ರಾಷ್ಟ್ರೀಯ

ಉತ್ತರಪ್ರದೇಶದ ದೇವಾಲಯವೊಂದರ ಬಳಿ ಇಬ್ಬರು ಅರ್ಚಕರ ಬರ್ಬರವಾಗಿ ಹತ್ಯೆ; ಆರೋಪಿ ಬಂಧನ, ಕೊಲೆಗೆ ಕಾರಣವೇನು?

Pinterest LinkedIn Tumblr

ಬುಲಂದ್‌ಶಹರ್: ಉತ್ತರ ಪ್ರದೇಶದಲ್ಲಿ ನಡೆದ ಹೇಯ ಕೃತ್ಯವೊಂದರಲ್ಲಿ ಮಂದಿರದ ಇಬ್ಬರು ಸಾಧುಗಳನ್ನು ಹತ್ಯೆಗೈಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಉತ್ತರ ಪ್ರದೇಶದ ಬುಲಂದ್‌ಶಹರ್‌ ಜಿಲ್ಲೆಯಲ್ಲಿ ಘಟನೆ ನಡೆದಿದೆ. ಇಬ್ಬರು ಸಾಧುಗಳ ಮೃತದೇಹವನ್ನು ಮಂದಿರದಿಂದ ಹೊರತೆಗೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅನೂಪ್‌ಶಹರ್ ಕೊತ್ವಾಲಿ ವ್ಯಾಪಿಯಲ್ಲಿರುವ ಪಗೋನಾ ಗ್ರಾಮದಲ್ಲಿ ಮಂಗಳವಾರ ಮುಂಜಾನೆ ಘಟನೆ ನಡೆದಿದೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘಟನೆ ಬಗ್ಗೆ ಹಿರಿಯ ಅಧಿಕಾರಿಗಳಿಂದ ವರದಿ ಕೇಳಿದ್ದಾರೆ. ಹಾಗೆಯೇ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದ್ದಾರೆ.

ಮೃತಪಟ್ಟ ಸಾಧುಗಳನ್ನು ಜಗದೀಶ್ ಅಲಿಯಾಸ್ ರಂಗಿ ದಾಸ್ (55) ಹಾಗೂ ಶೇರ್ ಸಿಂಗ್ ಅಲಿಯಾಸ್ ಸೇವಾ ದಾಸ್ (45) ಎಂದು ಗುರುತಿಸಲಾಗಿದೆ. ಇವರಿಬ್ಬರು ಸ್ಥಳೀಯ ಶಿವ ಮಂದಿರದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದರು.

ಹರಿತವಾದ ಆಯುಧವನ್ನು ಬಳಸಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ ಘಟನೆ ಸಂಬಂಧ ನೆರೆಯ ಗ್ರಾಮದಿಂದ ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯನ್ನು ಮುರಾರಿ ಅಲಿಯಾಸ್ ರಾಜು ಎಂದು ಗುರುತಿಸಲಾಗಿದೆ.

ಎರಡು ದಿನಗಳ ಹಿಂದೆ ಪುರೋಹಿತರ ಜೊತೆಗೆ ಈತನಿಗೆ ವಿವಾದ ಉಂಟಾಗಿತ್ತು. ಘಟನೆ ನಡೆದ ದಿನ ಬೆಳಗ್ಗೆ ಆರೋಪಿ ಆಯುಧವನ್ನು ಹಿಡಿದುಕೊಂಡು ಗ್ರಾಮದಿಂದ ಹೊರಟು ಹೋಗುವುದನ್ನು ಸ್ಥಳೀಯರು ಗುರುತಿಸಿದ್ದರು.

ಇತ್ತೀಚೆಗಷ್ಟೇ ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ಸಾಧುಗಳ ಹತ್ಯೆಗೈದಿರುವುದು ಭಾರಿ ಸಂಚಲವನ್ನುಂಟು ಮಾಡಿತ್ತು. ಇದಾದ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿ ಇಂತಹದೊಂದು ಕೃತ್ಯ ನಡೆದಿದೆ.

Comments are closed.