ರಾಷ್ಟ್ರೀಯ

ವಿದೇಶಿ ಈರುಳ್ಳಿಯನ್ನು ಕೆ.ಜಿ.ಗೆ 22 ರಿಂದ 23 ರೂಪಾಯಿಗೆ ಮಾರಲು ಕೇಂದ್ರ ನಿರ್ಧಾರ

Pinterest LinkedIn Tumblr


ಹೊಸದಿಲ್ಲಿ: ದೇಶದಲ್ಲಿ ಈರುಳ್ಳಿ ಬೆಲೆ ಗಗನಕ್ಕೇರಿದ ಹಿನ್ನೆಲೆಯಲ್ಲಿ ವಿದೇಶದಿಂದ ಆಮದು ಮಾಡಿಕೊಳ್ಳಲಾಗಿತ್ತು. ಆದರೆ ಈ ಈರುಳ್ಳಿಯೀಗ ಯಾರಿಗೂ ಬೇಡವಾಗಿದೆ. ಬಂದರುಗಳಲ್ಲಿ ಟನ್‌ಗಟ್ಟಲೆ ಈರುಳ್ಳಿ ಕೊಳೆಯುತ್ತಿದ್ದು ದಿಕ್ಕು ತೋಚದ ಕೇಂದ್ರ ಸರಕಾರವೀಗ ಇವುಗಳನ್ನು ರಿಯಾಯಿತಿ ಬೆಲೆಯಲ್ಲಿ ಮಾರಾಟ ಮಾಡಲು ಮುಂದಾಗಿದೆ.

ಆಮದು ಮಾಡಿಕೊಂಡ ಈರುಳ್ಳಿಯನ್ನು ಕೆ.ಜಿ.ಗೆ 22 ರಿಂದ 23 ರೂಪಾಯಿಗೆ ಮಾರಾಟ ಮಾಡಲು ಕೇಂದ್ರ ಸರಕಾರ ಮುಂದಾಗಿದೆ. ಇದು ಖರೀದಿ ಬೆಲೆಗಿಂತ ಶೇಕಡಾ 60 ರಷ್ಟು ಕಡಿಮೆಯಾಗಿದೆ.

ಸದ್ಯ ಕೇಂದ್ರ ಸರಕಾರ ರಾಜ್ಯಕ್ಕೆ ಕೆ.ಜಿ.ಗೆ 58 ರೂಪಾಯಿಯಂತೆ ಈರುಳ್ಳಿಯನ್ನು ಮಾರಾಟ ಮಾಡುತ್ತಿದೆ. ಜೊತೆಗೆ ಸಾಗಾಣಿಕೆ ವೆಚ್ಚವನ್ನೂ ಭರಿಸುತ್ತಿದೆ. ಆದರೆ ಯಾವುದೇ ರಾಜ್ಯಕ್ಕೂ ಈಗ ವಿದೇಶಿ ಈರುಳ್ಳಿ ಬೇಡವಾಗಿದೆ. ಹೀಗಾಗಿ ದರ ಇಳಿಕೆ ಅನಿವಾರ್ಯವಾಗಿದೆ.

14,000 ಟನ್‌ ಆಮದು

ಬೆಲೆ ಏರಿಕೆ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಸಾರ್ವಜನಿಕ ಸ್ವಾಮ್ಯದ ಎಂಎಂಟಿಸಿ ಮೂಲಕ 1.2 ಲಕ್ಷ ಟನ್‌ ಈರುಳ್ಳಿ ಆಮದಿಗೆ ನಿರ್ಧರಿಸಿತ್ತು. ಸರಕಾರದ ಸೂಚನೆ ಮೇರೆಗೆ 40,000 ಟನ್‌ಗೆ ಬೇಡಿಕೆ ಇಟ್ಟಿದ್ದ ಎಂಎಂಟಿಸಿ ಕೊನೆಗೆ 14,000 ಟನ್‌ ಈರುಳ್ಳಿಯನ್ನು ವಿದೇಶಿ ಮಾರುಕಟ್ಟೆಯಿಂದ ಖರೀದಿಸಿತ್ತು.

ಮೂಲಗಳ ಪ್ರಕಾರ ಈ ಈರುಳ್ಳಿ ಬಂದರಿನಲ್ಲಿ ಕೊಳೆಯುತ್ತಾ ಬಿದ್ದಿದೆ. ಅದರಲ್ಲೂ ಮಹಾರಾಷ್ಟ್ರದಲ್ಲಿ ಹೆಚ್ಚಿನ ಪ್ರಮಾಣದ ಈರುಳ್ಳಿ ಕೇಳುವವರಿಲ್ಲದೆ ಮೂಲೆ ಸೇರಿದೆ. ದೇಸಿ ಈರುಳ್ಳಿ ಮಾರುಕಟ್ಟೆಗೆ ಬಂದು ಬೆಲೆ ಇಳಿಯುತ್ತಿದ್ದಂತೆ ರಾಜ್ಯಗಳೀಗ ತಮ್ಮ ಬೇಡಿಕೆಯನ್ನು ಹಿಂಪಡೆದಿದ್ದು ಇದಕ್ಕೆಲ್ಲಾ ಮೂಲ ಕಾರಣ.

ಹೀಗಾಗಿ ದಾರಿ ಕಾಣದೆ ಕೇಂದ್ರ ಸರಕಾರ ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಮುಂದಾಗಿದ್ದು ನಾಫೆಡ್‌, ಮದರ್‌ ಡೈರಿ ಮೊದಲಾದ ಸಂಸ್ಥೆಗಳು ಮತ್ತು ಸರಕಾರ ಕೆ.ಜಿ.ಗೆ 22 ರಿಂದ 23 ರೂಪಾಯಿಗೆ ಈರುಳ್ಳಿ ಖರೀದಿಸಬಹುದಾಗಿದೆ. ನಂತರ ಇವುಗಳನ್ನು ಗ್ರಾಹಕರಿಗೆ ಮಾರಾಟ ಮಾಡಬಹುದಾಗಿದೆ.

ದೇಶದಲ್ಲಿ ಖಾರಿಫ್‌ ಮತ್ತು ರಾವಿ ಎರಡೂ ಋತುಗಳಲ್ಲಿ ಈರುಳ್ಳಿ ಬೆಳೆಯಲಾಗುತ್ತದೆ. ಆದರೆ ಪ್ರವಾಹದಿಂದ ಖಾರಿಫ್‌ ಋತುವಿನ ಈರುಳ್ಳಿ ಉತ್ಪಾದನೆ ಶೇಕಡಾ 22 ರಷ್ಟು ನಷ್ಟವಾಗಿತ್ತು. ಈ ಹಿನ್ನೆಲೆಯಲ್ಲಿ ಈರುಳ್ಳಿ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿತ್ತು.

Comments are closed.