”ಈ ನಿರ್ಣಾಯಕ ಅವಧಿಯಲ್ಲಿ ಯಾವುದೇ ಪ್ರಚಾರ ಬಯಸದೆ ಜನರಿಗೆ ಸಹಾಯ ಮಾಡುವ ಸಂಸ್ಥೆಗಳೂ ಇವೆ ಎಂಬುದನ್ನು ಪತಂಜಲಿ ಅರಿತುಕೊಳ್ಳಬೇಕು,” ಎಂದು ಚಾಟಿ ಬೀಸಿರುವ ನ್ಯಾಯಾಲಯ, ಜನರನ್ನು ದಿಕ್ಕು ತಪ್ಪಿಸಿ ಲಾಭ ಗಳಿಸಲು ಯತ್ನಿಸಿದ್ದಕ್ಕಾಗಿ 10 ಲಕ್ಷ ರೂಪಾಯಿ ದಂಡವನ್ನೂ ವಿಧಿಸಿದೆ.
ಹೊಸದಿಲ್ಲಿ: ಕೊರೊನಾವನ್ನು ಸಂಪೂರ್ಣ ಗುಣಪಡಿಸುವ ಔಷಧ ತಮ್ಮ ಬಳಿ ಇದೆ ಎಂದು ಹೇಳಿಕೊಳ್ಳುವ ಮೂಲಕ ಪತಂಜಲಿ ಸಂಸ್ಥೆ ಜನರ ಭಯವನ್ನೇ ಬಂಡವಾಳಗಿಸಿಕೊಂಡಿದೆ ಎಂದು ಮದ್ರಾಸ್ ಹೈಕೋರ್ಟ್ ಗುರುವಾರ ಅಸಮಾಧಾನ ವ್ಯಕ್ತಪಡಿಸಿದೆ.
‘ಕೊರೊನಿಲ್’ ಪದವನ್ನು ಟ್ರೇಡ್ ಮಾರ್ಕ್ ಆಗಿ ಬಳಸದಂತೆ ಹೈಕೋರ್ಟ್ ತಡೆ ನೀಡಿದ್ದು, ಪತಂಜಲಿ ಸಂಸ್ಥೆಗೆ ಭಾರಿ ಹಿನ್ನಡೆಯಾಗಿದೆ. ‘ಕೊರೊನಿಲ್’ ಔಷಧ ಕೋವಿಡ್ ಅನ್ನು ಸಂಪೂರ್ಣ ಗುಣಪಡಿಸುತ್ತದೆ ಎಂಬ ಬಗ್ಗೆ ಪುರಾವೆಗಳಿಲ್ಲ. ಅದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆಯೇ ಹೊರತು ವೈರಸ್ ಅನ್ನು ನಾಶಪಡಿಸದು. ಹೀಗಿದ್ದರೂ ಈ ಹೆಸರು ಬಳಸಿಕೊಂಡು ಜನರ ದಿಕ್ಕು ತಪ್ಪಿಸಲಾಗುತ್ತಿದೆ. ಕೊರೊನಿಲ್ ಟ್ರೇಡ್ ಮಾರ್ಕ್ ಬಳಕೆಗೆ ಕೋರ್ಟ್ ನಿರ್ಬಂಧ ಹೇರುತ್ತದೆ ಎಂದು ನ್ಯಾ.ಕಾರ್ತಿಕೇಯನ್ ಅವರಿದ್ದ ಪೀಠ ಹೇಳಿದೆ.
ಮತ್ತು ಜನರನ್ನು ದಿಕ್ಕು ತಪ್ಪಿಸಿ ಲಾಭ ಗಳಿಸಲು ಯತ್ನಿಸಿದ್ದಕ್ಕಾಗಿ 10 ಲಕ್ಷ ರೂಪಾಯಿ ದಂಡವನ್ನೂ ಹೈಕೋರ್ಟ್ ವಿಧಿಸಿದೆ. ಇದೇ ವೇಳೆ ಕೋರೋನಿಲ್ ಪದ ಬಳಕೆಗೆ ವಿಧಿಸಲಾಗಿರುವ ನಿರ್ಬಂಧಕ್ಕೆ ತಡೆ ನೀಡಲೂ ಉಚ್ಚ ನ್ಯಾಯಾಲಯ ನಿರಾಕರಿಸಿದೆ.
