ರಾಷ್ಟ್ರೀಯ

ವಿದ್ಯಾರ್ಥಿನಿಯರ ಒಳ ಉಡುಪು ಬಿಚ್ಚಿಸಿ ‘ಮುಟ್ಟಿ’ನ ಪರೀಕ್ಷೆ..!

Pinterest LinkedIn Tumblr


ಭುಜ್ (ಗುಜರಾತ್): 21ನೇ ಶತಮಾನದಲ್ಲಿ, ಅದರಲ್ಲೂ ಶಿಕ್ಷಣ ನೀಡುವ ಸಂಸ್ಥೆಯಲ್ಲೇ ವಿದ್ಯಾರ್ಥಿನಿಯರ ಮುಟ್ಟಿನ ವಿಚಾರಕ್ಕೆ ಅಮಾನವೀಯ ನಿಯಮ ವಿಧಿಸಿರುವ ಪ್ರಕರಣ ಗುಜರಾತ್‌ನ ಭುಜ್‌ನಲ್ಲಿ ವರದಿಯಾಗಿದೆ. ಅಷ್ಟೇ ಅಲ್ಲ, ವಿದ್ಯಾರ್ಥಿನಿಯರು ಮುಟ್ಟಾಗಿದ್ದಾರೋ ಇಲ್ಲವೋ ಅನ್ನೋದನ್ನು ಪರೀಕ್ಷಿಸಲು ಅವರ ಒಳ ಉಡುಪುಗಳನ್ನು ತೆಗೆಸಿ ಪರೀಕ್ಷಿಸುತ್ತಿರುವ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ.

ಭುಜ್‌ನ ಶ್ರೀ ಶಾಜಾನಂದ್ ಬಾಲಕಿಯರ ಶಿಕ್ಷಣ ಕೇಂದ್ರದಲ್ಲಿ ಹಾಸ್ಟೆಲ್ ಸೌಲಭ್ಯವೂ ಇದೆ. ಇಲ್ಲಿ 68 ಪದವಿ ವಿದ್ಯಾರ್ಥಿನಿಯರು ವಾಸವಿದ್ದಾರೆ. ಭುಜ್‌ನ ಸ್ವಾಮಿ ನಾರಾಯಣ್ ಮಂದಿರದ ವತಿಯಿಂದ ನಡೆಸಲಾಗುವ ಈ ಹಾಸ್ಟೆಲ್‌ನಲ್ಲಿ ಸಂಪ್ರದಾಯವನ್ನು ಕಟ್ಟು ನಿಟ್ಟಾಗಿ ಪಾಲಿಸಲಾಗುತ್ತೆ. ಕುಗ್ರಾಮಗಳಿಂದ ಬಂದಿರುವ ಯುವತಿಯರೇ ಈ ಕಾಲೇಜ್‌ನ ಹಾಸ್ಟೆಲ್‌ನಲ್ಲಿ ವಾಸವಿದ್ದಾರೆ.

ಹಾಸ್ಟೆಲ್‌ನಲ್ಲಿ ಇರುವ ಯುವತಿಯರು ಒಂದು ವೇಳೆ ಋತುಮತಿಯಾದ್ರೆ, ಅವರು ದೇಗುಲಕ್ಕೆ ಹಾಗೂ ಅಡುಗೆ ಕೋಣೆಗೆ ಪ್ರವೇಶ ನೀಡುವಂತಿಲ್ಲ. ಇತರ ವಿದ್ಯಾರ್ಥಿನಿಯರನ್ನು ಮುಟ್ಟುವಂತಿಲ್ಲ. ಇಂಥಾ ನಿಯಮಗಳ ನಡುವೆಯೂ, ಹಾಸ್ಟೆಲ್‌ನ ಯುವತಿಯರು ಮುಟ್ಟಾಗಿದ್ದರೂ ಸಂಪ್ರದಾಯ ಪಾಲನೆ ಮಾಡುತ್ತಿಲ್ಲ ಎಂದು ಕಾಲೇಜ್‌ನ ಪ್ರಾಂಶುಪಾಲೆ ರೀಟಾ ಅವರಿಗೆ ಹಾಸ್ಟೆಲ್‌ನ ಆಡಳಿತ ಮಂಡಳಿ ದೂರು ನೀಡಿತ್ತು. ಇದರಿಂದ ಸಿಟ್ಟಿಗೆದ್ದ ಪ್ರಿನ್ಸಿಪಾಲ್ ಕಠಿಣ ಕ್ರಮಕ್ಕೆ ಮುಂದಾದರು.

