ರಾಷ್ಟ್ರೀಯ

ನಿರ್ಭಯಾ ಪ್ರಕರಣದ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಇನ್ನಷ್ಟು ದೂರ

Pinterest LinkedIn Tumblr


ಹೊಸದಿಲ್ಲಿ: ನಿರ್ಭಯಾ ಹಂತಕರಿಗೆ ಗಲ್ಲು ಶಿಕ್ಷೆ ಜಾರಿಯಾಗೋದು ಏಕೆ ತಡವಾಗುತ್ತಿದೆ ಎಂದು ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಮನವಿಯ ತೀರ್ಪನ್ನು ದಿಲ್ಲಿ ಹೈಕೋರ್ಟ್‌ ಕಾಯ್ದಿರಿಸಿದೆ. ವಾದ-ಪ್ರತಿವಾದ ಮುಗಿದ ಬಳಿಕವಷ್ಟೇ ತೀರ್ಪು ನೀಡೋದಾಗಿ ನ್ಯಾಯಪೀಠ ಹೇಳಿದೆ. ಈ ಮೂಲಕ, ನಿರ್ಭಯಾ ಆತ್ಮಕ್ಕೆ ಶಾಂತಿ ಸಿಗುವ ದಿನಗಳು ಮತ್ತಷ್ಟು ದೂರವಾಗಿದೆ.

ಅಪರಾಧಿಗಳ ಪರ ವಕೀಲರ ನಡೆ ದುರುದ್ದೇಶಪೂರ್ವಕವಾಗಿದೆ, ಪಕ್ಕಾ ಲೆಕ್ಕಾಚಾರದಿಂದ ಕೂಡಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ದಿಲ್ಲಿ ಹೈಕೋರ್ಟ್‌ ಎದುರು ವಾದ ಮಂಡಿಸಿದರು. ಕಾನೂನು ಪ್ರಕ್ರಿಯೆಯ ದುರುಪಯೋಗಪಡಿಸಿಕೊಳ್ಳುವ ಮೂಲಕ, ಗಲ್ಲು ಶಿಕ್ಷೆಯನ್ನು ವಿಳಂಬಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಮೆಹ್ತಾ ಹರಿಹಾಯ್ದರು. ಅಪರಾಧಿಗಳ ಎಲ್ಲಾ ಕಾನೂನು ಹೋರಾಟಗಳೂ ಅಂತ್ಯಗೊಳ್ಳುವವರೆಗೂ ಗಲ್ಲು ಶಿಕ್ಷೆ ವಿಧಿಸುವಂತಿಲ್ಲ ಎಂಬ ಕಾನೂನನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಮೆಹ್ತಾ ವಾದಿಸಿದರು.

ಮೆಹ್ತಾ ಅವರ ವಾದಕ್ಕೆ ಸಾಕ್ಷಿಯೆಂಬಂತೆ ಅಪರಾಧಿ ಪವನ್ ಗುಪ್ತಾ ಇನ್ನೂ ಕೂಡಾ ಸುಪ್ರೀಂ ಕೋರ್ಟ್‌ಗೆ ತನ್ನ ಕ್ಯುರೇಟಿವ್ ಅರ್ಜಿ ಸಲ್ಲಿಸಿಲ್ಲ. ರಾಷ್ಟ್ರಪತಿಗಳಿಗೆ ಕ್ಷಮಾದಾನ ಅರ್ಜಿಯನ್ನೂ ಸಲ್ಲಿಸಿಲ್ಲ. ಇದು ದುರುದ್ದೇಶಪೂರಿತವಾದ ನಡೆ ಎಂದು ಜಸ್ಟೀಸ್ ಸುರೇಶ್ ಕೈತ್ ಅವರಿಗೆ ಮೆಹ್ತಾ ವಿವರಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನಾಲ್ವರು ಅಪರಾಧಿಗಳ ಪರ ವಕೀಲ ಎ. ಪಿ. ಸಿಂಗ್, ದಿಲ್ಲಿ ಹೈಕೋರ್ಟ್‌ ಈ ಪ್ರಕರಣದಲ್ಲಿ ಮಾತ್ರ ಏಕೆ ತರಾತುರಿ ಪ್ರದರ್ಶನ ಮಾಡುತ್ತಿದೆ ಎಂದು ಪ್ರಶ್ನಿಸಿದರು. ಗಲ್ಲು ಶಿಕ್ಷೆಗೆ ತಡೆ ನೀಡಿರುವುದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿರುವ ಕೇಂದ್ರ ಸರ್ಕಾರದ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ ಸಿಂಗ್, ತರಾತುರಿಯಲ್ಲಿ ನೀಡುವ ನ್ಯಾಯದಾನವನ್ನು ನ್ಯಾಯದ ಸಮಾಧಿ ಮಾಡಿದಂತೆ ಎಂದು ಬಣ್ಣಿಸಿದರು.

ಅಪರಾಧಿಗಳು ಬಡವರು, ಗ್ರಾಮೀಣ ಭಾಗದಿಂದ ಬಂದವರು ಹಾಗೂ ದಲಿತ ಕುಟುಂಬಕ್ಕೆ ಸೇರಿದವರು. ಕಾನೂನನ್ನು ದುರ್ಬಳಕೆ ಮಾಡಿಕೊಂಡು ಅವರನ್ನು ಮುಗಿಸಬೇಡಿ ಎಂದು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡರು.

ಕೆಳ ನ್ಯಾಯಾಲಯಗಳಲ್ಲಿ ಪ್ರಕರಣದ ವಿಚಾರಣೆ ನಡೆಯುವ ವೇಳೆ ಕೇಂದ್ರ ಸರ್ಕಾರ ಎಂದಿಗೂ ಪ್ರತಿವಾದಿಯಾಗಿ ಇರಲಿಲ್ಲ. ಆದ್ರೆ, ಕಳೆದ 2 ದಿನಗಳಿಂದ ಕೇಂದ್ರ ಸರ್ಕಾರ ಎಚ್ಚೆತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗಲ್ಲು ಶಿಕ್ಷೆ ಏಕೆ ತಡವಾಗುತ್ತಿದೆ ಎಂದು ಪ್ರಶ್ನಿಸುತ್ತಿದೆ ಎಂದು ನಾಲ್ಕನೇ ಅಪರಾಧಿ ಮುಕೇಶ್ ಕುಮಾರ್ ಪರ ವಕೀಲರಾದ ರಿಬೆಕಾ ಜಾನ್ ವಾದಿಸಿದರು.

Comments are closed.