ವಿಶಾಖಪಟ್ಟಣಂ: ಮನೆಯವರು ಮದುವೆಗೆ ನಿರಾಕರಿಸಿದ್ದಕ್ಕೆ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರ ಪ್ರದೇಶದ ವಿಶಾಖಪಟ್ಟಣಂನ ಗಜುವಾಕಾ ಪೊಲೀಸ್ ಠಾಣಾ ವ್ಯಾಪ್ತಿಯ ಸುಂದರಯ್ಯ ಕಾಲನಿಯಲ್ಲಿ ನಡೆದಿದೆ.
ಮೃತರನ್ನು ಬಿ. ಅವಿನಾಶ್ (33) ಮತ್ತು ಎಂ. ನಾಗಮಣಿ ಎಂದು ಗುರುತಿಸಲಾಗಿದೆ. ನಾಗಮಣಿ ವಿಧವೆಯಾಗಿದ್ದು, ಅಂಡಮಾನ್ನಲ್ಲಿ ನೆಲೆಸಿದ್ದ ಆಕೆಯ ಪತಿ ಇತ್ತೀಚೆಗಷ್ಟೇ ಸಾವಿಗೀಡಾಗಿದ್ದಾರೆ. ಗುರುವಾರವಷ್ಟೇ ಇಬ್ಬರು ರಕ್ಷಣೆ ಕೋರಿ ಕುಟುಂಬದ ವಿರುದ್ಧ ಪರವಾಡ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಬಳಿಕ ಪೊಲೀಸರು ಇಬ್ಬರ ಪಾಲಕರನ್ನು ಕರೆದು ಸಮಾಲೋಚನೆ ನಡೆಸಿ ವಾಪಸ್ಸು ಕಳುಹಿಸಿದ್ದರು.
ಗಜುವಾಕಾದ ಬಾಡಿಗೆ ಮನೆಯಲ್ಲಿ ವಾಸವಿದ್ದ ಅವಿನಾಶ್ ಮತ್ತು ನಾಗಮಣಿ ಶುಕ್ರವಾರ ದೇವಸ್ಥಾನವೊಂದರಲ್ಲಿ ಮದುವೆಯಾಗಲು ಪ್ಲಾನ್ ಮಾಡಿದ್ದರು. ನೋಂದಣಿ ವಿವಾಹವಾಗಲು ಸಹ ತಯಾರಿ ನಡೆದಿತ್ತು. ಆದಾಗ್ಯು ಮದುವೆಯಾಗಿ ಬಾಳಬೇಕಿದ್ದ ಇಬ್ಬರು ಮದುವೆ ಆಗಬೇಕಿದ್ದ ದಿನವೇ ಆತ್ಮಹತ್ಯೆ ಮಾಡಿಕೊಂಡು ಪ್ರಾಣಬಿಟ್ಟಿದ್ದಾರೆ. ಮನೆಯಲ್ಲಿ ಇಬ್ಬರು ಸತ್ತು ಬಿದ್ದಿರುವುದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ.
ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಗಜುವಾಕ ಪೊಲೀಸರು ಆತ್ಮಹತ್ಯೆಗೆ ನಿಖರವಾದ ಕಾರಣ ಏನೆಂಬುದನ್ನು ತಿಳಿದುಕೊಳ್ಳಲು ತನಿಖೆ ಆರಂಭಿಸಿದ್ದಾರೆ. ಯಾವುದೇ ಡೆತ್ನೋಟ್ ಪತ್ತೆಯಾಗಿಲ್ಲ. ಆದರೆ, ಮೊಬೈಲ್ನಲ್ಲಿರುವ ಆಧಾರದ ಮೇಲೆ ಮದುವೆಗೆ ಕುಟುಂಬ ನಿರಾಕರಿಸಿದ್ದಕ್ಕೆ ಹೀಗೆ ಮಾಡಿಕೊಂಡಿದ್ದಾರೆಂದು ಮೇಲ್ನೋಟಕ್ಕೆ ತಿಳಿದುಬಂದಿದೆ.
ಸ್ಥಳೀಯರ ಮಾತು ಕೂಡ ಇದೇ ಹಾಗಿದೆ. ಇಬ್ಬರದ್ದು ಬೇರೆ ಬೇರೆ ಜಾತಿಯಾಗಿದ್ದರಿಂದ ಮದುವೆಗೆ ಎರಡು ಕುಟುಂಬದ ವಿರೋಧವಿತ್ತಂತೆ. ಅಲ್ಲದೆ, ನಾಗಮಣಿ ವಿಧವೆ ಎಂಬುದು ಸಹ ಅವಿನಾಶ್ ಕುಟುಂಬದ ವಿರೋಧಕ್ಕೆ ಮತ್ತೊಂದು ಕಾರಣವಾಗಿತ್ತು. ಹೀಗಾಗಿ ಯಾರೂ ಮದುವೆ ಒಪ್ಪದಿದ್ದರಿಂದ ಇಬ್ಬರು ಸಾವಿಗೆ ಶರಣಾಗಿದ್ದಾರೆ.
Comments are closed.