ರಾಷ್ಟ್ರೀಯ

ಲಾಕ್ ಡೌನ್ ಸಡಿಲಿಕೆಗೆ 6 ಶಿಫಾರಸುಗಳನ್ನು ನೀಡಿದ ನೀತಿ ಆಯೋಗ!

Pinterest LinkedIn Tumblr


ನವದೆಹಲಿ: ದೇಶಾದ್ಯಂತ ಮಾರಕ ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿದೆ. ಈಗಾಗಲೇ ದೇಶದಲ್ಲಿ ಸೋಂಕಿತರ ಸಂಖ್ಯೆ 35 ಸಾವಿರ ಗಡಿದಾಟಿದೆ. ಕೇಂದ್ರ ಸರ್ಕಾರ ಕೊರೊನಾ ನಿಯಂತ್ರಣ ಹಿನ್ನೆಲೆಯಲ್ಲಿ ಮೇ.17ವರೆಗೆ ಕೆಲವು ಸಡಿಲಿಕೆ ನೀಡಿ ಲಾಕ್ ಡೌನ್ ಮುಂದುವರಿಸಲಾಗಿದೆ. ಲಾಕ್ ಡೌನ್ ನಿಂದಾಗಿ ದೇಶದ ಅರ್ಥವ್ಯವಸ್ಥೆ ಕುಸಿದಿದ್ದು, ಆರ್ಥಿಕ ಪುನಶ್ಚೇತನ ಕೂಡ ಸವಾಲಾಗಿ ಪರಿಣಮಿಸಿದೆ.

ಈ ಮಧ್ಯೆ ಸರಕಾರದ ಚಿಂತಕರ ಛಾವಣಿಯಾದ ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್ ಅವರು ಕೊರೊನಾ ವೈರಸ್‌ ಬಿಕ್ಕಟ್ಟಿನಿಂದ ಪಾರಾಗಲು 6 ಅಂಶಗಳ ಯೋಜನೆಯನ್ನು ಪ್ರಸ್ತಾಪಿಸಿದ್ದರು.

ನೀತಿ ಆಯೋಗದ 6 ಅಂಶಗಳಿವು:
ರೆಡ್ ‌ಝೋನ್ಗಳಲ್ಲಿ ಕಟ್ಟುನಿಟ್ಟಿನ ಕಂಟೈನ್ಮೆಂಟ್: ಈಗಾಗಲೇ ಸರಕಾರವು ರೆಡ್‌ ಝೋನ್‌ಗಳನ್ನು ಪ್ರಕಟಿಸಿದೆ. ಸೋಂಕಿನ ತೀವ್ರತೆ ಹೆಚ್ಚಿರುವ ಪ್ರದೇಶಗಳನ್ನ ಗುರುತಿಸಿ ಸಂಪೂರ್ಣ ಕಟ್ಟುನಿಟ್ಟಾಗಿ ನಿರ್ಬಂಧ ಹೇರಬೇಕು.

ಸಾಮಾಜಿಕ ಅಂತರ, ಮಾಸ್ಕ್‌ ಫ್ಯಾಷನ್‌ ಆಗಲಿ: ಜನರು ಮಾಸ್ಕ್ ಧರಿಸುವುದು ಮತ್ತು ಹೊರಗೆ ದೈಹಿಕ ಅಂತರ ಪಾಲಿಸುವುದು ಕಡ್ಡಾಯವಾಗಬೇಕು. ಮತ್ತೆ ಕೆಲಸಕ್ಕೆ ತೆರಳುವುದು ಸಾಧ್ಯವಾದರೆ, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯ.

