ರಾಷ್ಟ್ರೀಯ

ಅಸ್ಸಾಂನ 1 ಲಕ್ಷ ಮಂದಿಗೆ ಭೂ ಮಾಲೀಕತ್ವದ ಪಟ್ಟಾವನ್ನು ವಿತರಿಸಿದ ಪ್ರಧಾನಿ ಮೋದಿ

Pinterest LinkedIn Tumblr

ಶಿವಸಾಗರ್: ಅಸ್ಸಾಂನ ಲಕ್ಷಾಂತರ ಜನರಿಗೆ 1947ರಿಂದ ಭೂಮಿಯ ಪ್ರಮಾಣಪತ್ರ ದೊರಕಿರಲಿಲ್ಲ. ಇದೀಗ ನಮ್ಮ ನೇತೃತ್ವದ ಸರಕಾರ ಇಲ್ಲಿನ ಜನರ ಭರವಸೆಯನ್ನು ಈಡೇರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಭೂಮಿ ಹಂಚಿಕೆ ಪ್ರಮಾಣ ಪತ್ರ ಅಭಿಯಾನದಡಿ ಅಸ್ಸಾಂನ ಶಿವಸಾಗರದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ, ಫಲಾನುಭವಿಗಳಿಗೆ ಭೂಮಿ ಹಂಚಿಕೆ ಪ್ರಮಾಣ ಪತ್ರ (ಪಟ್ಟಾ) ವಿತರಿಸಿದರು.

ಆದಿವಾಸಿಗಳು ಸೇರಿ ಒಟ್ಟು ಅಸ್ಸಾಂನ ಸುಮಾರು 1 ಲಕ್ಷ ಮಂದಿಗೆ ಇಂದು ಭೂ ಮಾಲೀಕತ್ವದ ಪಟ್ಟಾವನ್ನು ವಿತರಿಸಲಾಯಿತು. ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಸ್ವಾತಂತ್ರ್ಯ ನಂತರವೂ ಆಸ್ಸಾಂನಲ್ಲಿ ಲಕ್ಷಾಂತರ ಆದಿವಾಸಿಗಳು, ಸ್ಥಳೀಯ ಆಸ್ಸಾಂ ಕುಟುಂಬಗಳು ಭೂ ಮಾಲೀಕತ್ವದ ಹಕ್ಕಿನಿಂದ ವಂಚಿತರಾಗಿದ್ದಾರೆ. ಅವರೆಲ್ಲರಿಗೂ ಭೂ ಮಾಲೀಕತ್ವ ಹಕ್ಕು ನೀಡುವ ಸಲುವಾಗಿ, ಇಲ್ಲಿನ ರಾಜ್ಯ ಸರ್ಕಾರದ ಜತೆ ನಾವು ವಿಶೇಷ ಕಾರ್ಯಕ್ರಮ ರೂಪಿಸಿದ್ದೇವೆ. ಅದರಡಿ ಫಲಾನುಭವಿಗಳಿಗೆ ಭೂ ಹಂಚಿಕೆ ಪ್ರಮಾಣ ಪತ್ರ ವಿತರಿಸಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು.

ಅಸ್ಸಾಂನಲ್ಲಿ 2016ರಲ್ಲಿ ಸುಮಾರು 5.75 ಲಕ್ಷ ಭೂ ಮಾಲೀಕತ್ವ ಹೊಂದಿಲ್ಲದ ಕುಟುಂಬಗಳು ಇದ್ದವು. 2016ರಿಂದ ಇಲ್ಲಿಯವರೆಗೆ ಒಟ್ಟು 2.28 ಲಕ್ಷ ಕುಟುಂಬಗಳಿಗೆ ಭೂ ಪ್ರಮಾಣ ಪತ್ರ ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು. ರಾಜ್ಯ ಹಾಗೂ ಕೇಂದ್ರ ಸರಕಾರ ಡಬಲ್‌ ಇಂಜಿನ್‌ನಂತೆ ಕೆಲಸ ನಿರ್ವಹಿಸುತ್ತಿದ್ದು, ಅಸ್ಸಾಂನ್ನು ಅಭಿವೃದ್ದಿ ಮಾಡುತ್ತೇವೆ. ಅಸ್ಸಾಂ ಜನರ ಆತ್ಮ ವಿಶ್ವಾಸದ ಮೂಲಕ ಆತ್ಮನಿರ್ಭರ್‌ ಅಸ್ಸಾಂ ಮಾಡುತ್ತೇವೆ ಎಂದು ತಿಳಿಸಿದರು.

ಅಲ್ಲದೇ ಅಸ್ಸಾಂನ ಶೇ. 40ಷ್ಟು ಮಂದಿ ಪ್ರಧಾನಮಂತ್ರಿ ಆಯಷ್ಮಾನ್‌ ಯೋಜನೆಯ ಸದುಪಯೋಗ ಪಡೆಯುತ್ತಿದ್ದಾರೆ ಎಂದು ತಿಳಿಸಿದರು. ಅಸ್ಸಾಂ ಜನರ ಭಾಷೆ, ಇಲ್ಲಿನ ಸಂಸ್ಕೃತಿ ಉಳಿಸಲು ಹಾಗೂ ಅಭಿವೃದ್ದಿಪಡಿಸಲು ನಮ್ಮ ಸರಕಾರ ಯಾವಾಗಲೂ ಬದ್ಧ ಎಂದು ಇದೆ ವೇಳೆ ಪ್ರಧಾನಿ ಮೋದಿ ಹೇಳಿದರು.

Comments are closed.