ವಿದ್ಯಾರ್ಥಿನಿಯರ ಮೇಲೆ ಇಂಥಾದ್ದೊಂದು ದೂರು ಬಂದ ಕೂಡಲೇ ಸಿಟ್ಟಾದ ಪ್ರಿನ್ಸಿಪಾಲ್, ವಿದ್ಯಾರ್ಥಿನಿಯರಿಗೆ ಮನಬಂದಂತೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಕಾಲೇಜಿನಲ್ಲಿ ಪಾಠ ಪ್ರವಚನಗಳೆಲ್ಲಾ ನಿಲ್ಲಿಸಿ ಯುವತಿಯರನ್ನು ಕಾಲೇಜ್ ಕ್ಯಾಂಪಸ್‌ನಲ್ಲಿ ಸಾಲಾಗಿ ನಿಲ್ಲಿಸಿದ್ದಾರೆ. ಬಳಿಕ ಅವರಲ್ಲಿ ಯಾರು ಮುಟ್ಟಾಗಿದ್ದಾರೆ ಎಂದು ಕೇಳಿ ಪ್ರತ್ಯೇಕವಾಗಿ ನಿಲ್ಲಿಸಿದ್ದಾರೆ.

ಇಷ್ಟಾದ ಬಳಿಕ, ಯಾರೆಲ್ಲಾ ಮುಟ್ಟಾಗಿಲ್ಲ ಎಂದು ವಾದಿಸಿದರೋ ಅವರನ್ನೆಲ್ಲಾ ಶೌಚಾಲಯದ ಎದುರು ಸಾಲಾಗಿ ನಿಲ್ಲುವಂತೆ ಹೇಳಿದ್ದಾರೆ. ಬಳಿಕ ಒಬ್ಬೊಬ್ಬರಾಗಿ ಯುವತಿಯರನ್ನು ಶೌಚಾಲಯಕ್ಕೆ ಬರುವಂತೆ ಹೇಳಿ ಅವರ ಒಳ ಉಡುಪುಗಳನ್ನು ಬಿಚ್ಚಿಸಿದ್ದಾರೆ. ಅವರು ಮುಟ್ಟಾಗಿದ್ದಾರೋ ಇಲ್ಲವೋ ಅನ್ನೋದನ್ನು ಖುದ್ದಾಗಿ ಪರಿಶೀಲಿಸಿದ್ದಾರೆ. ಅದೃಷ್ಟವಶಾತ್ ಯಾವೊಬ್ಬ ವಿದ್ಯಾರ್ಥಿನಿಯೂ ಸುಳ್ಳು ಹೇಳಿಲ್ಲ ಅನ್ನೋದು ಮಹಿಳಾ ಪ್ರಾಧ್ಯಾಪಕರ ಅರಿವಿಗೆ ಬಂದಿದೆ. ಆದ್ರೆ, ಈ ರೀತಿ ಹಿಂಸೆ ಕೊಡೋದು ಯಾವ ಕಾನೂನಿನಲ್ಲಿದೆ ಅನ್ನೋದು ವಿದ್ಯಾರ್ಥಿನಿಯರ ಪ್ರಶ್ನೆ. ಇಂಥಾದ್ದೊಂದು ಅಮಾನವೀಯ ಕೃತ್ಯಕ್ಕೆ ಕಾಲೇಜ್‌ನ ಪ್ರಾಂಶುಪಾಲೆ, ಹಾಸ್ಟೆಲ್‌ ವಾರ್ಡನ್ ಹಾಗೂ ಕಾಲೇಜ್‌ನ ಟ್ರಸ್ಟಿ ಕೂಡಾ ಕೈಜೋಡಿಸಿದ್ದಾರೆ ಅನ್ನೋದು ವಿದ್ಯಾರ್ಥಿನಿಯರ ಆರೋಪ.

ಧಾರ್ಮಿಕ ನೀತಿ ನಿಯಮಗಳನ್ನು ಪಾಲನೆ ಮಾಡಲೇಬೇಕು ಎಂದು ಕಾಲೇಜು ಹಾಗೂ ಹಾಸ್ಟೆಲ್ ಸಿಬ್ಬಂದಿ ಒತ್ತಡ ಹೇರುತ್ತಾರೆ ಎಂದು ಅಳಲು ತೋಡಿಕೊಂಡಿರುವ ವಿದ್ಯಾರ್ಥಿನಿಯರು, ಮುಟ್ಟಿನ ಅನುಮಾನ ಬಂದ ಕೂಡಲೇ ನಮ್ಮ ಒಳ ಉಡುಪು ಬಿಚ್ಚಿಸಿ ಪರೀಕ್ಷಿಸೋದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸುತ್ತಾರೆ. ಆದ್ರೆ, ಈ ಪ್ರಕರಣದ ಬಗ್ಗೆ ಈವರೆಗೂ ಅಧಿಕೃತವಾಗಿ ದೂರು ದಾಖಲಾಗಿಲ್ಲ. ಹಾಸ್ಟೆಲ್‌ ವಾರ್ಡನ್‌ ಹಾಗೂ ಪ್ರಾಂಶುಪಾಲೆಯ ಈ ವರ್ತನೆ ಪ್ರಶ್ನಿಸಿ ಪ್ರತಿಭಟನೆ ಮಾಡಲು ಮುಂದಾದಾಗ ಕಾಲೇಜ್‌ನ ಟ್ರಸ್ಟಿ ಪ್ರವೀಣ್ ಬೆದರಿಕೆ ಹಾಕಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ವಿದ್ಯಾರ್ಥಿನಿಯರಿಂದ ಮುಚ್ಚಳಿಕೆ ಬರೆಸಿಕೊಂಡಿದ್ದಾರೆ.