ಸೋಂಕು ತಿರುಗಿಬರಬಹುದು:ಕೊರೊನಾ ಸೋಂಕು ಯಾವಾಗ ಬೇಕಾದರೂ ತಿರುಗಿ ಬರಬಹುದು. ಈ ಕುರಿತು ತಜ್ಞರು, ವಿಶ್ವ ಆರೋಗ್ಯ ಸಂಸ್ಥೆ ಕೂಡ ಮತ್ತೆ ಮತ್ತೆ ಎಚ್ಚರಿಕೆ ನೀಡುತ್ತಿದೆ. ಲಾಕ್‌ಡೌನ್‌ ನಂತರವೂ ಇದು ಮತ್ತೆ ತಲೆ ಎತ್ತಬಹುದು ಎನ್ನಲಾಗಿದೆ.

ಹಿರಿಯರ ಕುರಿತು ನಿಗಾ: 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರ ಬಗ್ಗೆ ನಿಗಾ ಇಡುವುದು ಅತಿಮುಖ್ಯ. ಇವರಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಿರುವ ಕಾರಣ ಕೊರೊನಾ ವೈರಸ್‌ ಇವರಿಗೆ ಮಾರಣಾಂತಿಕ ಆಗಬಹುದು. ಡಯಾಬಿಟೀಸ್, ರಕ್ತದೊತ್ತಡ, ಉಸಿರಾಟದ ತೊಂದರೆ ಇರುವವರು ಹೆಚ್ಚು ಜಾಗೃತೆಯಿಂದ ಇರಬೇಕಾಗುತ್ತದೆ.

ಇನ್ನೂ ಲಸಿಕೆ ಇಲ್ಲ: ಕೋವಿಡ್-19ಗೆ ಇನ್ನು ಲಸಿಕೆ ಕಂಡು ಹಿಡಿದಿಲ್ಲ. ಹೀಗಾಗಿ ಮದ್ದು ಸಿದ್ದಗೊಳ್ಳುವವರೆಗೆ ಕೊರೊನಾ ವಿರುದ್ಧ ಹೋರಾಡುವುದು ಅನಿವಾರ್ಯ

ಆರ್ಥಿಕತೆಗೆ ಪುನಶ್ಚೇತನ: ಲಾಕ್‌ಡೌನ್‌ ಅನ್ನು ಹೀಗೆಯೇ ಮುಂದೂಡುತ್ತಾ ಹೋದರೆ. ಜಾಗತಿಕವಾಗಿ ನಾವು ಸಾಕಷ್ಟು ಹಿಂದುಳಿದುಬಿಡುತ್ತೇವೆ. ಹೀಗಾಗಿ ಆರ್ಥಿಕತೆಗೆ ಹಸಿರು ವಲಯಗಳಲ್ಲಿ ಆರ್ಥಿಕ ಚಟುವಟಿಕೆಗಳಿಗೆ ಮರುಚಾಲನೆ ನೀಡಬೇಕಿದೆ.

ಈ ಅಂಶಗಳನ್ನು ನೀತಿ ಆಯೋಗ ಕೇಂದ್ರದ ಮುಂದಿಟ್ಟಿದ್ದು, ಇದರ ಆಧಾರದ ಮೇರೆಗೆ ಲಾಕ್ ಡೌನ್ ಕುರಿತಂತೆ ಮುಂದಿನ ಕ್ರಮ ಕೈಗೊಂಡಿದೆ. ಇನ್ನು ಸದ್ಯ ಕೇಂದ್ರದ ಆರೋಗ್ಯ ಇಲಾಖೆ ಇಂದು ದೇಶದ 130 ಜಿಲ್ಲೆಗಳನ್ನು ರೆಡ್ ಝೋನ್ ಆಗಿ ಘೋಷಿಸಿ ಪರಿಷ್ಕೃತ ಪಟ್ಟಿಯನ್ನು ಪ್ರಕಟಿಸಿದೆ. ಇನ್ನು ಆರೆಂಜ್ ಝೋನ್ ನಲ್ಲಿ 294 ಜಿಲ್ಲೆಗಳಿದ್ದು, ಗ್ರೀನ್ ಜೋನ್ ನಲ್ಲಿ 319 ಜಿಲ್ಲೆಗಳಿವೆ.

Comments are closed.