ಷದ ಮಗಳು ಹಾಗೂ 27 ವರ್ಷದ ಮತ್ತೊಬ್ಬ ಮಗಳನ್ನ ಡಂಬಲ್ಸ್‌ನಿಂದ ಹೊಡೆದು ರಕ್ತದ ಕೋಡಿಯನ್ನೇ ಹರಿಸಿದ್ದಾರೆ. ಆಧ್ಯಾತ್ಮಿಕ ಗುರು ಮೆಹರ್‌ ಬಾಬಾ ಅನುಯಾಯಿಗಳಾಗಿದ್ದ ಪುರುಷೋತ್ತಮ್‌ ನಾಯ್ಡು ಹಾಗೂ ವಿ. ಪದ್ಮಜಾ ತಮ್ಮ ಮಕ್ಕಳನ್ನೇ ಬಲಿ ಕೊಟ್ಟಿದ್ದಾರೆ.

ಜನವರಿ 24 ಅಂದ್ರೆ ನಿನ್ನೆ ಕಲಿಯುಗದ ಅಂತ್ಯ ಅಂತ ಪರಿಬಾವಿಸಿಕೊಂಡು, ನಮ್ಮ ಮಕ್ಕಳನ್ನ ಕೊಂದ್ರೆ ಮತ್ತೆ ಮರುದಿನವೇ ಬದುಕಿ ಬರ್ತಾರೆ ಅನ್ನೋ ಅಂಧ ನಂಬಿಕೆಯಿಂದ ಈ ಹೀನ ಕೃತ್ಯ ಎಸಗಿದ್ದಾರಂತೆ. ಮದನಪಲ್ಲಿಯಲ್ಲಿ ಮಾಸ್ಟರ್ ಮೈಂಡ್ಸ್‌ ಐಐಟಿ ಟ್ಯಾಲೆಂಟ್ಸ್ ಶಾಲೆ ನಡೆಸ್ತಿರೋ ಪುರುಷೋತ್ತಮ್‌ ನಾಯ್ಡು ದಂಪತಿ ಹುಚ್ಚಾಟಕ್ಕೆ ಇಡೀ ಮನುಕುಲವೇ ಬೆಚ್ಚಿಬಿದ್ದಿದೆ. ದಂಪತಿಯ ಹಿರಿಯ ಪುತ್ರಿ 27 ವರ್ಷದ ಅಲೆಖ್ಯಾ ಎಂಬಿಎ ಬಳಿಕ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಉದ್ಯೋಗದಲ್ಲಿದ್ದಳು.

ಮತ್ತೊಬ್ಬ ಮಗಳು 22 ವರ್ಷದ ದಿವ್ಯಾ ಎ.ಆರ್ ರೆಹಮಾನ್‌ ಇನ್ಸ್‌ಟಿಟ್ಯೂಟ್‌ನಲ್ಲಿ ಮ್ಯೂಸಿಕ್‌ ಕೋರ್ಸ್‌ ಮಾಡ್ತಿದ್ದಳು. ನಿನ್ನೆ ರಾತ್ರಿ 8 ಗಂಟೆ ಸಮಯದಲ್ಲಿ ಮಕ್ಕಳನ್ನ ಕೊಂದ ದಂಪತಿಯ ವಿಕೃತಿ ಗೊತ್ತಾಗ್ತಿದ್ದಂತೆ ಮದನಪಲ್ಲಿ ಪೊಲೀಸರು ದೌಡಾಯಿಸಿದ್ರು. ಶ್ರೀ ಶಿರಡಿ ಸಾಯಿ ಬಾಬಾ ಅಪಾರ್ಟ್‌ಮೆಂಟ್ನಲ್ಲಿ ಭಾರಿ ಹೈಡ್ರಾಮವೇ ನಡೆದುಹೋಯ್ತು. ದಂಪತಿ ಯಾರನ್ನೂ ಮನೆಯೊಳಗೆ ಬಿಟ್ಟುಕೊಂಡಿಲ್ಲ. ಜನವರಿ 25 ಅಂದ್ರೆ ಇವತ್ತು ನಮ್ಮ ಮಕ್ಕಳಿಗೆ ಜೀವ ಬರುತ್ತೆ ಅಂತಲೇ ವಾದಿಸ್ತಿದ್ರು.

ಅಷ್ಟಕ್ಕೂ ಅವತಾರ ಪುರುಷ ಹಾಗೂ ಆಧ್ಯಾತ್ಮ ಗುರು ಖ್ಯಾತಿಯ ಮೆಹರ್‌ ಬಾಬಾ ಹಾಗೂ ಶಿರಡಿ ಸಾಯಿ ಬಾಬಾ ಆರಾಧಕರಾಗಿರೋ ಪುರುಷೋತ್ತಮ್‌ ನಾಯ್ಡು ವಿಕೃತಿ ಕಂಡು ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ದೇವರ ಕೋಣೆಯಲ್ಲೇ ಹೆಣ್ಣು ಮಕ್ಕಳಿಬ್ಬರನ್ನೂ ವಿವಸ್ತ್ರಗೊಳಿಸಿ ಪೂಜೆ ಮಾಡಿ ಆನಂತರ ಡಂಬಲ್ಸ್‌ ಮೂಲಕ ಹಲ್ಲೆ ಮಾಡಿ ಸಾಯಿಸಿದ್ದಾರೆ ಎನ್ನಲಾಗಿದೆ.

ಒಟ್ನಲ್ಲಿ ತಮ್ಮಿಬ್ಬರು ಹೆಣ್ಣು ಮಕ್ಕಳನ್ನ ದೇವರ ಹೆಸರಿನಲ್ಲಿ ಹತ್ಯೆಗೈದಿರೋದು ಮಾತ್ರ ನಿಜಕ್ಕೂ ದುರಂತ. ಈ ಅಮಾನುಷ ಪ್ರಕರಣ ಹೇಗಾಯ್ತು.. ಆರೋಪಿ ದಂಪತಿ ಯಾಕೆ ಇಂಥಾ ಮನಸ್ಥಿತಿಗೆ ತಲುಪಿದ್ರು ಅನ್ನೋದು ಮಾತ್ರ ಪೊಲೀಸರ ತನಿಖೆಯಿಂದ ಬಯಲಾಗ್ಬೇಕಿದೆ. ಅದೇನೆ ಇದ್ರೂ ತಾವು ಹೆತ್ತು ಹೊತ್ತು ಸಾಕಿ ಸಲುಹಿದ ಇಬ್ಬರು ಮುದ್ದಾದ ಹೆಣ್ಣು ಮಕ್ಕಳನ್ನ ಹೀಗೆ ಅಮಾನುಷವಾಗಿ ಕೊಂದು ಹಾಕಿರೋದು ನೋಡಿ ಎಲ್ಲರೂ ಬೆಚ್ಚಿಬಿದ್ದಿದ್ದಾರೆ.

Comments are closed.