ಕಾಲೇಜು ಆಡಳಿತ ಮಂಡಳಿಯ ಈ ಹುಚ್ಚಾಟದ ವಿರುದ್ಧ ದನಿ ಎತ್ತಿದರೆ, ನೇರವಾಗಿ ವಿದ್ಯಾರ್ಥಿನಿಯರ ಪೋಷಕರನ್ನೇ ಹಾಸ್ಟೆಲ್‌ಗೆ ಕರೆಸುತ್ತಾರಂತೆ. ಪೋಷಕರ ಎದುರು ಧಾರ್ಮಿಕ ಮೌಲ್ಯಗಳ ಭಾಷಣ ಮಾಡಿ, ಧಾರ್ಮಿಕವಾಗಿ, ಮಾನಸಿಕವಾಗಿ ಅವರನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಭಾವನಾತ್ಮಕವಾಗಿ ಹಿಡಿದಿಡುತ್ತಾರೆ. ಹೀಗಾಗಿ ಪೋಷಕರು ನಮ್ಮ ವಿರುದ್ಧವೇ ಸಿಟ್ಟಾಗುತ್ತಾರೆ ಎಂದು ಅಳಲು ತೋಡಿಕೊಳ್ತಾರೆ ವಿದ್ಯಾರ್ಥಿನಿಯರು.

ವಿಜಯ ಕರ್ನಾಟಕದ ಸಹೋದರ ಸಂಸ್ಥೆ ಮಿರರ್ ಈ ಸಂಬಂಧ ಕಾಲೇಜ್‌ನ ಟ್ರಸ್ಟಿ ಪ್ರವೀಣ್ ಪಿಂಡೋರಿಯಾ ಅವರನ್ನು ಸಂಪರ್ಕಿಸಲು ಯತ್ನಿಸಿತು. ಕಾಲೇಜ್‌ನ ಪ್ರಾಂಶುಪಾಲೆ ರೀಟಾ ಅವರನ್ನೂ ಸಂಪರ್ಕಿಸಿತು. ಆದ್ರೆ, ಯಾರೊಬ್ಬರೂ ಪ್ರತಿಕ್ರಿಯೆಗೆ ಸಿಗುತ್ತಿಲ್ಲ.

ಈ ಕಾಲೇಜ್‌ನ ಮತ್ತೊಬ್ಬ ಟ್ರಸ್ಟಿ ಹಿರಾನಿ ಎಂಬುವರು ಮಿರರ್‌ನ ಸಂಪರ್ಕಕ್ಕೆ ಸಿಕ್ಕಿದ್ದಾರೆ. ಅವರ ಪ್ರಕಾರ ಕಾಲೇಜ್, ಹಾಸ್ಟೆಲ್‌ ಹಾಗೂ ದೇಗುಲ ಒಂದೇ ಕ್ಯಾಂಪಸ್‌ನಲ್ಲಿ ಇರೋದ್ರಿಂದ ವಿದ್ಯಾರ್ಥಿನಿಯರು ಕೆಲವೊಂದು ನಿಯಮ ಪಾಲಿಸಬೇಕು. ಆದ್ರೆ, ಒಳ ಉಡುಪು ಬಿಚ್ಚಿಸುವಂತಾ ಅಮಾನವೀಯ ಘಟನೆ ನಡೆದಿರೋದು ಸರಿಯಲ್ಲ ಎಂದಿರುವ ಅವರು, ಈ ಕುರಿತು ಕ್ರಮ ಕೈಗೊಳ್ಳೋದಾಗಿ ಭರವಸೆ ನೀಡಿದ್ಧಾರೆ. ಇದೀಗ ಘಟನೆ ಸಂಬಂಧ ತನಿಖಾ ಸಮಿತಿ ನೇಮಕವಾಗಿದೆ.

Comments are closed.