ಅಚ್ಚರಿಯ ಸಂಗತಿ ಎಂದರೆ ಇಂಥಹದ್ದೊಂದು ದಂಡ ಮತ್ತು ಕೊರೋನಿಲ್ ಪದ ನಿಷೇಧಕ್ಕೆ ಕಾರಣವಾಗಿದ್ದು, ಚೆನ್ನೈ ಮೂಲದ ಅರುದ್ರಾ ಇಂಜಿನಿಯರಿಂಗ್ ಪ್ರೈ. ಲಿ. ಎಂಬ ಕೆಮಿಕಲ್ ಕಂಪನಿ. ಈ ಕಂಪನಿ ಕಳೆದ ಮೂರು ದಶಕಗಳಿಂದ ಕೊರೊನಿಲ್- 213ಎಸ್ಪಿಎಲ್ ಮತ್ತು ಕೊರೊನಿಲ್-92ಬಿ ಎಂಬ ಕೈಗಾರಿಕೆಗಳಲ್ಲಿ ಶುಚಿಗೊಳಿಸಲು ಬಳಸುವ ರಾಸಾಯನಿಕಗಳನ್ನು ಮಾರಾಟ ಮಾಡುತ್ತಿದೆ. ಇದೇ ಕಾರಣಕ್ಕೆ ಸಂಸ್ಥೆ ಕೊರೋನಿಲ್ ಪದಕ್ಕೆ ಆಕ್ಷೇಪ ಎತ್ತಿತ್ತು.
“ಟ್ರೇಡ್ಮಾರ್ಕ್ ನೋಂದಾವಣಿಯಲ್ಲಿ ಕನಿಷ್ಠ ಪರಿಶೀಲನೆ ನಡೆಸಿದ್ದರೂ ಕೊರೊನಿಲ್ ನೋಂದಾಯಿತ ಟ್ರೇಡ್ಮಾರ್ಕ್ ಎಂಬುದು ತಿಳಿದು ಬರುತ್ತಿತ್ತು. ಒಂದೊಮ್ಮೆ ಅವರು ಹಾಗೆ ಮಾಡಿಯೂ ಧೈರ್ಯದಿಂದ ಈ ಹೆಸರನ್ನು ಬಳಸಿದ್ದರೆ, ಅವರು ಯಾವುದೇ ರಿಯಾಯಿತಿಗೆ ಅರ್ಹರಲ್ಲ,” ಎಂದು ನ್ಯಾಯಮೂರ್ತಿಗಳು ತಮ್ಮ 104 ಪುಟಗಳ ಆದೇಶದಲ್ಲಿ ತಿಳಿಸಿದ್ದಾರೆ.
“ಈ ನಿರ್ಣಾಯಕ ಅವಧಿಯಲ್ಲಿ ಯಾವುದೇ ಪ್ರಚಾರ ಬಯಸದೆ ಜನರಿಗೆ ಸಹಾಯ ಮಾಡುವ ಸಂಸ್ಥೆಗಳೂ ಇವೆ ಎಂಬುದನ್ನು ಅವರು ಅರಿತುಕೊಳ್ಳಬೇಕು,” ಎಂದು ಚಾಟಿ ಬೀಸಿರುವ ನ್ಯಾಯಾಲಯ, ಅಡ್ಯಾರ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ಹಾಗೂ ಸರಕಾರಿ ಯೋಗ ಮತ್ತು ನ್ಯಾಚುರೋಪತಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ತಲಾ 5 ಲಕ್ಷ ರೂಪಾಯಿ ದಂಡ ಪಾವತಿಸಲು ಆದೇಶಿಸಿದೆ.
“ಈ ಎರಡೂ ಸಂಸ್ಥೆಗಳು ಕೇವಲ ಸೇವೆಯನ್ನು ಉದ್ದೇಶವಾಗಿಟ್ಟುಕೊಂಡು ಯಾವುದೇ ಟ್ರೇಡ್ಮಾರ್ಕ್, ಪೇಟೆಂಟ್ ಬಳಸದೆ ಉಚಿತವಾಗಿ ಚಿಕಿತ್ಸೆ ನೀಡುತ್ತಿವೆ,” ಎಂದು ನ್ಯಾಯಪೀಠ ಪತಂಜಲಿಯ ಕಿವಿ ಹಿಂಡಿದ್ದಲ್ಲದೆ, ಆಗಸ್ಟ್ 21ರ ಒಳಗೆ ದಂಡ ಪಾವತಿಸುವಂತೆ ಕಟ್ಟಪ್ಪಣೆ ಮಾಡಿದೆ.
Comments are closed.